ಭಾರತದ ಉಪರಾಷ್ಟ್ರಪತಿ ಆಗಿದ್ದ ಜಗದೀಪ್ ಧನಕರ್ ಅವರು ತಮ್ಮ ಸ್ಥಾನಕ್ಕೆ ಕಳೆದ ರಾತ್ರಿ ರಾಜೀನಾಮೆ ನೀಡಿದ್ದಾರೆ. ಈಗ ದೇಶಕ್ಕೆ ಹೊಸ ಉಪರಾಷ್ಟ್ರಪತಿ ಆಯ್ಕೆ ಅನಿವಾರ್ಯವಾಗಿದೆ. ಭಾರತದಲ್ಲಿ ಹೇಗೆ ಉಪರಾಷ್ಟ್ರಪತಿ ಆಯ್ಕೆ ಮಾಡಲಾಗುತ್ತೆ? ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ? ಯಾರಾರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಾರೆ ಅನ್ನೋ ಡೀಟೈಲ್ಸ್ ಇಲ್ಲಿದೆ.
ಉಪರಾಷ್ಟ್ರಪತಿ ಆಯ್ಕೆಗೆ ಯಾರು ಮತ ಚಲಾಯಿಸ್ತಾರೆ?
ಭಾರತದಲ್ಲಿ ರಾಷ್ಟ್ರಪತಿ ಆಯ್ಕೆಗೆ ಸಂಸತ್ನ ಉಭಯ ಸದನಗಳ ಸದಸ್ಯರು ಮತ್ತು ಎಲ್ಲಾ ರಾಜ್ಯಗಳ ಶಾಸನಸಭೆಯ ಸದಸ್ಯರು ಮತ ಚಲಾಯಿಸುತ್ತಾರೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಮಾತ್ರ ಮತ ಚಲಾವಣೆ ಹಕ್ಕು ಹೊಂದಿದ್ದಾರೆ. ರಾಜ್ಯಸಭೆ, ಲೋಕಸಭೆಯ ಆಯ್ಕೆಯಾದ ಸದಸ್ಯರು ಮತ್ತು ನಾಮನಿರ್ದೇಶಿತ ಸದಸ್ಯರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ರಾಜ್ಯಗಳ ಶಾಸಕರಿಗೆ ಮತದಾನದ ಹಕ್ಕು ಇಲ್ಲ.
ಉಪರಾಷ್ಟ್ರಪತಿ ಹುದ್ದೆಗೆ ಅರ್ಹತೆಗಳೇನು?
- ಭಾರತದ ನಾಗರಿಕರಾಗಿರಬೇಕು
- ಕನಿಷ್ಠ 35 ವರ್ಷ ವಯಸ್ಸಾಗಿರಬೇಕು
- ರಾಜ್ಯಸಭೆಗೆ ಆಯ್ಕೆಯಾಗುವ ಅರ್ಹತೆ ಹೊಂದಿರಬೇಕು
- ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದಡಿ ಯಾವುದೇ ಲಾಭದಾಯಕ ಹುದ್ದೆ ಹೊಂದಿರಬಾರದು
- ಸಂವಿಧಾನದ 66 ಮತ್ತು 67ನೇ ವಿಧಿಯಡಿ ವಿಧಿಸಿರುವ ಷರತ್ತು ಪೂರೈಸಬೇಕು
- ಉಪರಾಷ್ಟ್ರಪತಿಯನ್ನು ಹೇಗೆ ಆಯ್ಕೆ ಮಾಡಲಾಗುತ್ತೆ?
ಉಪರಾಷ್ಟ್ರಪತಿ ಆಯ್ಕೆಯನ್ನು ಕೇಂದ್ರ ಚುನಾವಣಾ ಆಯೋಗ ಮೇಲ್ವಿಚಾರಣೆ, ಮೇಲುಸ್ತುವಾರಿ ಮಾಡುತ್ತೆ. ಕೇಂದ್ರ ಚುನಾವಣಾ ಆಯೋಗವೇ ಚುನಾವಣೆಗೆ ರಿಟರ್ನಿಂಗ್ ಆಫೀಸರ್ ಅನ್ನು ನೇಮಕ ಮಾಡುತ್ತೆ. ಸಾಮಾನ್ಯವಾಗಿ ಪಾರ್ಲಿಮೆಂಟ್ನ ಹಿರಿಯ ಅಧಿಕಾರಿಯನ್ನು ರಿಟರ್ನಿಂಗ್ ಆಫೀಸರ್ ಆಗಿ ನೇಮಕ ಮಾಡಲಾಗುತ್ತೆ.
ಅಭ್ಯರ್ಥಿಯಾಗ ಬಯಸುವವರ ನಾಮಪತ್ರಕ್ಕೆ ಕನಿಷ್ಠ 20 ಮಂದಿ ಸೂಚಕರು ಸಹಿ ಹಾಕಬೇಕು. ಬಳಿಕ 20 ಮಂದಿ ಸಂಸದರು ಅವರ ಹೆಸರು ಅನುಮೋದಿಸಬೇಕು. ಭದ್ರತಾ ಠೇವಣಿಯಾಗಿ 15 ಸಾವಿರ ರೂಪಾಯಿ ಕಟ್ಟಬೇಕು. ಚುನಾವಣೆಯನ್ನು ಸೀಕ್ರೆಟ್ ಬ್ಯಾಲೆಟ್ ಮೂಲಕ ನಡೆಸಲಾಗುತ್ತೆ. ಸಿಂಗಲ್ ಟ್ರಾನ್ಸಫರಬಲ್ ವೋಟ್ ಸಿಸ್ಟಮ್ ಮೂಲಕ ಮತ ಚಲಾವಣೆ ಮಾಡಬೇಕು. ಪ್ರತಿಯೊಬ್ಬ ಸಂಸದರು, ತಮ್ಮ ಆಯ್ಕೆಯ ಅಭ್ಯರ್ಥಿಗೆ ಆದ್ಯತೆಯ ಮತ ನೀಡಿ ಮತ ಚಲಾವಣೆ ಮಾಡಬೇಕು. ಮೊದಲ ಸ್ಥಾನಕ್ಕೆ ಬರಬೇಕೆಂದು ಬಯಸುವವರಿಗೆ 1, 2ನೇ ಸ್ಥಾನಕ್ಕೆ ಬರಲೆಂದು ಬಯಸುವವರಿಗೆ 2 ಎಂದು ಆದ್ಯತೆಯ ಮತ ನೀಡಿ ಮತ ಚಲಾವಣೆ ಮಾಡಬೇಕು.
ಚುನಾವಣೆ ಗೆಲ್ಲಲು ಸಿಂಧುವಾದ ಮತಗಳ ಪೈಕಿ ಶೇ.50 ಕ್ಕಿಂತ ಹೆಚ್ಚಿನ ಮತಗಳನ್ನು ಅಭ್ಯರ್ಥಿ ಪಡೆಯಬೇಕು. ಒಂದು ವೇಳೆ ಯಾವುದೇ ಅಭ್ಯರ್ಥಿ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಶೇ.50 ರಷ್ಟು ಮತ ಪಡೆಯದಿದ್ದರೆ ಕಡಿಮೆ ಮತ ಪಡೆದವರನ್ನು ಎಲಿಮಿನೇಟ್ ಮಾಡಲಾಗುತ್ತೆ. ಅವರ ಮತಗಳನ್ನು ಬೇರೋಬ್ಬರಿಗೆ ವರ್ಗಾವಣೆ ಮಾಡಲಾಗುತ್ತೆ. ಇದು ಓರ್ವ ಅಭ್ಯರ್ಥಿಯು ಶೇ.50 ರಷ್ಟು ಮತ ಪಡೆಯುವವರೆಗೂ ಮುಂದುವರಿಯುತ್ತದೆ.
ಕೇಂದ್ರ ಚುನಾವಣಾ ಆಯೋಗವು ಉಪರಾಷ್ಟ್ರಪತಿ ಹುದ್ದೆ ಖಾಲಿಯಾದ 60 ದಿನಗಳೊಳಗಾಗಿ ಚುನಾವಣೆ ನಡೆಸಬೇಕು.
ಉಪರಾಷ್ಟ್ರಪತಿ ಸ್ಥಾನ ಖಾಲಿಯಾಗಿರುವುದಿರಂದ ರಾಜ್ಯಸಭೆಯ ಕಲಾಪಗಳನ್ನು ರಾಜ್ಯಸಭೆಯ ಡೆಪ್ಯುಟಿ ಚೇರ್ಮನ್ ನಡೆಸುತ್ತಾರೆ. 2020 ರಿಂದ ಜೆಡಿಯು ಪಕ್ಷದ ಹರಿವಂಶ್ ನಾರಾಯಣ್ ಸಿಂಗ್ ಅವರು ರಾಜ್ಯಸಭೆಯ ಡೆಪ್ಯುಟಿ ಚೇರ್ ಮನ್ ಆಗಿದ್ದಾರೆ. ಹರಿವಂಶ್ ನಾರಾಯಣ್ ಸಿಂಗ್ ಅವರೇ ರಾಜ್ಯಸಭೆಯ ಕಲಾಪಗಳನ್ನ ನಡೆಸುವರು.