


ಬೆಂಗಳೂರು: ಚಾಮರಾಜಪೇಟೆಯಲ್ಲಿ ಗಣೇಶೋತ್ಸವ ಗದ್ದಲ ಮತ್ತೆ ತಾರಕಕ್ಕೇರಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ವಿಚಾರವಾಗಿ ಗಣೇಶೋತ್ಸವ ಸಮಿತಿ ಮತ್ತು ಪೊಲೀಸರ ನಡುವೆ ಸಮರ ಉಂಟಾಗಿದೆ. ನಿನ್ನೆ ಪೊಲೀಸರು, ಗಣೇಶೋತ್ಸವ ಸಮಿತಿ ನಡುವೆ ಭಾರಿ ಗಲಾಟೆಯಾಗಿದ್ದು, ವಿರೋಧದ ನಡುವೆಯೂ ಮೈದಾನದ ಎದುರು 2ನೇ ಮುಖ್ಯರಸ್ತೆಯಲ್ಲಿರುವ ಅಯ್ಯಪ್ಪ ದೇಗುಲ ಬಳಿ ಇಂದು ಬೆಳಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಇಂದಿನಿಂದ 7 ದಿನಗಳ ಕಾಲ 4ನೇ ವರ್ಷದ ಗಣೇಶೋತ್ಸವ ನಡೆಯಲಿದ್ದು, ಗಣೇಶ ಮೆರವಣಿಗೆಯ ರೂಟ್ ಮ್ಯಾಪ್ನ್ನು ಸಮಿತಿ ಸಿದ್ಧಪಡಿಸಿದೆ.
ಸೆ.10ರ ಮಧ್ಯಾಹ್ನ ಪಾದರಾಯನಪುರದಿಂದ ಗಣೇಶನ ಮೂರ್ತಿ ಮೆರವಣಿಗೆ ಆರಂಭವಾಗಲಿದ್ದು, ಜೆ.ಜೆ ಆರ್ ನಗರ, ಪಾದರಾಯನಪುರ, ಚಾಮರಾಜಪೇಟೆಯ ಮುಖ್ಯ ರಸ್ತೆಗಳ ಮುಖಾಂತರ ಮೆರವಣಿಗೆ ಸಾಗಿ, ಮೈಸೂರು ರಸ್ತೆಯ ಮೂಲಕ ಟೌನ್ ಹಾಲ್ವರೆಗೆ ಅದ್ದೂರಿ ಮೆರವಣಿಗೆಗೆ ಸಿದ್ದತೆ ಮಾಡಲಾಗುತ್ತಿದೆ. ಆದರೆ ಮೆರವಣಿಗೆಗೆ ಸ್ಥಳೀಯ ಪೊಲೀಸರಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಅನುಮತಿ ಸಿಗದಿದ್ದರೂ ಪಾದರಾಯನಪುರದಿಂದ ಮೆರವಣಿಗೆ ಮಾಡೇ ಮಾಡ್ತೀವಿ ಅಂತ ಸಮಿತಿ ಹೇಳುತ್ತಿದೆ.
ಈ ಕುರಿತಾಗಿ ಚಾಮರಾಜಪೇಟೆ ಗಣೇಶ ಉತ್ಸವ ಸಮಿತಿ ಕಾರ್ಯದರ್ಶಿ ಸುನೀಲ್ ವೆಂಕಟೇಶ್ ಹೇಳಿಕೆ ನೀಡಿದ್ದು, ನೆನ್ನೆ ಮೆರವಣಿಗೆ ರೂಟ್ಮ್ಯಾಪ್ ಬಗ್ಗೆ ಕೆಲವು ಗೊಂದಲಗಳಿತ್ತು. ಈ ಬಗ್ಗೆ ಪೊಲೀಸರಿಗೆ ಅನುಮತಿಗಾಗಿ ಮನವಿ ಮಾಡಿದ್ವಿ. ಆದರೆ ಅವರಿಂದ ಸರಿಯಾದ ಪ್ರತಿಕ್ರಿಯೆ ಬರ್ಲಿಲ್ಲ. ಗಣೇಶನ ಮೆರವಣಿಗೆ ರೂಟ್ ಮ್ಯಾಪ್ ಕೊಡಿ ಎಂದು ಕೇಳಿದ್ರು. ಅದರಂತೆ ನಾವು ರೂಟ್ ಮ್ಯಾಪ್ ಕೊಟ್ಟಿದ್ವಿ, ಅದಕ್ಕೆ ಒಪ್ಪಿರಲಿಲ್ಲ. ಜೊತೆಗೆ ದೊಡ್ಡ ಗಣೇಶ ಕೂರಿಸೋದು ಬೇಡ ಕೇವಲ 2 ಅಡಿ ಅಥವಾ 4 ಅಡಿ ಗಣೇಶನನ್ನು ಕೂರಿಸಲು ಹೇಳಿದ್ರು. ಹೀಗಾಗಿ ನಿನ್ನೆ ಪೊಲೀಸ್ ಸ್ಟೇಷನ್ ಮುತ್ತಿಗೆಗೆ ಮುಂದಾಗಿದ್ದೇವು. ಕೋವಿಡ್ ವರ್ಷ ಬಿಟ್ಟು ಉಳಿದ ಎಲ್ಲಾ ವರ್ಷಗಳು ನಾವು ಗಣೇಶನನ್ನು ಕೂರಿಸಿದ್ದೇವೆ.
ಇಂದು ಬೆಂಗಳೂರು ನಗರದ ಹಲವೆಡೆ ಗಣೇಶ ವಿಸರ್ಜನೆ ಹಿನ್ನೆಲೆ ಬೆಂಗಳೂರಿನ ಪೂರ್ವ ವಿಭಾಗದ ಪೊಲೀಸರಿಂದ ಪಥಸಂಚಲನ ಮಾಡಲಾಗುತ್ತಿದೆ. ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ನಾಗವಾರ ಸೇರಿ ಹಲವೆಡೆ ರೂಟ್ ಮಾರ್ಚ್ ಮಾಡಲಿದ್ದಾರೆ. ಪೂರ್ವ ವಿಭಾಗದ ಪೊಲೀಸರಿಗೆ KSRP, ಸಿಎಆರ್ ಸಿಬ್ಬಂದಿ ಸಾಥ್ ನೀಡಲಿದ್ದಾರೆ. ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಸಿಸಿಟಿವಿ, ಡ್ರೋನ್ ಮೂಲಕ ನಿಗಾವಹಿಸಲು ತಿಳಿಸಲಾಗಿದೆ. ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬಾರ್ ಮತ್ತು ರೆಸ್ಟೋರೆಂಟ್, ಪಬ್ ಬಂದ್ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.