ಮಂಗಳೂರು, ಎ.27 : ನಗರ ಹೊರ ವಲಯದ ಕುಡುಪು ಬಳಿ ರವಿವಾರ ಸಂಜೆ ವೇಳೆ ಕಲ್ಲಿನಿಂದ ಜಜ್ಜಿ ಕೊಲೆಯಾದ ಸ್ಥಿತಿಯಲ್ಲಿ ಅಂದಾಜು 35ರಿಂದ 40 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಯಾರು ಯಾವ ಉದ್ದೇಶಕ್ಕೆ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿಲ್ಲ. ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಅಸಹಜ ಸಾವಿನ ಬಗ್ಗೆ ಕೇಸು ದಾಖಲಿಸಿದ್ದಾರೆ.

ಮೃತನ ಗುರುತು ಪತ್ತೆಯಾಗಿಲ್ಲ. ಸ್ಥಳೀಯರ ಮಾಹಿತಿ ಪ್ರಕಾರ, ಕುಡುಪು ದೇವಸ್ಥಾನ ಬಳಿಯ ಗದ್ದೆಯಲ್ಲಿ ಕ್ರಿಕೆಟ್ ನಡೆಯುತ್ತಿದ್ದಾಗ ಪಾನಮತ್ತ ವ್ಯಕ್ತಿಯೊಬ್ಬ ಬಂದು ಗಲಾಟೆ ಮಾಡಿದ್ದಾನೆ. ಆತನ ಮೇಲೆ ತಂಡವೊಂದು ಹಲ್ಲೆ ಮಾಡಿದ್ದು, ಆನಂತರ ಬಿಟ್ಟು ಹೋಗಿದ್ದರು ಎನ್ನಲಾಗಿದೆ.

ಗಾಯಗೊಂಡಿದ್ದ ವ್ಯಕ್ತಿ ಅಲ್ಲಿಯೇ ಬಿದ್ದುಕೊಂಡಿದ್ದು, ಬಿಸಿಲಿನಿಂದಾಗಿ ಸಾವನ್ನಪ್ಪಿದ್ದಾನೆ. ಆದರೆ ಈ ವ್ಯಕ್ತಿ ಯಾರು, ಎಲ್ಲಿಂದ ಬಂದಿದ್ದ ಅನ್ನುವುದು ಪೊಲೀಸರಿಗೆ ತಿಳಿದಿಲ್ಲ. ಹಿಂದಿ ಮಾತನಾಡುತ್ತಿದ್ದ ಎಂದು ಕೆಲವರು ಹೇಳಿದ್ದಾರೆ. ಪೊಲೀಸರು ಸಾವಿನ ಕಾರಣದ ಬಗ್ಗೆ ಪೋಸ್ಟ್ ಮಾರ್ಟಂ ರಿಪೋರ್ಟ್ ಬಳಿಕವೇ ಹೇಳಬೇಕು. ಮೇಲ್ನೋಟಕ್ಕೆ ಕೊಲೆಯೆಂದು ಅನಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
