ನಿಗದಿತ ಸಮಯಕ್ಕಿಂತ ಮೊದಲೇ ಕೆಲವು ರಾಜ್ಯಗಳಿಗೆ ಮುಂಗಾರು ಆಗಮನವಾಗಿದ್ದು, ಭಾರಿ ಮಳೆಯಾಗುತ್ತಿದೆ. ಕೇರಳ, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಮುಂದಿನ ಮೂರು ದಿನಗಳಲ್ಲಿ ಮಧ್ಯ ಅರಬ್ಬಿ ಸಮುದ್ರದ ಕೆಲವು ಭಾಗಗಳು, ಮುಂಬೈ ಸೇರಿದಂತೆ ಮಹಾರಾಷ್ಟ್ರದ ಕೆಲವು ಭಾಗಗಳು, ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವು ಭಾಗಗಳು, ಆಂಧ್ರಪ್ರದೇಶ, ತಮಿಳುನಾಡು, ಪಶ್ಚಿಮ, ಮಧ್ಯ ಮತ್ತು ಉತ್ತರ ಬಂಗಾಳಕೊಲ್ಲಿಯ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ.
ನವದೆಹಲಿ, ಮೇ 26: ವಾಡಿಕೆಗಿಂತ ಮೊದಲೇ ಹಲವು ರಾಜ್ಯಗಳಿಗೆ ನೈಋತ್ಯ ಮುಂಗಾರು(Southwest Monsoon) ಆಗಮನವಾಗಿದೆ. ಕರ್ನಾಟಕ, ಕೇರಳ, ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಭಾರಿ ಮಳೆ(Rain)ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೇರಳದ ಬಳಿಕ ಮಹಾರಾಷ್ಟ್ರಕ್ಕೆ ಮುಂಗಾರು ಆಗಮನವಾಗಿದೆ. ಮುಂದಿನ ಎರಡು ದಿನಗಳಲ್ಲಿ ಮುಂಬೈ ತಲುಪಬಹುದು, ರಾಜ್ಯದ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖ ನೀಡಿದೆ.
ಮುಂದಿನ ಮೂರು ದಿನಗಳಲ್ಲಿ ಮಧ್ಯ ಅರಬ್ಬಿ ಸಮುದ್ರದ ಕೆಲವು ಭಾಗಗಳು, ಮುಂಬೈ ಸೇರಿದಂತೆ ಮಹಾರಾಷ್ಟ್ರದ ಕೆಲವು ಭಾಗಗಳು, ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವು ಭಾಗಗಳು, ಆಂಧ್ರಪ್ರದೇಶ, ತಮಿಳುನಾಡು, ಪಶ್ಚಿಮ, ಮಧ್ಯ ಮತ್ತು ಉತ್ತರ ಬಂಗಾಳಕೊಲ್ಲಿಯ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ.
ದೆಹಲಿಯಲ್ಲಿ ಮಳೆ ದೆಹಲಿಗೆ ಮುಂಗಾರು ಆಗಮನ ಸಮೀಪದವಿಲ್ಲದಿದ್ದರೂ ಕೂಡ ಭಾನುವಾರ ಧಾರಾಕಾರ ಮಳೆಯಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ, ರಸ್ತೆಗಳೆಲ್ಲವೂ ಜಲಾವೃತಗೊಂಡು ಕೆರೆಯಂತಾಗಿತ್ತು, ಹಲವು ವಾಹನಗಳು ಸಿಲುಕಿದ್ದವು.
ಈ ಬಾರಿ ಮುಂಗಾರು ನಿಗದಿತ ಸಮಯಕ್ಕಿಂತ 8 ದಿನ ಮೊದಲೇ ಕೇರಳ ತಲುಪಿದೆ. ಐಎಂಡಿ ಪ್ರಕಾರ, ಕೊನೆಯ ಬಾರಿಗೆ ರಾಜ್ಯದಲ್ಲಿ ಮಾನ್ಸೂನ್ ಇಷ್ಟು ಬೇಗ ಆಗಮಿಸಿದ್ದು 2009 ರ ಮೇ 23 ಮತ್ತು 2001 ರಂದು. ಕೇರಳದಲ್ಲಿ ಮಾನ್ಸೂನ್ ಆಗಮನದ ಸಾಮಾನ್ಯ ದಿನಾಂಕ ಜೂನ್ 1. ಆದಾಗ್ಯೂ, 1918 ರಲ್ಲಿ, ಮಾನ್ಸೂನ್ ಮೇ 11 ರಂದು ಕೇರಳಕ್ಕೆ ಆಗಮಿಸಿತ್ತು.
ವಾಡಿಕೆಗಿಂತ ಮೊದಲೇ ಕೇರಳ ಪ್ರವೇಶಿಸಿರುವ ಮುಂಗಾರು, ರಾಜ್ಯದ ಎಲ್ಲೆಡೆ ನಿರಂತರವಾಗಿ ಮಳೆ ಸುರಿಯುಂತೆ ಮಾಡಿದೆ. ಮುಂಗಾರು ಮಾರುತವು ಮಹಾರಾಷ್ಟ್ರವನ್ನೂ ಪ್ರವೇಶಿಸಿದ್ದು, ಕೊಂಕಣದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಈಶಾನ್ಯ ರಾಜ್ಯಗಳಿಗೆ ಕೂಡ ಮುಂಗಾರು ಪ್ರವೇಶ ಆಗಿದೆ.
ಇಡುಕ್ಕಿ ಜಿಲ್ಲೆಯಲ್ಲಿರುವ ಮಲಂಕರ ಅಣೆಕಟ್ಟಿನ ಐದು ಗೇಟುಗಳನ್ನು ತೆಗೆದು ಭಾನುವಾರ ನದಿಗೆ ನೀರು ಹರಿಸಲಾಯಿತು. ಇದರಿಂದ ತೊಡುಪುಳ ಹಾಗೂ ಮೂವಾಟ್ಟುಪುಳ ನದಿ ತೀರದಲ್ಲಿ ವಾಸಿಸುವ ನಿವಾಸಿಗಳಿಗೆ ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ.
ಕೋಳಿಕ್ಕೋಡ್, ಕಾಸರಗೋಡು ಜಿಲ್ಲೆಯ ಹಲವೆಡೆ ಮರಗಳು ಉರುಳಿಬಿದ್ದಿವೆ. ಕೊಲ್ಲಂ ಪಟ್ಟಣದ ಹೃದಯಭಾಗದಲ್ಲಿ ದೊಡ್ಡದಾದ ಫ್ಲೆಕ್ಸ್ ರಸ್ತೆಗೆ ಉರುಳಿಬಿದ್ದಿದ್ದು, ಭಾರಿ ಅನಾಹುತವೊಂದು ಸ್ಪಲ್ಪದರಲ್ಲಿ ತಪ್ಪಿದೆ.