ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷ ನಮಗೆ ಸಂಬಂಧ ಇಲ್ಲ ಎಂದು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿದ್ದಾರೆ. ಆ ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಪರಮಾಣು ಯುದ್ಧವಾಗಿ ಮಾರ್ಪಡದೇ ಇರಲಿ ಎಂದು ನಾನು ಬಯಸುತ್ತೇನೆ ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು, ಭಾರತ ಮತ್ತು ಪಾಕಿಸ್ಥಾನದ ನಡುವೆ ನಡೆಯುತ್ತಿರುವ ದಾಳಿಗಳು ಅಮೆರಿಕದ ನಿಯಂತ್ರಣ ಸಾಮರ್ಥ್ಯಕ್ಕೆ ಯಾವುದೇ ಸಂಬಂಧವಿಲ್ಲ. ನಾವು ಆ ದೇಶಗಳನ್ನು ನಿಯಂತ್ರಣ ಮಾಡಲಾಗಲ್ಲ. ಪಾಕಿಸ್ತಾನದ ಮೇಲೆ ಭಾರತ ಹಿಡಿತ ಸಾಧಿಸಿದೆ. ಪ್ರತಿಯಾಗಿ ಪಾಕ್ ಕೂಡ ದಾಳಿ ಮಾಡಿದೆ. 2 ದೇಶಗಳ ನಡುವಿನ ಉದ್ವಿಗ್ನತೆ ಕಡಿಮೆ ಮಾಡಲು ಒತ್ತಾಯಿಸಬಹುದು ಅಷ್ಟೇ. ಎರಡು ರಾಷ್ಟ್ರಗಳ ನಡುವಿನ ಘರ್ಷಣೆಯಲ್ಲಿ ನಾವು ಭಾಗಿಯಾಗಲ್ಲ. ಆದರೆ ತೀವ್ರಗೊಂಡ ಘರ್ಷಣೆ ಆದಷ್ಟು ಶಮನಗೊಳ್ಳಲಿ ಎನ್ನುವುದು ನಮ್ಮ ಆಶಯ ಎಂದು ಹೇಳಿದ್ದಾರೆ.

ಇತ್ತೀಚೆಗೆ ಭಾರತ ಹಾಗೂ ಪಾಕಿಸ್ತಾನದ ಕುರಿತು ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ದೇಶಗಳ ನಡುವಿನ ಉದ್ವಿಗ್ನತೆ ಭಯಾನಕ ಎಂದು ಹೇಳಿದ್ದರು. ನಮಗೆ ಎರಡು ರಾಷ್ಟ್ರಗಳು ಚೆನ್ನಾಗಿ ಗೊತ್ತಿವೆ. ಇರುವ ಸಮಸ್ಯೆಯಲ್ಲಿ ಪರಿಹಾರ ಕಂಡುಕೊಂಡು ಇರುವುದನ್ನು ಬಯಸುತ್ತೇವೆ. ಮುಂದುವರೆಸಿಕೊಂಡು ಹೋಗುವ ಬದಲು ನಿಲ್ಲಿಸುವುದು ಉತ್ತಮ ಎಂದು ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದರು.
ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಭಾರತೀಯರ ಮೇಲೆ ಭಯೋತ್ಪಾದಕರು ಏಕಾಏಕಿ ಗುಂಡಿನ ದಾಳಿ ಮಾಡಿ ಜೀವ ತೆಗೆದಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡುತ್ತಿದೆ. ಆಪರೇಷನ್ ಸಿಂಧೂರ ಹೆಸರಲ್ಲಿ ದಾಳಿ ನಡೆಸಲಾಗುತ್ತಿದ್ದು ಪಾಕ್ನಲ್ಲಿದ್ದ 9 ಭಯೋತ್ಪಾದಕ ಸ್ಥಳಗಳನ್ನು ಧ್ವಂಸ ಮಾಡಸಲಾಗಿದೆ. ಅಲ್ಲದೇ ಅಲ್ಲಿನ ಪ್ರಮುಖ ನಗರಗಳ ಮೇಲೆ ದಾಳಿ ಮಾಡಿ ಒಂದೊಂದಕ್ಕೂ ಸರಿಯಾದ ಲೆಕ್ಕ ಭಾರತ ನೀಡುತ್ತಿದೆ.