ಮಂಗಳೂರು: ಸಂವಿಧಾನಕ್ಕೆ ವಿರುದ್ಧವಾದದ್ದು ಯಾವುದೂ ಕೂಡ ಸರಿಯಲ್ಲ. ವಕ್ಫ್ ತಿದ್ದುಪಡಿ ಡ್ರಾಫ್ಟ್ ಮೇಲ್ನೋಟಕ್ಕೆ ನೋಡುವಾಗ ಸಂವಿಧಾನಕ್ಕೆ ವಿರುದ್ಧ ಅಂತ ಕಾಣ್ತದೆ ಎಂದು ಸ್ಪೀಕರ್ ಯು.ಟಿ.ಖಾದರ್ (U.T.Khader) ಅಭಿಪ್ರಾಯಪಟ್ಟರು.

ವಕ್ಫ್ ತಿದ್ದುಪಡಿ (Waqf Amendment Bill) ವಿರುದ್ಧ ವ್ಯಾಪಕ ಆಕ್ರೋಶ, ಪ್ರತಿಭಟನೆ ಕುರಿತು ಮಂಗಳೂರಿನಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಸಂವಿಧಾನಕ್ಕೆ ಅನುಗುಣವಾಗಿ ಇದ್ದರೆ ದೇಶದ ಎಲ್ಲಾ ಜನರು ಸಂತೋಷವಾಗಿ ಇರ್ತಾರೆ. ಇವತ್ತು ಈ ತಿದ್ದುಪಡಿ ಸಂವಿಧಾನ ವಿರೋಧಿಯಾಗಿದೆ. ಅದನ್ನ ಜನರು ಒಪ್ಪಲು ಸಾಧ್ಯವಿಲ್ಲ. ಏನೋ ದುರುದ್ದೇಶಪೂರ್ವಕವಾಗಿ ರೂಪಿಸಲಾದ ತಿದ್ದುಪಡಿ ಕಾಯಿದೆ ಆಗಿದೆ ಎಂದು ಹೇಳಿದರು

ಏನೋ ಒಂದು ಉದ್ದೇಶದಿಂದ ಧ್ವನಿವರ್ಧಕ ಬಂದ್ ಮಾಡಿ ಬಿಂಬಿಸಿದ್ರು. ತಿಂಗಳುಗಟ್ಟಲೇ ನಾಟಕ ಆಯ್ತು, ಜನರಲ್ಲಿ ಗೊಂದಲ ಮೂಡಿಸಿದ್ರು. ಈಗ ಅಧಿಕಾರಿಗಳು ಬಂದು ಯಕ್ಷಗಾನವನ್ನೇ ನಿಲ್ಲಿಸ್ತಾ ಇದ್ದಾರೆ. ಯಾಕೆ ನಿಲ್ಲಿಸ್ತಾರೆ ಅಂದರೆ, ಇವರು ಮಾಡಿದ ಕಾನೂನಿನ ಕಾರಣಕ್ಕಾಗಿ ನಿಲ್ಲಿಸ್ತಾರೆ. ಕಾನೂನನ್ನ ದುರುದ್ದೇಶ ಇಟ್ಟುಕೊಂಡು ಮಾಡಿದ್ರೆ ಹೀಗೇ ಆಗೋದು. ಒಬ್ಬೊಬ್ಬ ಅಧಿಕಾರಿ ಬಂದಾಗ ಅವರಿಗೆ ಇಷ್ಟ ಬಂದ ಹಾಗೆ ಕಾನೂನು ಪಾಲಿಸ್ತಾರೆ. ಹಾಗಾಗಿ ಸಮಸ್ಯೆಯಿಂದ ಮತ್ತೆ ಮತ್ತೆ ಸಮಸ್ಯೆ ಸೃಷ್ಟಿಸಬಾರದು ಎಂದು ತಿಳಿಸಿದರು.

ಸಂವಿಧಾನಕ್ಕೆ ಅನುಗುಣವಾಗಿ ಇರದ ಈ ತಿದ್ದುಪಡಿ ಸರಿಯಲ್ಲ. ಸ್ವಾಭಾವಿಕವಾಗಿ ಇದರ ವಿರುದ್ಧ ಜನರು ಪ್ರತಿಭಟನೆ ಮಾಡ್ತಾ ಇದ್ದಾರೆ. ಪ್ರತಿಭಟನೆ ಪ್ರಜಾಪ್ರಭುತ್ವದ ಒಂದು ಸೌಂದರ್ಯ. ಅದು ಕಾನೂನು ರೀತಿಯಲ್ಲಿ ಇರಬೇಕು. ಸಂವಿಧಾನಾತ್ಮಕ ರೀತಿಯಲ್ಲೇ ಹೋರಾಟ ಮಾಡಬೇಕು. ಉಲೇಮಾಗಳು ಗೌರವಪೂರ್ವಕವಾಗಿ ಪ್ರತಿಭಟನೆ ಮಾಡ್ತಾ ಇದ್ದಾರೆ. ಎಲ್ಲಾ ಯುವಕರು ಉಲೇಮಾಗಳ ಹಾಗೂ ಹಿರಿಯರ ಸಲಹೆ, ಮಾರ್ಗದರ್ಶನ ಪಡೆಯಿರಿ ಎಂದು ತಿಳಿಹೇಳಿದರು.
