Ashraf Kammaje| Hayath Tv
Published : Jul 08 2025, 11:00 AM ISTUpdated : Jul 08 2025, 12:48 PM IST
ರಾಮನಗರದಲ್ಲಿ ಅಪಘಾತದಲ್ಲಿ ಗಾಯಗೊಂಡು ಕೋರ್ಟ್ಗೆ ಬರಲಾಗದ ಮಹಿಳೆಗೆ ನ್ಯಾಯಾಧೀಶರೇ ಆಕೆಯ ಬಳಿಗೆ ತೆರಳಿ ವಿಚಾರಣೆ ನಡೆಸಿ ಪರಿಹಾರ ನೀಡಿದ್ದಾರೆ. ಮೃತ ವ್ಯಕ್ತಿಯ ಹತ್ತು ಮಕ್ಕಳಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು.
ರಾಮನಗರ (ಜು.8): ಬಡವರು, ಅನ್ಯಾಯಕ್ಕೆ ಒಳಗಾದವರು ಮತ್ತು ತುಳಿತಕ್ಕೀಡಾದವರಿಗೆ ನ್ಯಾಯ ಒದಗಿಸುವಲ್ಲಿ ನ್ಯಾಯಾಧೀಶರು ಕೇವಲ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸದೆ, ಸಂತ್ರಸ್ತರ ಬಳಿಗೆ ತೆರಳಿ ಅವರ ನೋವು, ನಿರಾಸೆಯನ್ನು ಅರ್ಥಮಾಡಿಕೊಳ್ಳಬೇಕು. ಕೇವಲ ತಾಂತ್ರಿಕವಾಗಿ ನ್ಯಾಯದಾನ ಮಾಡುವುದು ಸಮಾಜದಲ್ಲಿ ವಿಶ್ವಾಸವನ್ನು ಕುಂದಿಸುತ್ತದೆ. ನ್ಯಾಯಾಧೀಶರು ಕಾನೂನಿನ ಕಠಿಣ ನಿಯಮಗಳನ್ನು ಜಾರಿಗೊಳಿಸುವಾಗಲೂ ಸಹಾನುಭೂತಿ, ಕರುಣೆ ಮತ್ತು ನೀತಿಯನ್ನು ಹೇಗೆ ಕಾಪಾಡಿಕೊಳ್ಳಬೇಕು, ಸಂತ್ರಸ್ತರ ದುಃಖಕ್ಕೆ ಹೇಗೆ ಕಿವಿಯಾಗಬಹುದು ಎಂಬುದುಕ್ಕೆ ಇಲ್ಲೊಂದು ಹೃದಯಸ್ಪರ್ಶ ಘಟನೆ ನಡೆದಿದೆ.
ಹೌದು. ಅಪಘಾತವೊಂದರಲ್ಲಿ ಪೆಟ್ಟಾದ ಕಾರಣ ಕಾಲು ನೋವಿನಿಂದಾಗಿ ಮೆಟ್ಟಿಲು ಹತ್ತಲಾಗದೆ ಕೋರ್ಟ್ನ ಹೊರಗೆ ಕುಳಿತಿದ್ದ ಮಹಿಳೆಯೊಬ್ಬರಿದ್ದಲ್ಲಿಗೆ ನ್ಯಾಯಾಧೀಶರೇ ಬಂದು ವಿಚಾರಣೆ ನಡೆಸಿದ ಘಟನೆ ರಾಮನಗರದಲ್ಲಿ ನಡೆದಿದೆ.
ರಾಮನಗರದ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಎಚ್. ಅವಿನಾಶ್ ಚಿಂದು ಮಾನವೀಯತೆ ಮೆರೆದ ನ್ಯಾಯಾಧೀಶರು.

ನಗರದ ಚಲುವಯ್ಯ ಎಂಬುವರು ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಅವರ ಹತ್ತು ಮಕ್ಕಳಿಗೆ ಪರಿಹಾರ ನೀಡುವಂತೆ ಆದೇಶಿಸಿತ್ತು. ಮಕ್ಕಳ ಪರ ವಕೀಲರು ದಾಖಲೆಗಳನ್ನು ಸಲ್ಲಿಸಿದ ನಂತರ, ನ್ಯಾಯಾಧೀಶರು ಪರಿಹಾರ ನೀಡಲು ಆದೇಶಿಸಿದರು. ಈ ಸಂದರ್ಭದಲ್ಲಿ, ಚಲುವಯ್ಯನವರ ಪುತ್ರಿ ಯಶೋಧಮ್ಮಗೆ ಕಾಲು ಪೆಟ್ಟಾಗಿದ್ದು, ನೋವಿನಿಂದಾಗಿ ಕೋರ್ಟ್ ಒಳಗೆ ಬರಲು ಸಾಧ್ಯವಾಗಿರಲಿಲ್ಲ. ಆಕೆ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದರು.

ಯಶೋಧಮ್ಮಗೆ ಕೋರ್ಟ್ ಒಳಗೆ ಬರಲು ಸಾಧ್ಯವಾಗದ ಕಾರಣ ನ್ಯಾಯಾಧೀಶರು ಆಕೆಯಿದ್ದಲ್ಲಿಗೆ ಬಂದು ವಿಚಾರಣೆ ನಡೆಸಿ, ಮೃತರ ವಾರಸುದಾರರಿಗೆ ₹1 ಲಕ್ಷ ಪರಿಹಾರ ಬಿಡುಗಡೆಗೆ ಆದೇಶಿಸಿದರು. ಜೂನ್ 29ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.