ಮಾನವೀಯತೆ ಇಂದಿಗೂ ಜೀವಂತವಾಗಿದೆ ಎಂಬುದಕ್ಕೆ ಉತ್ತಮ ನಿದರ್ಶನದಂತಿರುವ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದ್ದು, ಕಳ್ಳತನ ಮಾಡಲು ಬಂದು ಸಿಕ್ಕಿಬಿದ್ದ ಕಳ್ಳನನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸುವ ಸಂದರ್ಭದಲ್ಲಿ ಆತ ನನಗೆ ಹಸಿವಾಗ್ತಿದೆ ಏನಾದ್ರೂ ಕೊಡಿ ಎಂದು ಕೇಳಿಕೊಂಡಾಗ ಊರಿನ ಯುವಕರು ಊಟ ಕೊಟ್ಟು ಆತನ ಹಸಿವು ನೀಗಿಸಿದ್ದಾರೆ
ಕಳ್ಳತನ ಮಾಡಲು ಹೋಗಿ ಸಿಕ್ಕಿ ಬಿದ್ರೆ, ಆ ಕಳ್ಳರನ್ನು ಕಂಬಕ್ಕೆ ಕಟ್ಟಿಯೋ ಅಥವಾ ಕೈ ಕಾಲನ್ನು ಹಗ್ಗದಲ್ಲಿ ಕಟ್ಟಿಯೋ ಅವರಿಗೆ ಸರಿಯಾಗಿ ಧರಮದೇಟು ನೀಡುತ್ತಾರೆ. ಈ ನಡುವೆ ಏನಾದ್ರೂ ಸ್ವಲ್ಪ ಕುಡಿಯಲು ನೀರು ಕೊಡಿ ಎಂದು ಕೇಳಿದ್ರೆ, ಒಂದೇಟು ಜಾಸ್ತಿಯೇ ಕೊಟ್ಟು ನಿನ್ಗೆ ನೀರು ಬೇಕಾ ಮಗ್ನೆ ಎಂದು ಪೊಲೀಸರಿಗೆ ಒಪ್ಪಿಸುತ್ತಾರೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಕಳ್ಳತನ ಮಾಡಲು ಬಂದು ಸಿಕ್ಕಿಬಿದ್ದ ಕಳ್ಳನನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸುವ ಸಂದರ್ಭದಲ್ಲಿ ಆತ ನನಗೆ ಹಸಿವಾಗ್ತಿದೆ ಏನಾದ್ರೂ ಕೊಡಿ ಎಂದು ಕೇಳಿಕೊಂಡಾಗ ಊರಿನ ಯುವಕರು ಊಟ ಮಾಡಿಸಿ ಆತನ ಹಸಿವು ನೀಗಿಸಿ ಕೊನೆಗೆ ಆ ಕಳ್ಳನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.

ಈ ಘಟನೆ ತೆಲಂಗಾಲಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದ್ದು, ರೆಡ್ ಹ್ಯಾಂಡ್ ಸಿಕ್ಕಿ ಬಿದ್ದ ಕಳ್ಳನಿಗೆ ಊಟ ಮಾಡಿಸಿ ನಂತರ ಆತನನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇಲ್ಲಿನ ನಾರ್ಕೆಟ್ಪಲ್ಲಿ ಮಂಡಲದ ಎಲ್ಲರೆಡ್ಡಿಗುಡೆಂ ಗ್ರಾಮಕ್ಕೆ ಕುಖ್ಯಾತ ಕಳ್ಳ ಪೋಗಲ್ ಗಣೇಶ್ ಕಳ್ಳತನಕ್ಕೆ ಬಂದಿದ್ದು, ಆ ದುರಾದೃಷ್ಟಕ್ಕೆ ಆ ಗ್ರಾಮದ ಯುವಕರ ಕೈಯಲ್ಲಿ ಆತ ಸಿಕ್ಕಿಬಿದ್ದಿದ್ದಾನೆ. ಹೀಗೆ ಸಿಕ್ಕಿಬಿದ್ದ ಕಳ್ಳನನ್ನು ಇನ್ಮುಂದೆ ಕಳ್ಳತನ ಮಾಡ್ತೀಯಾ ಎಂದು ಹೇಳಿ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇವರ ಏಟನ್ನು ತಾಳಲಾರದೆ ಕಳ್ಳ ಹಸಿವಾಗ್ತಿದೆ ಊಟ ಕೊಡಿ ಎಂದು ಕೇಳಿಕೊಂಡಿದ್ದು, ಆ ಸಂದರ್ಭದಲ್ಲಿ ಕೋಪವನ್ನೆಲ್ಲಾ ಪಕ್ಕಕ್ಕಿಟ್ಟು ಮಾನವೀಯತೆಯ ದೃಷ್ಟಿಯಿಂದ ಗ್ರಾಮದ ಯುವಕರು ಕಳ್ಳನಿಗೆ ಊಟ ಮಾಡಿಸಿದ್ದಾರೆ. ಹಸಿವನ್ನು ನೀಗಿಸಿದ ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಕುರಿತ ಪೋಸ್ಟ್ ಒಂದನ್ನು ಸಾಯಿ ಶೇಖರ್ ಅಂಗಾರ (sayesekhar) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಂಬಕ್ಕೆ ಕಟ್ಟಿ ಹಾಕಿದ್ದಂತಹ ಕಳ್ಳನಿಗೆ ಯುವಕನೊಬ್ಬ ತನ್ನ ಕೈಯಾರೆ ಊಟ ತಿನ್ನಿಸುತ್ತಿರುವ ದೃಶ್ಯವನ್ನು ಕಾಣಬಹುದು. ಹಸಿವು ಎಂದಾಗ ಕಳ್ಳನಿಗೂ ಊಟ ಕೊಟ್ಟು ಮಾನವೀಯತೆ ಮೆರೆದ ಈ ಯುವಕರ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

