ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಆರೋಪದಡಿ ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಎಫ್ಐಆರ್ ದಾಖಲಾಗಿದೆ. ಲೈಂಗಿಕ ದೌರ್ಜನ್ಯದ ಫೋಟೋ, ಸೆಲ್ಫಿ ವಿಡಿಯೋ ಮಾಡಿ ಬ್ಲ್ಯಾಕ್ಮೇಲ್ ಮಾಡಿದ್ದಾರೆಂದು ಆರೋಪ ಕೇಳಿಬಂದಿದೆ. ಸದ್ಯ ಪುತ್ತಿಲ ವಿರುದ್ಧ ಐಪಿಸಿ ಸೆಕ್ಷನ್ 417, 354A, 506ರಡಿ ಕೇಸ್ ದಾಖಲಾಗಿದೆ.

ಮಂಗಳೂರು, ಸೆಪ್ಟೆಂಬರ್ 01: ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಡಿ ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿರುವ ದಕ್ಷಿಣ ಕನ್ನಡ ಮಹಿಳಾ ಠಾಣೆಯಲ್ಲಿ ಐಪಿಸಿ 417, 354A, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

47 ವರ್ಷದ ಮಹಿಳೆಯಿಂದ ಬೆಂಗಳೂರಿನ ಪೈ ವಿಸ್ತಾ ಹೋಟೆಲ್ನಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಮಾಡಲಾಗಿದ್ದು, 2023 ಜೂನ್ನಲ್ಲಿ ಬೆಂಗಳೂರಿನ ಪೈ ವಿಸ್ತಾ ಹೋಟೆಲ್ನಲ್ಲಿ ಲೈಂಗಿಕ ದೌರ್ಜನ್ಯವೆಸಗಿ ಫೋಟೊ, ಸೆಲ್ಫಿ, ವಿಡಿಯೋ ಮಾಡಿ ಬ್ಲ್ಯಾಕ್ಮೇಲ್ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಅರುಣ್ ಕುಮಾರ್ ಪುತ್ತಿಲ ಪುತ್ತೂರು ವಿಧಾನಸಭಾ ಚುನಾವಣೆಗೆ ಹಿಂದುತ್ವದ ಹೆಸರಿನಲ್ಲಿ ಬಿಜೆಪಿಗೆ ಠಕ್ಕರ ಕೊಟ್ಟು ಬಂಡಾಯ ಸ್ಪರ್ಧೆ ಮಾಡಿ ಪ್ರಖ್ಯಾತಿ ಪಡೆದಿದ್ದರು. ಪುತ್ತಿಲ ಅವರ ಪ್ರಖ್ಯಾತಿ ಮತ್ತು ಹಿಂದುತ್ವದ ಪ್ರತಿಪಾದನೆಗೆ ಮಹಿಳೆ ಫಿದಾ ಆಗಿದ್ದರು. ಪುತ್ತಿಲಗೆ ಅಭಿಮಾನಿ ಆಗಿ ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನಲ್ಲಿ ಏನಿದೆ?
ಅರುಣ್ ಪುತ್ತಿಲ ಅವರು, 2023ರಲ್ಲಿ ಪುತ್ತೂರು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಿಜೆಪಿಗೆ ಠಕ್ಕರ್ ಕೊಟ್ಟು ಹಿಂದುತ್ವದ ಹೆಸರಿನಲ್ಲಿ ಸ್ಪರ್ಧೆ ಮಾಡಿ ಪ್ರಖ್ಯಾತಿ ಪಡೆದಿದ್ದರು. ಪುತ್ತಿಲ ಅವರ ಪ್ರಖ್ಯಾತಿ ಮತ್ತು ಹಿಂದುತ್ವದ ಪ್ರತಿಪಾದನೆಯಿಂದ ಮಹಿಳೆ ಅಭಿಮಾನಿಯಾಗಿದ್ದರು. ಪುತ್ತಿಲಗೆ ಅಭಿಮಾನಿ ಆಗಿ ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡುತ್ತಿದ್ದರು. ಜೊತೆಗೆ ಪುತ್ತಿಲಗೆ ನೈತಿಕ ಬೆಂಬಲವನ್ನೂ ನೀಡುತ್ತಿದ್ದರು. ಬಳಿಕ ಪರಿಚಯವಾದ ಮೇಲೆ ಪುತ್ತಿಲ ಅವರು 2023ರ ಜೂನ್ನಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ಗೆ ಕರೆಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಸಿದ್ದಾರೆ. ಬಳಿಕ ದೂರುದಾರರ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ.

2024ರ ಲೋಕಸಭಾ ಚುನಾವಣೆಯ ಬಳಿಕ ನನ್ನೊಂದಿಗೆ ಮಾತುಕತೆ ಕಡಿಮೆಗೊಳಿಸಿದ್ದರು. ನನ್ನನ್ನು ಸಂಪೂರ್ಣವಾಗಿ ಶೋಷಣೆಗೆ ಒಳಪಡಿಸಿ ಅವರ ಆಸೆ ತೀರಿಸಿಕೊಂಡು ನನ್ನನ್ನು ದೂರ ಮಾಡಿದರು. ಆ ಭಯದಿಂದ ನನ್ನ ನಿವಾಸವನ್ನು ಪುತ್ತೂರಿಗೆ ಸ್ಥಳಾಂತರಿಸಿ ಬಾಡಿಗೆ ಮನೆಯಲ್ಲಿ ನನ್ನ ಮಗಳೊಂದಿಗೆ ಉದ್ಯೋಗ ಹಾಗೂ ವರಮಾನವಿಲ್ಲದೇ ಕಷ್ಟಪಡುತ್ತಿದ್ದೇನೆ. ನನಗೆ ಮತ್ತು ನನ್ನ ಮಗಳಿಗೆ ಪುತ್ತಿಲರು ಮಾಡಿದ ದ್ರೋಗ, ಅನ್ಯಾಯ, ಅಕ್ರಮ ವಿಶ್ವಾಸ ದ್ರೋಹಕ್ಕೆ ಕಾನೂನು ಕ್ರಮ ಕೈಗೊಂಡು ನನಗೆ ಮತ್ತು ನನ್ನ ಮಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.