
ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮನೆಗಳಿಗೆ ನೀರು ನುಗ್ಗಿ, ಗುಡ್ಡ ಕುಸಿತದಿಂದ ಹಾನಿಯಾಗಿದೆ. ನದಿಗಳ ಒಳಹರಿವಿನಲ್ಲಿ ನಿರಂತರ ಏರಿಕೆಯಾಗಿದೆ. ಸಾಲದೂ ಅಂತ ಆನೆಗಳು ಹೊಲಕ್ಕೆ ನುಗ್ಗಿ ಬೆಳೆಗಳನ್ನ ಹಾನಿ ಮಾಡಿದೆ.
ಕುಸಿದು ಬಿದ್ದ ಗುಡ್ಡ.. ನಾಲ್ಕು ಮನೆಗಳಿಗೆ ಹಾನಿ
ಕಡಲನಗರಿ ಮಂಗಳೂರಿನಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಮಂಗಳೂರು ಹೊರವಲಯದ ಕಣ್ಣೂರಿನ SH ನಗರ ದಯಾಬು ಎಂಬಲ್ಲಿ ಗುಡ್ಡ ಕುಸಿದು ಮನೆಗೆ ಹಾನಿಯಾಗಿದೆ. ಮನೆಯವರು ಮದುವೆ ಸಮಾರಂಭಕ್ಕೆ ತೆರಳಿದ್ದ ವೇಳೆ ದೊಡ್ಡ ಅನಾಹುತ ತಪ್ಪಿದೆ. ಮೈಮೂನಾ ಎಂಬವರ ಮನೆ ಸಂಪುರ್ಣ ಜಖಂಗೊಂಡಿದೆ. ಗುಡ್ಡ ಕುಸಿತದಿಂದ ಇನ್ನೂ ನಾಲ್ಕು ಮನೆಗಳಿಗೆ ಆಂತಕ ಎದರಾಗಿದೆ. ಸ್ಥಳಕ್ಕೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆಗಳನ್ನ ನಡೆಸಿದ್ದಾರೆ. ಅಧಿಕಾರಿಗಳು ಕೆಲವರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.

ಮಳೆಗೆ ಕುಸಿದು ಬಿದ್ದ ರಾಷ್ಟ್ರೀಯ ಹೆದ್ದಾರಿ ತಡೆ ಗೋಡೆ
ಕಾಸರಗೋಡಿನಲ್ಲೂ ಅವಾಂತರ ಸಂಭವಿಸಿದೆ. ಕಾಸರಗೋಡು ಜಿಲ್ಲೆಯಲ್ಲಿ ನೂತನವಾಗಿ ನಿರ್ಮಾಣವಾದ ರಾಷ್ಟ್ರೀಯ ಹೆದ್ದಾರಿಗೆ ಕಟ್ಟಿದ್ದ ತಡೆ ಗೋಡೆ ಕುಸಿದು ಬಿದ್ದಿದೆ. ಎಲ್ಲಿ.. ಯಾವಾಗ.. ಏನ್.. ಆಗುತ್ತೋ ಅನ್ನೋ ಭಯದಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
200 ಅಡಿ ಉದ್ದ, ಒಂದು ಅಡಿಯಷ್ಟು ಕೆಳಗೆ ಕುಸಿದ ಭೂಮಿ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕುಂದಗಲ್ ಗ್ರಾಮದಲ್ಲಿ 200 ಅಡಿ ಉದ್ದ, ಒಂದು ಅಡಿಯಷ್ಟು ಕೆಳಗೆ ಭೂಮಿ ಕುಸಿದಿದೆ. ಭೂ ಕುಸಿತದಿಂದ ಆತಂಕ ಸೃಷ್ಟಿಯಾಗಿದ್ದು, ಸಾಗರ ಎಸಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ದೌಡಾಯಿಸಿ ಪರಿಶೀಲಿಸಿದ್ದಾರೆ.

ಮಳೆ ಅಬ್ಬರ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಗಳು
ಕಾಫಿನಾಡು ಚಿಕ್ಕಮಗಳೂರು ಪಶ್ಚಿಮ ಘಟ್ಟ ಹಾಗೂ ಶೃಂಗೇರಿ ತಾಲೂಕಿನಲ್ಲಿ ಮಳೆ ಆರ್ಭಟ ಜೋರಾಗಿದೆ. ಹೀಗೆ ಮುಂದುವರೆದರೆ ಶೃಂಗೇರಿಯ ಪ್ರಸಿದ್ಧ ತುಂಗಾ ನದಿ ಸ್ನಾನಘಟ್ಟ ಹಾಗೂ ಕಪ್ಪೆ ಶಂಕರ ದೇವಸ್ಥಾನದ ಮೆಟ್ಟಿಲುಗಳು ಸಂಪೂರ್ಣ ಮುಳುಗಡೆಯಾಗುವ ಸಾಧ್ಯತೆ ಇದೆ.
ಪುಷ್ಪಗಿರಿ ತಪ್ಪಲಿನಲ್ಲಿ ಮಳೆ.. ಹಾರಂಗಿಯಲ್ಲಿ ಹೆಚ್ಚಿದ ಒಳಹರಿವು
ಪಶ್ಚಿಮ ಘಟ್ಟ ಶ್ರೇಣಿಯ ಪುಷ್ಪಗಿರಿ ತಪ್ಪಲಿನಲ್ಲಿ ಭಾರೀ ಮಳೆಯಾಗ್ತಿರೋ ಹಿನ್ನಲೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರ್ತಿದ್ದು, ಹಾರಂಗಿ ಜಲಾಶಯ ಗರಿಷ್ಠ ಮಟ್ಟವನ್ನ ತಲುಪಿದೆ. ನದಿ ತಟದ ಜನ ಎಚ್ಚರದಿಂದಿರುವಂತೆ ಕಾವೇರಿ ಜಲಾನಯನ ಅಧಿಕಾರಿಗಳ ಸೂಚನೆ ನೀಡಿದ್ದಾರೆ. ಒಟ್ಟಾರೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದೂ ಕೂಡ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಅಲರ್ಟ್ ಮಾಡಿದ್ದಾರೆ.
