

ಮಂಗಳೂರು: ಸುರತ್ಕಲ್(Surathkal) ಕಾಟಿಪಳ್ಳದಲ್ಲಿ ವ್ಯಕ್ತಿಯ ಕೊಲೆ ನಡೆದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144ರ(Section 144) ಅನ್ವಯ ನಿಷೇಧಾಜ್ಞೆ ಜಾರಿಯಾಗಿದೆ.
ಡಿ.27ರ ಮುಂಜಾನೆ 6 ಗಂಟೆಯವರೆಗೆ ಸುರತ್ಕಲ್, ಪಣಂಬೂರು, ಕಾವೂರು, ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಮಂಗಳೂರು(Mangaluru) ನಗರ ಪೊಲೀಸ್ ಕಮಿಷನರ್ ಶಶಿಕುಮಾರ್(Shashi Kumar) ಆದೇಶ ಪ್ರಕಟಿಸಿದ್ದಾರೆ.
ಇಬ್ಬರು ದುಷ್ಕರ್ಮಿಗಳು ಜಲೀಲ್(40) ಅವರ ಎದೆಯ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಶನಿವಾರ ಸಂಜೆ ಜಲೀಲ್(Jaleel) ಅಂಗಡಿಯಲ್ಲಿ ಕುಳಿತಿದ್ದಾಗ ಅಂಗಡಿಯ ಪಕ್ಕದ ರಸ್ತೆಯಲ್ಲಿ ದ್ವಿಚಕ್ರವಾಹನವನ್ನು ಇಟ್ಟು ಏಕಾಏಕಿ ಚೂರಿ ಇರಿದು ಪರಾರಿಯಾಗಿದ್ದರು.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಲೀಲ್ ಅವರ ಎದೆಯ ಭಾಗ ಮತ್ತು ಬೆನ್ನಿಗೆ ಹರಿತವಾದ ಚೂರಿಯಿಂದ ಇರಿದಿದ್ದು, ಅವರ ಬೆನ್ನಿನಲ್ಲಿದ್ದ ಚೂರಿಯನ್ನು ತೆಗೆದ ಫಾರೂಕ್ ಅವರು ತಕ್ಷಣ ಕಾರಿನಲ್ಲಿ ಮುಕ್ಕದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಜಲೀಲ್ ಮೃತಪಟ್ಟಿದ್ದಾರೆ.
ಮೃತ ಜಲೀಲ್ ಕೃಷ್ಣಾಪುರ 9ನೇ ಬ್ಲಾಕ್ ನಿವಾಸಿಯಾಗಿದ್ದು ನೈತಂಗಡಿಯಲ್ಲಿ ಫ್ಯಾನ್ಸಿ ಮತ್ತು ಚಪ್ಪಲಿಯ ಅಂಗಡಿ ನಡೆಸುತ್ತಿದ್ದರು.
ಮದ್ಯ ಮಾರಾಟ ನಿಷೇಧ: ಅಲ್ಲದೆ ಈ ಸಮಯದಲ್ಲಿ ನಗರ ಕಮಿಷನರೇಟ್ ವ್ಯಾಪ್ತಿಯ ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ರಾತ್ರಿ ಸಂಚಾರ ನಿಷೇಧ: ಮುಂಜಾಗೃತಾ ಕ್ರಮವಾಗಿ ದಿನಾಂಕ 25 ಮತ್ತು 26ರಂದು ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಠಾಣಾ ವ್ಯಾಪ್ತಿಯ ಎಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಕರ್ತವ್ಯದ ಪಾಳಿಯನ್ನು ಸಂಜೆ 6 ಗಂಟೆಯ ಒಳಗಾಗಿ ಬದಲಾಯಿಸುವಂತೆ ಮತ್ತು ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಸಿಬ್ಬಂದಿಯವರು ರಸ್ತೆಯಲ್ಲಿ ಸಂಚರಿಸಬಾರದು ಎಂದು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.