ಮಂಗಳೂರು ನಗರದ ಹೊರವಲಯ ಕುಡುಪುವಿನಲ್ಲಿ ಏಪ್ರಿಲ್ 27ರಂದು ನಡೆದ ಕೇರಳದ ಮುಸ್ಲಿಂ ಯುವಕ ಮೊಹಮ್ಮದ್ ಅಶ್ರಫ್ ಅವರ ಗುಂಪು ಹತ್ಯೆಯ ಕುರಿತ ಸತ್ಯಶೋಧನಾ ವರದಿಯನ್ನು ಶನಿವಾರ (ಜೂ.28) ಬೆಂಗಳೂರಿನ ಪ್ರೆಸ್ ಕ್ಷಬ್ನಲ್ಲಿ ಬಿಡುಗಡೆ ಮಾಡಲಾಗಿದೆ.
ಸಾಮಾಜಿಕ ಹೋರಾಟಗಾರರ ತಂಡವು ಮಂಗಳೂರಿಗೆ ಭೇಟಿ ನೀಡಿ ಸಂಗ್ರಹಿಸಿದ ಮಾಹಿತಿಗಳ ವರದಿಯನ್ನು ‘ಮಂಗಳೂರು ಗುಂಪು ಹತ್ಯೆ ಪ್ರಕರಣ-ಸಂವಿಧಾನದ ಕಗ್ಗೊಲೆಯ ಬಗ್ಗೆ ಮೌನ ಮುರಿಯಬೇಕಿದೆ’ ಎಂಬ ಹೆಸರಿನಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಕರ್ನಾಟಕ (ಪಿಯುಸಿಎಲ್), ಅಸೋಸಿಯೇಷನ್ ಆಫ್ ಪ್ರೊಟೆಕ್ಷನ್ ಫಾರ್ ಸಿವಿಲ್ ರೈಟ್ಸ್ ಕರ್ನಾಟಕ (ಎಪಿಸಿಆರ್) ಮತ್ತು ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟೀಸ್ ಕರ್ನಾಟಕ (ಎಐಎಲ್ಎಜೆ) ಜಂಟಿಯಾಗಿ ಬಿಡುಗಡೆ ಮಾಡಿದೆ.
ವರದಿ ಬಿಡುಗಡೆ ಮಾಡಿ ಮಾತನಾಡಿದ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ “ರಾಜ್ಯದ ಆಡಳಿತವು ಶೋಷಿತ ಸಮುದಾಯಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸುವಲ್ಲಿ ವಿಫಲವಾಗಿದೆ. ಅಶ್ರಫ್ ಗುಂಪು ಹತ್ಯೆ, ಕತ್ತರಘಟ್ಟದ ದಲಿತ ಯುವಕನ ಹತ್ಯೆ ಪ್ರಕರಣದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಂತ್ರಸ್ತರ ಮನೆಗಳಿಗೆ ಭೇಟಿ ನೀಡದಿರುವುದು ಕಾನೂನು ಮತ್ತು ಆಡಳಿತದ ಮೇಲಿನ ಜನರ ನಂಬಿಕೆ ಕುಂದಿಸಿದೆ ಎಂದು ಅಭಿಪ್ರಾಯಪಟ್ಟರು.
ದಕ್ಷಿಣ ಕನ್ನಡದಲ್ಲಿ ದಶಕಗಳಿಂದಲೂ ಸೌಹಾರ್ದತೆ ಮತ್ತು ಮಾನವೀಯತೆ ಕುಂದುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಮಾವಳ್ಳಿ ಶಂಕರ್, ‘ಅಶ್ರಫ್ ಅವರ ಸಹೋದರ ಜಬ್ಬಾರ್ ಹೇಳಿದಂತೆ ಇದೇ ಕೊನೆಯ ಗುಂಪು ಹತ್ಯೆಯಾಗಬೇಕು’ ಎಂದರು.
ವರ್ಣಭೇದ ನೀತಿಗಳ ಸಮಕಾಲೀನ ಸ್ವರೂಪಗಳ ಕುರಿತ ವಿಶ್ವಸಂಸ್ಥೆಯ ವಿಶೇಷ ವರದಿಗಾರರಾಗಿರುವ ಅಶ್ವಿನಿ ಕೆ.ಪಿ ಮಾತನಾಡಿ, “ಎಲ್ಲಾ ರೀತಿಯ ಜನಾಂಗೀಯ ತಾರತಮ್ಯಗಳ ನಿರ್ಮೂಲನೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಭಾರತ ಸಹಿ ಹಾಕಿದೆ. ಆದ್ದರಿಂದ ಇಂತಹ ಹಿಂಸಾಚಾರಕ್ಕೆ ಕಾರಣವಾಗುವ ದ್ವೇಷವನ್ನು ತೊಡೆದು ಹಾಕಲು ಭಾರತ ಬದ್ಧವಾಗಿದೆ ಎಂಬುವುದನ್ನು ಒತ್ತಿ ಹೇಳಿದರು.
ಪಹಲ್ಗಾಮ್ ದಾಳಿಯ ನಂತರ ಮುಸ್ಲಿಮರನ್ನು ದುಷ್ಟರನ್ನಾಗಿ ಬಿಂಬಿಸಲಾಗಿದೆ. ಪಹಲ್ಗಾಮ್ ದಾಳಿಯನ್ನು ಕೋಮುವಾದಗೊಳಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರವಹಿಸಿವೆ. ಅಶ್ರಫ್ ಹತ್ಯೆಯಂತಹ ಘಟನೆಗಳಿಗೆ ಮಾಧ್ಯಮಗಳೇ ಕಾರಣ. ಅವುಗಳೂ ಮತ್ತಷ್ಟೂ ಜವಾಬ್ದಾರಿಯುತವಾಗಿ ವರದಿ ಮಾಡಬೇಕು. ಕಾನೂನನ್ನು ಜಾರಿ ಮಾಡಬೇಕಾದ ಸಂಸ್ಥೆಗಳು ತಳಮಟ್ಟದ ಜನರ ಬಗ್ಗೆ ನಿರ್ಲಕ್ಷ್ಯ ಮತ್ತು ಪಕ್ಷಪಾತ ಪ್ರದರ್ಶಿಸುವುದು ಆಘಾತಕಾರಿಯಾಗಿದೆ ಎಂದರು.
ಆಲ್ ಇಂಡಿಯಾ ಅಸೋಸಿಯೇಷನ್ ಫಾರ್ ಜಸ್ಟೀಸ್ನ ಅಧ್ಯಕ್ಷೆ ಮೈತ್ರೇಯಿ ಕೃಷ್ಣನ್ ಅವರು ಮಾತನಾಡಿ, “ಅಶ್ರಫ್ ಅವರ ಗುಂಪು ಹತ್ಯೆಯನ್ನು 2018ರ ತಹಸೀನ್ ಪೂನಾವಾಲಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ತೀರ್ಪಿನ ಹಿನ್ನೆಲೆಯಲ್ಲಿ ವಿವರಿಸಿದರು. ಇದು ಕೇವಲ ಕೊಲೆಯಲ್ಲ, ಬದಲಿಗೆ ದ್ವೇಷ ಅಪರಾಧ ಎಂದು ಒತ್ತಿ ಹೇಳಿದರು. ಇಂತಹ ದ್ವೇಷ ಅಪರಾಧಗಳು ಸಂವಿಧಾನದ ಮೌಲ್ಯಗಳ ಮೇಲಿನ ದಾಳಿಯಾಗಿದೆ ಎಂದು ವಿವರಿಸಿದರು. ಎಫ್ಐಆರ್ ದಾಖಲಿಸುವಲ್ಲಿ ವಿಳಂಬ ಮಾಡಿದ, ಸುಪ್ರೀಂ ಕೋರ್ಟ್ನ ಗುಂಪು ಹತ್ಯೆಯ ಮಾರ್ಗಸೂಚಿಗಳನ್ನು ಪಾಲಿಸದ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಪ್ರಕರಣದ ತನಿಖೆ ಮತ್ತು ದಾಖಲಾತಿಯಲ್ಲಿ ಪೊಲೀಸರು ತೋರಿದ ನಿರ್ಲಕ್ಷ್ಯದಿಂದಾಗಿ ಆರೋಪಿಗಳಿಗೆ ತಾಂತ್ರಿಕ ಕಾರಣಗಳ ಆಧಾರದ ಮೇಲೆ ಜಾಮೀನು ದೊರೆತಿವೆ ಎಂದು ವಕೀಲರಾಗಿರುವ ವಿನಯ್ ಶ್ರೀನಿವಾಸ್ ಹೇಳಿದರು. ಕಾನೂನು ಮತ್ತು ಸುವ್ಯವಸ್ಥೆಯನ್ನು ಎತ್ತಿಹಿಡಿಯಲು ವಿವಿಧ ನಾಗರಿಕ ಸಮಾಜ ಗುಂಪುಗಳೊಂದಿಗೆ ಸಭೆ ನಡೆಸುವಂತೆ ಅವರು ರಾಜ್ಯ ಸರ್ಕಾರಕ್ಕೆ ಕರೆ ನೀಡಿದರು.
ದ್ವೇಷ ಮತ್ತು ನಕಲಿ ಸುದ್ದಿಗಳ ವಿರುದ್ಧ ಹೊಸ ಕಾನೂನುಗಳನ್ನು ಪರಿಚಯಿಸುವ ಮತ್ತು ವಿಶೇಷ ಕಾರ್ಯಪಡೆಗಳನ್ನು ನೇಮಿಸುವ ಸರ್ಕಾರದ ಕ್ರಮಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಕಾರಣ, ಸರ್ಕಾರವು ಈಗಾಗಲೇ ಅಸ್ತಿತ್ವದಲ್ಲಿರುವ ಮೂಲಭೂತ ಕಾನೂನುಗಳನ್ನು ಜಾರಿಗೆ ತರಲು ವಿಫಲವಾಗಿದೆ ಎಂದು ಅವರು ವಿವರಿಸಿದರು.
ಪೊಲೀಸರ ಮತ್ತು ಸಾರ್ವಜನಿಕರ ಪ್ರತಿಕ್ರಿಯೆಯನ್ನು ಗಮನಿಸಿದರೆ, ತಮಗೆ ತೀವ್ರ ನಿರಾಶೆಯಾಗಿದೆ ಎಂದು ಎಸ್ಐಒ ಕರ್ನಾಟಕದ ಮೊಹಮ್ಮದ್ ಹಯ್ಯಾನ್, ಅಶ್ರಫ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸುವಂತೆ, ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸುವಂತೆ ಮತ್ತು ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುಂಪು ದಾಳಿಗೆ ಬಲಿಯಾದ ಮೊಹಮ್ಮದ್ ಅಶ್ರಫ್ ಅವರ ಸಹೋದರ ಜಬ್ಬಾರ್ ಉಪಸ್ಥಿತರಿದ್ದರು.