ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಆರೋಪ (Dharmasthala Mass Burials) ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ (SIT) ತನಿಖೆ ಚುರುಕುಗೊಂಡಿದೆ. ತನಿಖೆಯ ಭಾಗವಾಗಿ ಇಬ್ಬರು ಅಂಬುಲೆನ್ಸ್ ಚಾಲಕರನ್ನು ಕರೆಸಿ ಎಸ್ಐಟಿ ವಿಚಾರಣೆ ನಡೆಸಿದೆ. ಕಳೆದ 23 ವರ್ಷಗಳಿಂದ ಶವ ಸಾಗಾಟ ಮಾಡಿದ್ದ ಇಬ್ಬರನ್ನೂ ವಿಚಾರಣೆ ನಡೆಸಿದ ಎಸ್ಐಟಿ ಮಹತ್ವದ ಮಾಹಿತಿ ಸಂಗ್ರಹಿಸಿ ಹೇಳಿಕೆ ದಾಖಲಿಸಿಕೊಂಡಿದೆ.
ಹೌದು, ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದ ಆರೋಪಿ ಚಿನ್ನಯ್ಯನ 183 ಹೇಳಿಕೆ ನಂತರ ಶವ ಹೂತಿಟ್ಟ ಆರೋಪದಲ್ಲಿ ಬೆಳ್ತಂಗಡಿಯ ಇಬ್ಬರು ಅಂಬುಲೆನ್ಸ್ ಚಾಲಕರಿಗೆ (Ambulence Drivers) ಎಸ್ಐಟಿ ನೋಟಿಸ್ ಕೊಟ್ಟು ವಿಚಾರಣೆ ನಡೆಸಿದೆ. ಸಮಾಜಸೇವಕ ಅಂಬುಲೆನ್ಸ್ ಚಾಲಕರಾದ ಬೆಳ್ತಂಗಡಿಯ ಜಲೀಲ್ ಬಾಬಾ ಮತ್ತು ಹಮೀದ್ ಯುಡಿಆರ್ ಪ್ರಕರಣದ ಶವಗಳನ್ನು ಶವಗಾರಕ್ಕೆ ಸಾಗಿಸಿದ ಬಗ್ಗೆ ಎಸ್ಐಟಿ ತಂಡ ವಿಚಾರಣೆ ನಡೆಸಿತು.
ಇನ್ನು ಧರ್ಮಸ್ಥಳ ಗ್ರಾಮದಲ್ಲಿ ಯುಡಿಆರ್ ಪ್ರಕರಣದ ಶವಗಳನ್ನ ಶವಗಾರಕ್ಕೆ ಸಾಗಿಸಿದ ಬಗ್ಗೆ ಎಸ್ಐಟಿ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿ ಮಾಹಿತಿಯನ್ನು ಕಲೆ ಹಾಕಿತು. ಶವಗಳನ್ನು ಪೊಲೀಸರ ಸಮ್ಮುಖದಲ್ಲಿ ಶವಗಾರಕ್ಕೆ ಸಾಗಿಸಲಾಗಿತ್ತಾ ಅನ್ನೋದರ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ. ಈ ವೇಳೆ ಸಾಕಷ್ಟು ಮಹತ್ವದ ಮಾಹಿತಿಗಳನ್ನು ಇಬ್ಬರೂ ನೀಡಿದ್ದು, ಎಲ್ಲವೂ ಸ್ಥಳೀಯ ಪೊಲೀಸರ ನಿರ್ದೇಶನದಂತೆ ಶವ ಸಾಗಾಟ ಮಾಡಿದ್ದೇವೆ ಅನ್ನೋ ವಿಚಾರವನ್ನ ವಿಚಾರಣೆ ವೇಳೆ ಹೇಳಿದ್ದಾರೆ. ಇದರ ಜೊತೆಗೆ ತಮಗೆ ಗೊತ್ತಿರೋ ವಿಚಾರಗಳನ್ನೂ ಇಬ್ಬರೂ ಹೇಳಿದ್ದು, ಎಲ್ಲಾ ಹೇಳಿಕೆಗಳನ್ನ ಎಸ್ಐಟಿ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.
ಇನ್ನು ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಬೇಲ್ಗೆ ಅರ್ಜಿ ಹಾಕಿದ್ದು, ಮಂಗಳೂರಿನ ಸೆಷನ್ಸ್ ಕೋರ್ಟ್ ಆದೇಶವನ್ನು ಅಕ್ಟೋಬರ್ 9ಕ್ಕೆ ಕಾಯ್ದಿರಿಸಿದೆ. ಈ ಕೇಸ್ ದಾಖಲಾದ ನಂತರ ಬುರುಡೆ ಗ್ಯಾಂಗ್ ಸೂತ್ರಧಾರ ಮಹೇಶ್ ಶೆಟ್ಟಿ ತಿಮರೋಡಿ ತಲೆಮರೆಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಎಲ್ಲಾ ಆಯಾಮದ ವಿಚಾರಣೆ ಮುಂದುವರಿಸಿದೆ. ಶೀಘ್ರದಲ್ಲೇ ಫೈನಲ್ ರಿಪೋರ್ಟ್ ನೀಡಲಿರುವ ಎಸ್ಐಟಿ ಅದಕ್ಕೆ ಬೇಕಾದ ಎಲ್ಲಾ ತನಿಖೆಗಳನ್ನ ಮುಗಿಸುವ ಹಂತಕ್ಕೆ ತಲುಪಿದೆ. ಕೆಲವೇ ದಿನಗಳಲ್ಲಿಧರ್ಮಸ್ಥಳ ಪ್ರಕರಣದ ಸತ್ಯಾಸತ್ಯತೆ ಹೊರಬರಲಿದೆ.