

ಹುಬ್ಬಳ್ಳಿ: ಲಂಚದ ಹಣದಲ್ಲೇ ಬಿಜೆಪಿಯವರು ಜನಸ್ಪಂದನಾ (Janaspandana) ಕಾರ್ಯಕ್ರಮ ಮಾಡ್ತಿದ್ದಾರೆ, ಸಂಕಷ್ಟದಲ್ಲಿರೋ ಜನರಿಗೆ ಸ್ಪಂದಿಸೋದು ಬಿಟ್ಟು ಡ್ಯಾನ್ಸ್ ಮಾಡ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಬಿಜೆಪಿ (BJP) ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಲಂಚದ ಹಣದಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡ್ತಿದಾರೆ. ರಾಜ್ಯದಲ್ಲಿ ಮಳೆ ಬಂದು ಸಾಕಷ್ಟು ಸಮಸ್ಯೆ ಆಗಿದೆ. ಸುಮಾರು 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಬೆಂಗಳೂರಿನಲ್ಲೂ ಸಹ ಮಳೆಯಿಂದಾಗಿ ಸಮಸ್ಯೆಯಾಗಿದೆ. ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರೋ ಜನರಿಗೆ ಸ್ಪಂದನೆ ಮಾಡೋದು ಬಿಟ್ಟು ಡ್ಯಾನ್ಸ್ (Dance) ಮಾಡ್ತಿದಾರೆ ಎಂದು ಕಿಡಿಕಾರಿದ್ದಾರೆ.
ಉಮೇಶ ಕತ್ತಿಯವರು ಉತ್ತರ ಕರ್ನಾಟಕದ (Uttar Karnataka) ರಾಜಕಾರಣಿ, ಅವರದ್ದೇ ಪಕ್ಷದ ಪ್ರಭಾವಿ. ಅವರ ನಿಧನದ ಹಿನ್ನೆಲೆಯಲ್ಲಿ ಒಂದು ಕಡೆ ಶೋಕಾಚರಣೆ ಮಾಡ್ತೀವಿ ಅಂತಾರೆ. ಮತ್ತೊಂದು ಕಡೆ ಡಾನ್ಸ್ ಮಾಡ್ತಾರೆ. ಬಿಜೆಪಿಯವರಿಗೆ ಜನರ ಬಗ್ಗೆ ಕಾಳಜಿ ಇಲ್ಲ, ದುಡ್ಡು ಹೊಡೆಯೋದ್ರಲ್ಲಿ ಮಾತ್ರ ಕಾಳಜಿ ಇದೆ. ಪಿಎಸ್ಐ ಹಗರಣದಲ್ಲಿ ಶಾಸಕ (MLA) ಬಸವರಾಜ ದಡೇಸಗೂರು ಹಣ ಪಡೆದ ಬಗ್ಗೆ ತಾವೇ ಒಪ್ಪಿಕೊಂಡಿದ್ದಾರೆ. ಆತನ ವಿರುದ್ಧ ಎಫ್ಐಆರ್ (FIR) ದಾಖಲಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿದ್ರೆ ನೋಟಿಸ್ ಕೊಡ್ತಾರೆ ಆದ್ರೆ ಅವರದ್ದೇ ಪಕ್ಷದ ಶಾಸಕ ತಾನೇ ತಪ್ಪು ಮಾಡಿರೋದಾಗಿ ಒಪ್ಪಿಕೊಂಡಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿಯವರು ಪ್ರತಿಯೊಂದು ವಿಷಯದಲ್ಲೂ ಸೇಡಿನ ರಾಜಕೀಯ ಮಾಡ್ತಿದಾರೆ. ದಾವಣಗೆರೆಯಲ್ಲಿ ನಡೆದ ನನ್ನ ಜನ್ಮದಿನಾಚರಣೆ ಪ್ರತ್ಯುತ್ತರವಾಗಿ ಬಿಜೆಪಿಯವರು ಜನಸ್ಪಂದನ ಕಾರ್ಯಕ್ರಮ ಮಾಡುತ್ತಿದ್ದಾರೆ. ನನ್ನ ಜನ್ಮದಿನಾಚರಣೆಗೆ ಜನ ತಾವಾಗೇ ಬಂದಿದ್ದರು. ಆದ್ರೆ ಜನಸ್ಪಂದನಕ್ಕೆ ಬಿಜೆಪಿಯವರು ದುಡ್ಡು ಕೊಟ್ಟು ಕರೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.