ಅಶ್ರಫ್ – ರಹಿಮಾನ್ ಹತ್ಯೆ ಪ್ರಕರಣ ಉನ್ನತ ತನಿಖೆಗೆ ವಹಿಸಲು ಆಗ್ರಹಿಸಿ SDPI ವತಿಯಿಂದ ಬೃಹತ್ ಪ್ರತಿಭಟನೆ
ಬಂಟ್ವಾಳ, ಜು 8: ಇತ್ತೀಚೆಗೆ ನಡೆದ ಅಶ್ರಫ್ ವಯನಾಡು ಗುಂಪು ಹತ್ಯೆ ಹಾಗೂ ಅಬ್ದುಲ್ ರಹಿಮಾನ್ರವರ ವ್ಯವಸ್ಥಿತ ಹತ್ಯಾ ಪ್ರಕರಣದ ತನಿಖೆಯನ್ನು ಎಸ್ಐಟಿಗೆ ವಹಿಸಬೇಕು, ಸರ್ಕಾರದಿಂದ ಪರಿಹಾರ ನೀಡಬೇಕು ಹಾಗೂ ಹತ್ಯಾ ಸಂಚುಕೋರರ ಬಂಧಿಸಬೇಕು ಎಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಬಿಸಿ ರೋಡ್ ಕೈಕಂಬ ಜಂಕ್ಷನ್ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ ಡಿ ಪಿ ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ ಮಾತನಾಡಿ ‘ವೈಯಕ್ತಿಕ ನೆಲೆಯಲ್ಲಿ ಯಾರೆಲ್ಲಾ ಮೃತರ ಕುಟುಂಬಗಳಿಗೆ ಪರಿಹಾರ ನೀಡಿದ್ದಾರೋ ಅದು ಸ್ವಾಗತಾರ್ಹ. ಆದರೆ ಆ ವೈಯಕ್ತಿಕ ನೆಲೆಯ ಆರ್ಥಿಕ ಸಹಾಯದಿಂದ ಅಮಾಯಕರ ಹತ್ಯೆಗೆ ನ್ಯಾಯ ಸಿಗಲಿಲ್ಲ. ಎರಡೂ ಹತ್ಯೆ ಪ್ರಕರಣಗಳನ್ನೂ ಎಸ್ಐಟಿ ತನಿಖೆಗೆ ವಹಿಸಬೇಕು. ಹತ್ಯೆಗೆ ಸಂಚು ರೂಪಿಸಿದವರು, ಮಾರಕಾಸ್ತ್ರಗಳನ್ನು ಪೂರೈಕೆ ಮಾಡಿದವರು, ಹಂತಕರಿಗೆ ತರಬೇತಿ ನೀಡಿದವರು ಹೀಗೆ ಎಲ್ಲರನ್ನೂ ಕಠಿಣ ಸೆಕ್ಷನ್ನಡಿಯಲ್ಲಿ ಬಂಧಿಸಬೇಕು. ಆ ಮೂಲಕ ಹತ್ಯೆಗೊಳಗಾದವರಿಗೆ ನ್ಯಾಯ ಒದಗಿಸಬೇಕು’ ಎಂದು ಹೇಳಿದರು.
SDPI ರಾಜ್ಯ ನಾಯಕ ಅಥಾವುಲ್ಲಾ ಜೋಕಟ್ಟೆಯವರು ಮಾತನಾಡಿ ‘ಸರ್ಕಾರ ಇಲ್ಲಿ ಪ್ರಶ್ನೆ ಮಾಡಿದವರಿಗೆ ನೋಟಿಸ್ ಜಾರಿಗೊಳಿಸಿ ಭಯಪಡಿಸುತ್ತಿದೆ. ಪ್ರಶ್ನೆ ಮಾಡಿದವರಿಗೆ ನೀವು Pro SDPI ಆಗಿ ಪ್ರಶ್ನೆ ಮಾಡುತ್ತೀರಿ ಎಂದು ದಬ್ಬಾಳಿಕೆ ಮಾಡುತ್ತಿದ್ದೀರಿ. ಆದರೆ ವಾಸ್ತವದಲ್ಲಿ ಎಸ್ಡಿಪಿಐ ಎಂಬ ಚಳುವಳಿಯು ಜನಸಾಮಾನ್ಯರ ಆಗ್ರಹಗಳಿಗೆ ಧ್ವನಿಯಾಗುತ್ತಿದೆ. ಜನರು ಪ್ರಜ್ಞಾವಂತರಾಗಿದ್ದಾರೆ. ಹಾಗಾಗಿ ತಕ್ಷಣ ಎಸ್ಐಟಿ ತನಿಖೆಗೆ ವಹಿಸಿ ಸರ್ಕಾರದಿಂದ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಮಾತನಾಡಿ ‘ ದಮನಿತರ, ಮರ್ದಿತರ ಪರ ನಾವು ಸದಾ ಧ್ವನಿಯೆತ್ತುತ್ತಿರುತ್ತೇವೆ. ಅಮಾಯಕ ಅಶ್ರಫ್ , ರಹೀಂ ಕೊಲೆಯನ್ನು ಅಷ್ಟು ಸುಲಭವಾಗಿ ನಾವು ಮರೆಯುವುದಿಲ್ಲ. ಮುಸ್ಲಿಮ್ ಬಾಹುಳ್ಯದ ಕ್ಷೇತ್ರದಲ್ಲಿ ನಿಂತು, ಮುಸ್ಲಿಮರ ಮತ ಪಡೆದು ಗೆದ್ದ ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿಗಳು ಅದೇ ಮುಸ್ಲಿಮರ ಸಮಸ್ಯೆಯ ಬಗ್ಗೆ ಮಾತನಾಡುವುದಿಲ್ಲ ಎಂದಾದರೆ ಏಕೆ ಅಂತವರನ್ನು ಗೆಲ್ಲಿಸಬೇಕೆಂದು ಮುಸ್ಲಿಮರು ಚಿಂತಿಸಬೇಕಿದೆ ‘ ಎಂದು ವಾಗ್ದಾಳಿ ನಡೆಸಿದರು.
ಪ್ರತಿಭಟನಾಕಾರರಿಂದ ತನಿಖೆಯಲ್ಲಿ ವಿಳಂಬ ನೀತಿ ತೋರುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ಭರಿತ ಘೋಷಣೆಗಳು ಮೊಳಗಿತು.

ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಅಬ್ದುಲ್ ಜಲೀಲ್ ಕೆ, ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರಾದ ಮುನಿಶ್ ಆಲಿ, ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪುತ್ತೂರು, ಮಂಗಳೂರು ನಗರ ಉಪಾಧ್ಯಕ್ಷ ಅಶ್ರಫ್ ಅಡ್ಡೂರು, ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಶಾಹುಲ್ ಹಮೀದ್ ಎಸ್ ಎಚ್, ಸಹಿತ ಪಕ್ಷದ ನಾಯಕರು, ಕಾರ್ಯಕರ್ತರು, ಹಿತೈಷಿಗಳು ಭಾಗವಹಿಸಿದ್ದರು.

ಎಸ್ ಡಿ ಪಿ ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದಗೈದರು.