ಮಹಿಳೆ ಸಾವು, ಉಳಿದವರ ಸ್ಥಿತಿ ಗಂಭೀರ

ರಾಮನಗರ: ಸಾಲಬಾಧೆ (Loan) ತಾಳಲಾರದೆ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನಿಸಿರುವ (Suicide Attempt) ಹೃದಯವಿದ್ರಾವಕ ಘಟನೆ ರಾಮನಗರದಲ್ಲಿ (Ramanagara) ನಡೆದಿದೆ.
ಹುಟ್ಟೂರು ಬಿಟ್ಟುರೂ ಬೆಂಬಿಡದ ಸಾಲಗಾರ ಕಾಟಕ್ಕೆ ಒಂದೇ ಕುಟುಂಬದ 7 ಜನರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದರಿಂದ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಇನ್ನು ಜಗತ್ತನ್ನೇ ಅರಿಯದ ಮೂರು ಮುದ್ದು ಕಂದಮ್ಮಗಳು ಸೇರಿದಂತೆ 6 ಮಂದಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಮೂಲತಃ ರಾಮನಗರ ತಾಲೂಕಿನ ಕುಂಬಳಗೂಡು ನಿವಾಸಿ ರಾಜು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಅಲ್ಲದೇ ವಿಪರೀತ ಸಾಲ ಮಾಡಿಕೊಂಡಿದ್ದ. ಸಾಲಗಾರರ ಕಾಟಕ್ಕೆ ಹುಟ್ಟೂರು ತೊರೆದು ಅತ್ತೆ ಮನೆ ದೊಡ್ಡಮಣ್ಣುಗುಡ್ಡೆ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದ. ಹುಟ್ಟೂರು ತೊರೆದರೂ ರಾಜುಗೆ ಸಾಲಗಾರರ ಕಾಟ ಮಾತ್ರ ತಪ್ಪಿರಲಿಲ್ಲ. ಪಡೆದ ಹಣಕ್ಕೆ ಬಡ್ಡಿಯನ್ನು ಕಟ್ಟಲಾಗದ ಬಡ ಕುಟುಂಬ, ಸಾಲ ಪಡೆದವರಿಂದ ನಿರಂತರ ಕಿರುಕುಳಕ್ಕೆ ಒಳಗಾಗಿ ಬೇಸತ್ತಿದ್ದ. ಕೊನೆಗೆ ಸಾಲಕ್ಕೆ ಹೆದರಿ ಇಡೀ ಕುಟುಂಬದ ಜನರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಗುರುವಾರ ಮಧ್ಯಾಹ್ನ ಇಡೀ ಕುಟುಂಬ ಆತ್ಮಹತ್ಯೆಯ ನಿರ್ಧಾರ ಮಾಡಿತ್ತು. ಊರ ಹೊರಗಿದ್ದ ರಾಜು ಮಾವನ ಸಮಾಧಿ ಬಳಿಗೆ ತೆರಳಿದ್ದ ಕುಟುಂಬ, ಊಟ ಹಾಗೂ ತಿಂಡಿಗಳ ಜೊತೆ ಇಲಿ ಪಾಷಾಣ ಸೇವಿದ್ದಾರೆ. ಬಳಿಕ ಸಕ್ಕರೆ ಅಚ್ಚು, ಬಾಳೆ ಹಣ್ಣು ತಿಂದಿದ್ದರು. ತಲಾ 2 ಪ್ಯಾಕೆಟ್ ಇಲಿ ಪಾಷಾಣ ಸೇವಿಸಿದ್ದ 7 ಮಂದಿ ಸಾವಿಗಾಗಿ ಕಾದು ಸಮಾಧಿ ಬಳಿಯೇ ಕೆಲಕಾಲ ಕುಳಿತಿದ್ದರು.
ಕೆಲ ಹೊತ್ತಿನ ಬಳಿಕ ರಾಜು ಪತ್ನಿ ಮಂಗಳಮ್ಮ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ. ಉಳಿದವರು ಸಂಕಟ ತಾಳಲಾರದೆ ಅಲ್ಲಿಂದ ಹೊರಟು ಊರ ಕಡೆಗೆ ಬಂದು ಗ್ರಾಮದ ಜನರಿಗೆ ವಿಷ ಸೇವಿಸಿರುವುದಾಗಿ ತಿಳಿಸಿದ್ದಾರೆ. ಗ್ರಾಮಸ್ಥರು ತಕ್ಷಣವೇ ಅಸ್ವಸ್ಥರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಡ್ಯ ಮೀಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.

ರಾಜು ಪತ್ನಿ ಮಂಗಳಮ್ಮ (28) ಸಾವನ್ನಪ್ಪಿದ್ದರೆ, ರಾಜು(31), ಅತ್ತೆ ಸೊಲ್ಲಾಪುರದಮ್ಮ (48), ಮಕ್ಕಳಾದ ಆಕಾಶ್ (9), ಕೃಷ್ಣ (13), ಹಾಗೂ ಮಂಗಳಮ್ಮ ತಂಗಿ ಸವಿತಾ (24), ಸವಿತಾ ಮಗಳು ದರ್ಶಿನಿ (4) ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ತಾನು ಮಾತ್ರ ಸತ್ತರೆ ಕುಟುಂಬಸ್ಥರಿಗೆ ಸಾಲಗಾರರ ಕಾಟ ತಪ್ಪುವುದಿಲ್ಲ ಎಂದು ಎಲ್ಲರಿಗೂ ವಿಷವುಣಿಸುವ ನಿರ್ಧಾರ ರಾಜು ಮಾಡಿದ್ದ. ಸದ್ಯ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ರಾಜು ಸಾಲಗಾರರ ಕಾಟಕ್ಕೆ ಈ ರೀತಿಯ ತೀರ್ಮಾನ ಮಾಡಿದ್ದ. ನನ್ನ ತಮ್ಮ ಹಾಗೂ ಸ್ನೇಹಿತರು ಸೇರಿ ಸಾಲವನ್ನು ನನ್ನ ಮೇಲೆ ಹೊರಿಸಿದ್ದಾರೆ ಎಂದಿದ್ದಾನೆ.
ಒಟ್ಟಾರೆ ಸಾಲದ ಶೂಲಕ್ಕೆ ಸಿಲುಕಿದ ರಾಜು ಏನೂ ಅರಿಯದ ಮಕ್ಕಳನ್ನೂ ಸಹ ಸಾವಿನ ದವಡೆಗೆ ನೂಕಿದ್ದಾನೆ. ಮಾಡದ ತಪ್ಪಿಗೆ ರಾಜು ಕುಟುಂಬ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.