
ಕಾಸರಗೋಡಿನ ಕುಂಬಳೆ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಲೋತ್ಸವದ ವೇಳೆ ಗಾಝಾ ನರಮೇಧ ಕುರಿತ ವಿದ್ಯಾರ್ಥಿಗಳ ಮೂಕಾಭಿನಯ ಪ್ರದರ್ಶನವನ್ನು ಶಿಕ್ಷಕರು ತಡೆದಿರುವ ಘಟನೆ ಶುಕ್ರವಾರ (ಅ.3) ನಡೆದಿದ್ದು, ಈ ಬಗ್ಗೆ ತುರ್ತು ತನಿಖೆಗೆ ಕೇರಳ ಶಿಕ್ಷಣ ಸಚಿವ ವಿ. ಶಿವನ್ಕುಟ್ಟಿ ಆದೇಶಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದಿರುವ ಸಚಿವ ಶಿವನ್ಕುಟ್ಟಿ, “ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ: ಪ್ಯಾಲೆಸ್ತೀನ್ನಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧದ ವಿರುದ್ಧ ಕೇರಳವು ಯಾವಾಗಲೂ ದೃಢವಾಗಿ ನಿಂತಿದೆ. ಪ್ಯಾಲೆಸ್ತೀನ್ನಲ್ಲಿ ಇಸ್ರೇಲ್ ಬೇಟೆಯಾಡುತ್ತಿರುವ ಮಕ್ಕಳೊಂದಿಗೆ ಕೇರಳ ನಿಲ್ಲುತ್ತದೆ” ಎಂದು ತಿಳಿಸಿದ್ದಾರೆ.
“ಪ್ಯಾಲೆಸ್ತೀನ್ ವಿಷಯದ ಕುರಿತ ಮೂಕಾಭಿನಯ ಪ್ರದರ್ಶನವನ್ನು ತಡೆಯಲು ಅಧಿಕಾರ ಕೊಟ್ಟವರು ಯಾರು? ಎಂದು ಪ್ರಶ್ನಿಸಿರುವ ಸಚಿವರು, ಕುಂಬಳೆ ಶಾಲೆಯ ವಿದ್ಯಾರ್ಥಿಗಳಿಗೆ ವೇದಿಕೆಯ ಮೇಲೆ ಮತ್ತೆ ತಮ್ಮ ಮೂಕಾಭಿನಯ ಪ್ರದರ್ಶಿಸಲು ಅವಕಾಶ ನೀಡಲಾಗುವುದು” ಎಂದು ಭರವಸೆ ನೀಡಿದ್ದಾರೆ.
ಕಾಸರಗೋಡು ಜಿಲ್ಲಾಧಿಕಾರಿ ಕೆ. ಇಂಬಸೇಕರ್ ಅವರು ಘಟನೆಯ ಕುರಿತು ಜಿಲ್ಲಾ ಪೊಲೀಸ್ ಮತ್ತು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಂದ ವರದಿಗಳನ್ನು ಕೇಳಿದ್ದಾರೆ.
ಕುಂಬಳೆ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ ‘ಕಲೋತ್ಸವ’ವನ್ನು ಶಿಕ್ಷಕರು ಮೂಕಾಭಿನಯ ಪ್ರದರ್ಶನ ತಡೆದ ಹಿನ್ನೆಲೆ ಸ್ಥಗಿತಗೊಳಿಸಲಾಗಿದೆ. ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಶಿಕ್ಷಕರ ನಡೆ ಖಂಡಿಸಿ ವಿದ್ಯಾರ್ಥಿ ಸಂಘಟನೆಗಳಾದ ಎಂಎಸ್ಎಫ್ ಮತ್ತು ಎಸ್ಎಫ್ಐ ಶಾಲೆಗೆ ಪ್ರತಿಭಟನಾ ಮೆರವಣಿಗೆ ನಡೆಸಿವೆ.
ಇಸ್ರೇಲ್ ಬಾಂಬ್ ದಾಳಿಗೆ ಗಾಝಾದ ಅಮಾಯಕ ಕಂದಮ್ಮವೊಂದು ಬಲಿಯಾಗುವುದನ್ನು ಮತ್ತು ಗಾಝಾದ ಮಕ್ಕಳ ನೋವನ್ನು ಮೂಕಾಭಿನಯದ ಮೂಲಕ ವಿದ್ಯಾರ್ಥಿಗಳು ಪ್ರದರ್ಶಿಸುತ್ತಿದ್ದರು. ಅರ್ಧ ಪ್ರದರ್ಶನ ಮುಗಿಯುವಾಗ ಶಿಕ್ಷಕರೊಬ್ಬರು ಹಠಾತ್ ಪರದೆ ಎಳೆಸಿದ್ದಾರೆ. ಆದರೂ, ವಿದ್ಯಾರ್ಥಿಗಳು ಪ್ಯಾಲೆಸ್ತೀನ್ ಜೊತೆ ಒಗ್ಗಟ್ಟು ಪ್ರದರ್ಶಿಸುವ ಪೋಸ್ಟರ್ ಮತ್ತು ಪ್ಯಾಲೆಸ್ತೀನ್ ಧ್ವಜವನ್ನು ಪ್ರದರ್ಶಿಸಿದ್ದಾರೆ.
ಶಿಕ್ಷಕನ ನಡೆ ಖಂಡಿಸಿ ವೇದಿಕೆ ಮುಂಭಾಗದಲ್ಲಿದ್ದ ವಿದ್ಯಾರ್ಥಿಗಳು ಕೂಡ ವೇದಿಕೆ ಬಳಿಗೆ ತೆರಳಿ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ್ದರು.
“ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳು ಮೂಕಾಭಿನಯ ಪ್ರದರ್ಶನ ಮಾಡಿದ್ದಾರೆ. ಅವರು ಜಿಲ್ಲಾ ಕ್ರೀಡಾಕೂಟ ಇದ್ದ ಕಾರಣ ಒಂದು ದಿನ ಮೊದಲೇ ಈ ಪ್ರದರ್ಶನ ನೀಡಲು ಅವಕಾಶ ಕೇಳಿದ್ದರು. ಈ ಪ್ರದರ್ಶನದಲ್ಲಿ ಹೆಚ್ಚು ವಿದ್ಯಾರ್ಥಿಗಳು ಇದ್ದರು ಮತ್ತು ಮೃದು ಆಟಿಕೆ, ದುಃಖದಲ್ಲಿರುವ ಪ್ಯಾಲೆಸ್ತೀನ್ ತಾಯಿಯ ಚಿತ್ರದಂತಹ ವಸ್ತುಗಳನ್ನು ಬಳಸಿದ್ದರು. ಇವುಗಳು ಮೂಕಾಭಿನಯ ಪ್ರದರ್ಶನ ಸ್ಪರ್ಧೆಯ ನಿಯಮಗಳಿಗೆ ವಿರುದ್ದವಾಗಿ” ಎಂದು ಶಾಲೆಯ ಮುಖ್ಯ ಶಿಕ್ಷಕಿ ಶೈಲಜಾ ವಿ.ಆರ್ ಸಮರ್ಥಿಸಿಕೊಂಡಿದ್ದಾರೆ.
ಕಾರ್ಯಕ್ರಮದ ಆಯೋಜಕರು ಆರಂಭದಲ್ಲಿ ಪ್ಯಾಲೆಸ್ತೀನ್ ಪರ ಮೂಕಾಭಿನಯಕ್ಕೆ ಅವಕಾಶ ನೀಡಿದ್ದರು. ಆದರೆ, ಭಾವಚಿತ್ರವನ್ನು ಪ್ರದರ್ಶಿಸಿದಾಗ ಪರದೆಯನ್ನು ಇಳಿಸಲಾಯಿತು, ಇದು ವಿವಾದಕ್ಕೆ ಕಾರಣವಾಯಿತು ಎಂದು ವರದಿಗಳು ಹೇಳಿವೆ.
ಶಾಲೆಯಲ್ಲಿ ನಡೆದ ಘಟನೆಯನ್ನು ತಪ್ಪಾಗಿ ಚಿತ್ರಿಸಲಾಗಿದೆ. ಅದನ್ನು ಆಧಾರವಾಗಿಟ್ಟುಕೊಂಡು ವಿದ್ಯಾರ್ಥಿ ಸಂಘಟನೆಗಳು ಮತ್ತು ಸರ್ಕಾರ ಪ್ರತಿಕ್ರಿಯಿಸಿದೆ ಎಂದು ಶಾಲೆಯ ಶಿಕ್ಷಕರು ಹೇಳಿದ್ದಾರೆ.
ಮುಸ್ಲಿಂ ಲೀಗ್ನ ವಿದ್ಯಾರ್ಥಿ ವಿಭಾಗವಾದ ಮುಸ್ಲಿಂ ವಿದ್ಯಾರ್ಥಿ ಒಕ್ಕೂಟದ (ಎಂಎಸ್ಎಫ್) ಸದಸ್ಯರು ಶುಕ್ರವಾರ ಸಂಜೆಯೇ ಶಾಲೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಪರದೆ ಇಳಿಸಿದ ಇಬ್ಬರು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆ ಪೊಲೀಸರು ಮಧ್ಯಪ್ರವೇಶಿಸಿದ್ದರು.
ಶಿಕ್ಷಕರ ವಿರುದ್ದ ಕ್ರಮ ಕೈಗೊಳ್ಳುವವರೆಗೆ ಶಾಲೆಯಿಂದ ಕದಲುವುದಿಲ್ಲ ಎಂದು ಎಂಎಸ್ಎಫ್ ನಾಯಕರು ಪಟ್ಟು ಹಿಡಿದು ಕುಳಿತಿದ್ದರು. ಪರಿಸ್ಥಿತಿ ಹತೋಟಿಗೆ ತರಲು ಕುಂಬಳೆ ಪೊಲೀಸರು ಕೆಲ ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಕೂಡ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು.
ನಂತರ, ಕೇರಳದ ಆಡಳಿತಾರೂಢ ಸಿಪಿಎಂನ ವಿದ್ಯಾರ್ಥಿ ವಿಭಾಗವಾದ ಭಾರತೀಯ ವಿದ್ಯಾರ್ಥಿ ಒಕ್ಕೂಟ (ಎಸ್ಎಫ್ಐ) ಶಾಲೆಗೆ ಪ್ರತಿಭಟನಾ ಮೆರವಣಿಗೆ ನಡೆಸಿತ್ತು. ಎಸ್ಡಿಪಿಐ ಕೂಡ ಶಾಲೆಯ ಹೊರಗೆ ಪ್ರತಿಭಟನೆ ಹಮ್ಮಿಕೊಂಡಿತ್ತು.
ಆರೋಪಿ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಕರು ಮತ್ತು ಪೋಷಕರ ಒಕ್ಕೂಟ (ಪಿಟಿಎ) ಅಧ್ಯಕ್ಷರು ತಿಳಿಸಿದ್ದಾರೆ. ಮೂಕಾಭಿನಯ ಸೇರಿದಂತೆ ಇತರ ಸ್ಪರ್ಥೆಗಳನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
“ಇದು ದೇಶದ್ರೋಹದ ಕೃತ್ಯವಲ್ಲ, ಪ್ಯಾಲೆಸ್ತೀನ್ ಜೊತೆಗಿನ ಒಗ್ಗಟ್ಟಿನ ಸಂಕೇತವಾಗಿದೆ” ಎಂದು ಒತ್ತಿ ಹೇಳಿರುವ ಪಿಟಿಎ ಅಧ್ಯಕ್ಷರು, ಯುವಜನೋತ್ಸವಗಳು ಪ್ರಸ್ತುತ ಮತ್ತು ಸಮಕಾಲೀನ ವಿಷಯಗಳನ್ನು ಒಳಗೊಂಡಿರುತ್ತವೆ ಎಂದಿದ್ದಾರೆ.
ಕುಂಬಳೆ ಘಟನೆಯ ಒಂದು ದಿನ ಮೊದಲು ಕಣ್ಣೂರಿನಲ್ಲಿ ತಲಶ್ಶೇರಿಯ ಅಂಚರಕಂಡಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು, ಕೋಲ್ಕಲಿ (ಜಾನಪದ ಕಲೆ) ಪ್ರದರ್ಶನದ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಹೊಂದಿರುವ ಟಿ-ಶರ್ಟ್ಗಳನ್ನು ಧರಿಸಿದ್ದಕ್ಕಾಗಿ ಅವರ ಪ್ರದರ್ಶನವನ್ನು ಮಧ್ಯದಲ್ಲಿಯೇ ನಿಲ್ಲಿಸಲಾಗಿತ್ತು ಎಂದು ವರದಿಯಾಗಿದೆ.