ಮುಡಾ ಹಗರಣ ಸಂಬಂಧ ತಮ್ಮ ವಿರುದ್ಧ ತನಿಖೆಗೆ ಅನಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಸಿಎಂ ಸಿದ್ದರಾಮಯ್ಯನವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಹಿರಿಯ ವಕೀಲರು ನಾಳೆಯೇ ದೆಹಲಿಯಿಂದ ಬೆಂಗಳೂರಿಗೆ ಬಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಿದ್ದಾರೆ. ಇನ್ನು ಸಿಎಂ ಪರ ವಕೀಲರಿಗೆ ವಾದ ಮಂಡಿಸಲು ಕೇಂದ್ರ ಸರ್ಕಾರ ಚೆಕ್ ಲಿಸ್ಟ್ ಅಸ್ತ್ರ ಸಿಕ್ಕಿದೆ. ಏನಿದು ಕೇಂದ್ರದ ಚೆಕ್ ಲಿಸ್ಟ್? ಇಲ್ಲಿದೆ ವಿವರ

ಬೆಂಗಳೂರು, (ಆಗಸ್ಟ್ 18): ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶದ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾಗಿದೆ. ಹೀಗಾಗಿ ಕಾನೂನು ಸಮರದ ಕುರಿತು ಸಿಎಂ ಸಿದ್ದರಾಮಯ್ಯ ಹಿರಿಯ ವಕೀಲರೊಂದಿಗೆ ಸಮಾಲೋಚನೆ ನಡೆಸಿದ್ದು, ನಾಳೆಯೇ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಿದ್ದಾರೆ. ಇದಕ್ಕಾಗಿಯೇ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಕಪಿಲ್ ಸಿಬಲ್ ಅವರು ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಇನ್ನು ಪ್ರಮುಖವಾಗಿ ಸಿಎಂ ಪರ ವಕೀಲರ ವಾದಕ್ಕೆ ಕೇಂದ್ರ ಸರ್ಕಾರದ ಚೆಕ್ ಲಿಸ್ಟ್ ಅಸ್ತ್ರ ಸಿಕ್ಕಿದ್ದು, ಪ್ರಾಸಿಕ್ಯೂಷನ್ಗೆ ನೀಡುವ ನಿಯಮ ಇದಲ್ಲ ಎಂದು ವಾದಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ನಾಳೆಯಿಂದ ಕಾನೂನು ಸಮರ
14 ಸೈಟ್ ವಿಚಾರವೇ ಇದೀಗ ಸಿಎಂಗೆ ಸಂಕಷ್ಟ ತಂದೊಡ್ಡಿದೆ. ರಾಜ್ಯಪಾಲರು ಸಿಎಂ ವಿರುದ್ಧ ತನಿಖೆಗೆ ಆದೇಶ ನೀಡಿದ್ದು, ಕಾಂಗ್ರೆಸ್ ಪಾಳಯದಲ್ಲಿ ತಳಮಳ ಸೃಷ್ಟಿಯಾಗಿದೆ. ಆದರೂ ಜಗ್ಗದ ಕೈ ಪಡೆ ಕಾನೂನು ಸಮರ ಸಾರಿದೆ. ನಾಳೆಯಿಂದ ಅಸಲಿ ಕಾನೂನು ಯುದ್ಧ ಶುರುವಾಗಲಿದೆ. ಇನ್ನು ಕಾನೂನು ಸಮರಕ್ಕೆ ತೊಡೆ ತಟ್ಟಿ ನಿಂತಿರೋ ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಬಲ ಸಿಕ್ಕಿದೆ. ಹೈಕಮಾಂಡ್ ಕೂಡಾ ನೀವು ಕಾನೂನು ಹೋರಾಟ ನಡೆಸಿ, ಹೈಕಮಾಂಡ್ ನಿಮ್ಮ ಜೊತೆಗಿರುತ್ತೆ ಅಂತಾ ಸೂಚನೆ ಕೊಟ್ಟಿದೆ.

ಕೇಂದ್ರದ ಚೆಕ್ ಲಿಸ್ಟ್ನಲ್ಲೇನಿದೆ?
ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲು ಕೇಂದ್ರ ಸರ್ಕಾರವೇ 2021ರ ಸೆಪ್ಟೆಂಬರ್ನಲ್ಲಿ ಚೆಕ್ಲಿಸ್ಟ್ ಮಾಡಿದೆ. ಡಿಜಿ-ಐಜಿಪಿ ಮಟ್ಟದ ಅಧಿಕಾರಿಗಳೇ ಪ್ರಾಸಿಕ್ಯೂಷನ್ಗೆ ಕೇಳಬೇಕು. ಅಲ್ಲದೇ ಪ್ರಾಸಿಕ್ಯೂಷನ್ಗೆ ನೀಡುವಾಗ ಯಾವುದಾದರೂ ತನಿಖಾ ವರದಿ ಇರಬೇಕು ಎಂಬುವುದನ್ನು ಕೇಂದ್ರ ಸರ್ಕಾರ ಚೆಕ್ಲಿಸ್ಟ್ ಮಾಡಿದೆ. ಆದ್ರೆ, ಇದೀಗ ಸಿದ್ದರಾಮಯ್ಯನವರ ವಿರುದ್ಧ ಯಾವುದೇ ತನಿಖಾ ವರದಿ ಇಲ್ಲದೇ, ಆಧಾರವಿಲ್ಲದೇ ಪ್ರಾಸಿಕ್ಯೂಷನ್ಗೆ ನೀಡಲಾಗಿದೆ. ಖಾಸಗಿ ವ್ಯಕ್ತಿಗಳ ದೂರಿಗೆ ರಾಜ್ಯಪಾಲರು ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ರಾಜ್ಯಪಾಲರೇ ತನಿಖಾಧಿಕಾರಿಯಂತೆ ಭಾವನೆಗೆ ಈಡಾಗಿದ್ದಾರೆ. 2021ರ ಸೆಪ್ಟೆಂಬರ್ನಲ್ಲಿ ಕೇಂದ್ರ ನೀಡಿರುವ ಚೆಕ್ಲಿಸ್ಟ್ ಪಾಲನೆಯಾಗಿಲ್ಲ. ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಕಾನೂನು ಬಾಹಿರ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ 17A ಎಸ್ಒಪಿ ಉಲ್ಲಂಘನೆಯಾಗಿದೆ.
ಅಲ್ಲದೇ ಸುಪ್ರೀಂಕೋರ್ಟ್ನ ಬೇರೆ ಬೇರೆ ಪ್ರಕರಣಗಳ ಉಲ್ಲೇಖಿಸಲಿದ್ದು, 7 ಪ್ರಕರಣಗಳಲ್ಲಿ ಕೋರ್ಟ್ ಅಭಿಪ್ರಾಯಗಳ ಪ್ರಸ್ತಾಪಿಸಿ ಪ್ರಾಸಿಕ್ಯೂಷನ್ಗೆ ನೀಡುವ ನಿಯಮ ಇದಲ್ಲ ಎಂದು ವಾದಿಸಲು ಪ್ಲ್ಯಾನ್ ಮಾಡಿದ್ದಾರೆ.
ಒಟ್ಟಿನಲ್ಲಿ ಸಿಎಂ ಹಾಗೂ ರಾಜ್ಯಪಾಲ ನಡುವಿನ ಅಸಲಿ ಯುದ್ಧ ನಾಳೆಯಿಂದ ಶುರುವಾಗಲಿದ್ದು, ಇದರಲ್ಲಿ ಯಾರ ಕೈ ಮೇಲುಗೈ ಸಾಧಿಸಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
