
ಬೆಂಗಳೂರು: ಭಾರತ ಸರ್ಕಾರವು ಪಿಎಫ್ಐ (PFI) ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ಕಾನೂನು ಬಾಹಿರ (Unlawful) ಎಂದು ಘೋಷಿಸಿ ಐದು ವರ್ಷಗಳ ಅವಧಿಗೆ ನಿಷೇಧಿಸಿರುವ (PFI Ban) ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಇಲಾಖೆಯ ಮುಖ್ಯಸ್ಥರಾದ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಪೊಲೀಸರಿಗೆ ಸೂಚಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮುಸ್ಲಿಂ ಮುಖಂಡರೊಂದಿಗೆ ಮಾತನಾಡಿ, ಸ್ಥಳೀಯವಾಗಿ ಶಾಂತಿ ಸಭೆಗಳನ್ನು ನಡೆಸಲು ಸೂಚಿಸಲಾಗಿದೆ. ಶಾಂತಿ ಕದಡಲು ಯತ್ನಿಸುವವರನ್ನು ವಶಕ್ಕೆ ಪಡೆಯುವಂತೆ ಸೂಚಿಸಲಾಗಿದೆ.
ಗಸ್ತು ಹೆಚ್ಚಿಸುವುದೂ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಕ್ಕಾಗಿ ಕೇಂದ್ರ ಸರ್ಕಾರದಿಂದ ಆದೇಶ ಬಂದಿದೆ. ಶೀಘ್ರದಲ್ಲಿಯೇ ಈ ಸಂಬಂಧ ಕರ್ನಾಟಕ ಸರ್ಕಾರದ ಆದೇಶವೂ ಬರುತ್ತದೆ. ಮುಸ್ಲಿಂ ಸಮುದಾಯದ ನಾಯಕರನ್ನು ಸಂಪರ್ಕಿಸಿ, ಸಭೆಗೆ ಕರೆಯಿತು. ಶಾಂತಿ ಕಾಪಾಡುವಂತೆ ಸಂದೇಶ ನೀಡಲು ಕೋರಿ. ಅವರು ಹೇಳಿಕೆ ನೀಡುವಾಗಿ ಎಚ್ಚರ ವಹಿಸುವಂತೆ ಸೂಚಿಸಿ. ಅಹಿತಕರ ಘಟನೆಗಳನ್ನು ನಡೆಸಲು ಯತ್ನಿಸಿದರೆ ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಶಾಂತಿ ಕದಡುವ ಕೆಲಸ ಅಗಬಾರದು ಎಂದು ಹೇಳಿದರು.
ಪಿಎಫ್ಐ ನಿಷೇಧ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ನಿಗಾ ವಹಿಸುವಂತೆ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ನೀಡಿದ್ದಾರೆ. ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಟ್ಯಾನರಿ ರಸ್ತೆ, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಶಿವಾಜಿನಗರದಲ್ಲಿ ಗಸ್ತು ಆರಂಭಿಸಿ. ಮುಸ್ಲಿಂ ಮುಖಂಡರ ಜೊತೆಗೆ ಮಾತನಾಡುವಂತೆ ಸೂಚಿಸಿದ್ದಾರೆ. ನಗರದಲ್ಲಿರುವ ಎಲ್ಲ ಪಿಎಫ್ಐ ಕಚೇರಿಗಳಿಗೆ ಬೀಗಮುದ್ರೆ ಹಾಕುವಂತೆ ಸೂಚಿಸಲಾಗಿದೆ.