ಮೇ 7 ಬುಧವಾರದಿಂದ ಮೇ 10 ಶನಿವಾರದವರೆಗೆ ನಾಲ್ಕು ದಿನಗಳಲ್ಲಿ ಭಾರತದ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಿಂದ 21 ಭಾರತೀಯ ನಾಗರಿಕರು, ಐವರು ಸಶಸ್ತ್ರ ಪಡೆ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಭಾರತೀಯ ಸೇನೆ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ ಮೇ 7ರಂದು ತಡರಾತ್ರಿ ವಾಯುದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರವೆಂಬಂತೆ ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಭಾರತೀಯ ಹಳ್ಳಿಗಳ ಮೇಲೆ ಪಾಕಿಸ್ತಾನ ಸೇನೆ ಪದೇ ಪದೇ ಶೆಲ್ ದಾಳಿ ನಡೆಸಿದೆ. ಇದರಿಂದ ಅಮಾಯಕ ನಾಗರಿಕರು ಮತ್ತು ಸೇನಾ ಸಿಬ್ಬಂದಿಯ ಸಾವಾಗಿದೆ.
ಜಮ್ಮುವಿನಲ್ಲಿ ಅತಿ ಹೆಚ್ಚು ಸಾವು-ನೋವುಗಳು ಸಂಭವಿಸಿದ ಬಗ್ಗೆ ವರದಿಯಾಗಿದೆ. ಪೂಂಚ್ ಜಿಲ್ಲೆಯಲ್ಲಿ ಹದಿನೈದು ಜನರು ಜೀವ ಕಳೆದುಕೊಂಡಿದ್ದಾರೆ.
ಸತ್ತವರಲ್ಲಿ ಅವಳಿ ಸಹೋದರರಾದ ಝೈನ್ ಅಲಿ ಮತ್ತು ಸಹೋದರಿ ಉರ್ವಾ ಫಾತಿಮಾ ಕೂಡ ಸೇರಿದ್ದಾರೆ. 14 ವರ್ಷದ ಈ ಇಬ್ಬರು ಮಕ್ಕಳು 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮೇ 7 ರಂದು ಪೂಂಚ್ ಪಟ್ಟಣದ ತಮ್ಮ ಮನೆಯ ಹೊರಗೆ ನಿಂತಿದ್ದ ವೇಳೆ ಪಾಕಿಸ್ತಾನದ ನಡೆಸಿದ ಶೆಲ್ ದಾಳಿಗೆ ಬಲಿಯಾಗಿದ್ದಾರೆ. ಈ ಮಕ್ಕಳ ತಂದೆ ರಮೀಝ್ ಖಾನ್ ಗಾಯಗೊಂಡಿದ್ದಾರೆ.
ಅದೇ ದಿನ ಪೂಂಚ್ ಪಟ್ಟಣದ ತನ್ನ ಮನೆಯ ಆವರಣದಲ್ಲಿ ಕುಳಿತಿದ್ದಾಗ 7 ವರ್ಷದ ಮರಿಯಂ ಖಾತೂನ್ ಎಂಬ ಬಾಲಕಿ ಕೂಡ ಶೆಲ್ ದಾಳಿಗೆ ಅಸುನೀಗಿದ್ದಾಳೆ
ಪೂಂಚ್ ಜಿಲ್ಲೆಯ ಮನ್ಕೋಟ್ ಗ್ರಾಮದಲ್ಲಿ ಮೇ 7ರಂದು ನಡೆದ ಭಾರೀ ಗುಂಡಿನ ದಾಳಿಯಲ್ಲಿ 32 ವರ್ಷದ ಬಲ್ವಿಂದರ್ ಕೌರ್ ಸಾವನ್ನಪ್ಪಿದ್ದಾರೆ. ಮೂವರು ಮಕ್ಕಳನ್ನು ಕೌರ್ ಅಗಲಿದ್ದಾರೆ. ಈಕೆಯ ಸಣ್ಣ ಮಗುವಿಗೆ ಕೇವಲ ಒಂದೂವರೆ ವರ್ಷವಾಗಿದೆ.
ಪೂಂಚ್ನ ಮದ್ರಸಾ ಝಿಯಾ-ಉಲ್-ಉಲೂಮ್ನಲ್ಲಿ ಚಿಕ್ಕ ಮಕ್ಕಳಿಗೆ ಪಾಠ ಮಾಡುತ್ತಿದ್ದ 46 ವರ್ಷದ ಧರ್ಮಗುರು ಕಾರಿ ಮುಹಮ್ಮದ್ ಇಕ್ಬಾಲ್ ಕೂಡ ಮೇ 7ರಂದು ಕೊಲ್ಲಲ್ಪಟ್ಟಿದ್ದಾರೆ. ದುರಾದೃಷ್ಟವಶಾತ್, ಭಾರತೀಯ ನಾಗರಿಕನಾಗಿರುವ ಇವರನ್ನು ಅನೇಕ ಟಿವಿ ಚಾನೆಲ್ಗಳು ಹತ್ಯೆಯಾದ ಭಯೋತ್ಪಾದಕ ಎಂದು ಬಿಂಬಿಸಿ ಸುದ್ದಿ ಮಾಡಿತ್ತು.
ಮಾಧ್ಯಮಗಳ ಆರೋಪಗಳಿಗೆ ಧರ್ಮಗುರು ಮುಹಮ್ಮದ್ ಇಕ್ಬಾಲ್ ಅವರ ಕುಟುಂಬ ತೀವ್ರ ಆಕ್ಷೇಪ ಮತ್ತು ದುಖಃ ವ್ಯಕ್ತಪಡಿಸಿದೆ. ಪೂಂಚ್ ಪೊಲೀಸರು ಹೇಳಿಕೆ ನೀಡಿ, “ಇಕ್ಬಾಲ್ ಅವರು ಸ್ಥಳೀಯ ಸಮುದಾಯದಲ್ಲಿ ಗೌರವಾನ್ವಿತ ಧಾರ್ಮಿಕ ವ್ಯಕ್ತಿ, ಅವರು ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಮೇ 7ರಂದು ಪೂಂಚ್ನಲ್ಲಿ ಇಬ್ಬರು ವ್ಯಾಪಾರಿಗಳು ಶೆಲ್ ದಾಳಿಗೆ ಬಲಿಯಾಗಿದ್ದಾರೆ. 55 ವರ್ಷದ ಅಮ್ರೀಕ್ ಸಿಂಗ್ ಮತ್ತು 48 ವರ್ಷದ ರಂಜಿತ್ ಸಿಂಗ್ ಸಾವಿಗೀಡಾದವರು. ಸಣ್ಣ ದಿನಸಿ ಅಂಗಡಿ ನಡೆಸುತ್ತಿದ್ದ ಅಮ್ರೀಕ್ ಸಿಂಗ್, ತನ್ನ ಕುಟುಂಬದ ಏಕೈಕ ಜೀವನಾಧಾರ ಆಗಿದ್ದರು. ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ಅಮ್ರೀಕ್ ಸಿಂಗ್ ಅಗಲಿದ್ದಾರೆ. ಅಂಗಡಿ ತೆರೆಯಲು ಹೋದಾಗ ಶೆಲ್ ದಾಳಿಗೆ ಅಮ್ರೀಕ್ ಸಿಂಗ್ ಬಲಿಯಾಗಿದ್ದಾರೆ. ಇದೇ ವೇಳೆ ಅಮ್ರೀಕ್ ಅವರ ಅಂಗಡಿಯ ಹೊರಗೆ ಇದ್ದ ರಂಜಿತ್ ಸಿಂಗ್ ಕೂಡ ಸಾವನ್ನಪ್ಪಿದ್ದಾರೆ.
ಮೇ 7ರಂದು ಬೆಳಿಗ್ಗೆ ಗುರುದ್ವಾರದಿಂದ ಮನೆಗೆ ಹೋಗುತ್ತಿದ್ದಾಗ ಶೆಲ್ನ ಚೂರುಗಳು ಬಡಿದು 54 ವರ್ಷದ ನಿವೃತ್ತ ಸೈನಿಕ ಅಮರ್ಜೀತ್ ಸಿಂಗ್ ಸಾವನ್ನಪ್ಪಿದ್ದಾರೆ.
ಮೇ 7ರಂದು ಪೂಂಚ್ನಲ್ಲಿ 13 ವರ್ಷದ ಮಗು ವಿಹಾನ್ ಭಾರ್ಗವ್ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ.
ಮೇ 10 ಶನಿವಾರ, ಪೂಂಚ್ನ ಕಾಂಗ್ರಾ-ಗಲ್ಹುಟ್ಟಾ ಗ್ರಾಮದಲ್ಲಿ ಮನೆ ಮೇಲೆ ನಡೆದ ಶೆಲ್ ದಾಳಿಯಲ್ಲಿ 56 ವರ್ಷದ ರಶೀದಾ ಬಿ ಎಂಬವರು ಕೊನೆಯುಸಿರೆಳೆದಿದ್ದಾರೆ.
ಕಾಶ್ಮೀರ ಕಣಿವೆಯ ಬಾರಾಮುಲ್ಲಾ ಜಿಲ್ಲೆಯಲ್ಲಿ ಒಬ್ಬರು ನಾಗರಿಕರ ಸಾವಿನ ಬಗ್ಗೆ ವರದಿಯಾಗಿದೆ. ಉರಿ ಪ್ರದೇಶದಲ್ಲಿ ಗಡಿಯಾಚೆಗಿನ ಶೆಲ್ ದಾಳಿಯಲ್ಲಿ 47 ವರ್ಷದ ಗೃಹಿಣಿ ನರ್ಗಿಸ್ ಬೇಗಂ ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಬಳಲುತ್ತಿರುವ ತನ್ನ 14 ವರ್ಷದ ಮಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದಾಗ ಬೇಗಂ ಸಾವಿಗೀಡಾಗಿದ್ದಾರೆ.
ಮೇ 10ರಂದು ರಾಜೌರಿ ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ಶೆಲ್ಗಳು ಬಡಿದು ಬಿಹಾರದ ಇಬ್ಬರು ನಿವಾಸಿಗಳು ಸಾವನ್ನಪ್ಪಿದ್ದು, ಅವರನ್ನು 2 ವರ್ಷದ ಆಯಿಷಾ ನೂರ್ ಮತ್ತು 35 ವರ್ಷದ ಮುಹಮ್ಮದ್ ಶೋಹಿಬ್ ಎಂದು ಗುರುತಿಸಲಾಗಿದೆ.
ಅದೇ ದಿನ, ಮನೆಯೆ ಮೇಲೆ ಶೆಲ್ ಬಡಿದು ರಾಜೌರಿಯ ಹೆಚ್ಚುವರಿ ಜಿಲ್ಲಾ ಅಭಿವೃದ್ಧಿ ಆಯುಕ್ತ ರಾಜ್ ಕುಮಾರ್ ಥಪ್ಪಾ ಅವರು ಸಾವನ್ನಪ್ಪಿದ್ದಾರೆ.
ಮೇ.7 ಬುಧವಾರ, ಪೂಂಚ್ನಲ್ಲಿ ಪಾಕಿಸ್ತಾನದ ಶೆಲ್ ದಾಳಿಯಿಂದ ಸೇನೆಯ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಸಾವನ್ನಪ್ಪಿದ್ದಾರೆ.
ಮೇ 10ರಂದು ಆರ್ಎಸ್ ಪುರ ಸೆಕ್ಟರ್ನಲ್ಲಿ ರಾತ್ರಿಯಿಡೀ ನಡೆದ ಗುಂಡಿನ ಚಕಮಕಿ ಮತ್ತು ಶೆಲ್ ದಾಳಿಯಲ್ಲಿ ಗಾಯಗೊಂಡು ಜೆ & ಕೆ ಲೈಟ್ ಇನ್ಫೆಂಟ್ರಿಯ ರೈಫಲ್ಮ್ಯಾನ್ ಸುನಿಲ್ ಕುಮಾರ್ (25) ಸಾವಿಗೀಡಾಗಿದ್ದಾರೆ.
ಭಾರತೀಯ ವಾಯುಪಡೆಯ 36ನೇ ವಿಂಗ್ನಲ್ಲಿ ವೈದ್ಯಕೀಯ ಸಹಾಯಕರಾಗಿದ್ದ 36 ವರ್ಷದ ಸಾರ್ಜೆಂಟ್ ಸುರೇಂದ್ರ ಕುಮಾರ್ ಮೋಗಾ ಅವರು, ಮೇ 10 ರಂದು ಉಧಂಪುರದಲ್ಲಿ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
ಅದೇ ದಿನ, ಜಮ್ಮುವಿನ ಆರ್ಎಸ್ ಪುರ ಸೆಕ್ಟರ್ನಲ್ಲಿ ಶೆಲ್ ದಾಳಿಯಿಂದಾಗಿ ಗಡಿ ಭದ್ರತಾ ಪಡೆಯ ಸಬ್-ಇನ್ಸ್ಪೆಕ್ಟರ್ ಮೊಹಮ್ಮದ್ ಇಮ್ತಿಯಾಝ್ ಕೊನೆಯುಸಿರೆಳೆದಿದ್ದಾರೆ.
ಹಿಮಾಚಲ ಪ್ರದೇಶದ ನಿವಾಸಿ ಮತ್ತು ಸೇನಾ ಸುಬೇದಾರ್ ಮೇಜರ್ ಆಗಿದ್ದ ಪವನ್ ಕುಮಾರ್ ಅವರನ್ನು ಮೇ 10 ರಂದು ಪೂಂಚ್ನ ಕೃಷ್ಣ ಘರಿ ಸೆಕ್ಟರ್ನಲ್ಲಿ ಕೊಲ್ಲಲಾಗಿದೆ.