ದಿಟ್ಟ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಮಾಜಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಭೇಟಿಯಾಗಿದ್ದು, ಅದನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯು ಬಿಜೆಪಿ ಮುಖಂಡ ಪ್ರತಾಪ್ ಸಿಂಹ ಸ್ನೇಹಿತ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ. ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಏಕಸದಸ್ಯ ಪೀಠವು ಆರೋಪಿಗಳಾದ ನವೀನ್ ಕುಮಾರ್, ಅಮಿತ್, ಎಚ್ಎಲ್ ಸುರೇಶ್ ಅವರಿಗೆ ಜುಲೈ 16ರಂದು ಜಾಮೀನು ನೀಡಿತ್ತು. ನಿನ್ನೆ ಪ್ರತಾಪ್ ಸಿಂಹ ಅವರು ಕೊಲೆ ಆರೋಪಿ ನವೀನ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಪ್ರತಾಪ್, “ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಮೊದಲಿಗೆ ಆರೋಪಿ ನಂ-1 ಆಗಿ, ನಂತರ ಎ-17 ಆಗಿ, ಆರೂವರೆ ವರ್ಷ ಜೈಲಿನಲ್ಲಿದ್ದು ಇತ್ತೀಚೆಗೆ ಜಾಮೀನಿನ ಹೊರಬಂದಿರುವ ಸ್ನೇಹಿತ ಮದ್ದೂರು ನವೀನ್ ರನ್ನು ಭೇಟಿಯಾಗಿ ಅರೋಗ್ಯ ವಿಚಾರಿಸಿದೆ. ಮದ್ದೂರಿನ ಯುವ ಸ್ನೇಹಿತರೂ ಜತೆಗಿದ್ದರು” ಎಂದು ಬರೆದುಕೊಂಡಿದ್ದಾರೆ

ಕೊಲೆ ಆರೋಪಿಯೊಂದಿಗೆ ಬಿಜೆಪಿ ನಾಯಕನ ಸ್ನೇಹ
ಜನಪರ ಪತ್ರಕರ್ತೆಯಾಗಿದ್ದ ಗೌರಿ ಲಂಕೇಶ್ ಹತ್ಯೆ ಆರೋಪಿಯನ್ನು ಪ್ರತಾಪ್ ಸಿಂಹ ಭೇಟಿಯಾಗಿರುವುದು ವಿವಾದಕ್ಕೆ ನಾಂದಿ ಹಾಡಿದೆ. ಕೊಲೆ ಆರೋಪಿಯೊಬ್ಬ ಪ್ರತಾಪ್ ಸಿಂಹ ಸ್ನೇಹಿತ ಎಂಬ ವಿಚಾರವೂ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಮೈಸೂರು-ಕೊಡಗು ಲೋಕಸಭೆ ಟಿಕೆಡ್ ಕೈತಪ್ಪಿದ ನಂತರ ಕಾರ್ಯಕರ್ತರ ಜತೆ ನಿಲ್ಲುತ್ತೇನೆ ಎಂದು ಬಿಂಬಿಸಿಕೊಳ್ಳುತ್ತಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಕೊಲೆ ಆರೋಪಿಗಳು ಮತ್ತು ಹಿಂದುತ್ವದ ಹೆಸರಿನಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಪುನಿತ್ ಕೆಹಳ್ಳಿ ಎಂಬಾತನ ಬೆಂಬಲಕ್ಕೆ ನಿಂತು ಸದಾ ಸುದ್ದಿಯಲ್ಲಿದ್ದಾರೆ.

ಕೆಲ ದಿನಗಳ ಹಿಂದೆ ಬೆಂಗಳೂರಿನ ಮಾಂಸ ಪ್ರಕರಣಕ್ಕೆ ಸಂಬಂಧಿಸಿ ಪುನೀತ್ ಕೆರೆಹಳ್ಳಿ ಬಂಧನ ವಿರೋಧಿಸಿ ಎಸಿಪಿ ಚಂದನ್ ಅವರ ಮೇಲೆ ಪ್ರತಾಪ್ ಸಿಂಹ ಹಲ್ಲೆ ಆರೋಪ ಹೊರಿಸಿ, ಪೊಲೀಸ್ ಠಾಣೆಗೆ ತೆರಳಿದ್ದರು. ಅಪರಾಧ ಹಿನ್ನೆಲೆಯ ಪುನೀತ್ ಕೆರೆಹಳ್ಳಿಯನ್ನು ನನ್ನ ಸಹೋದರ ಎಂದಿದ್ದರು. ಬಿಜೆಪಿ ಅತೃಪ್ತರ ಗುಂಪಿನಲ್ಲಿ ಮೈಸೂರು-ಕೊಡಗು ಮಾಜಿ ಸಂಸದ, ಇದೀಗ ಗೌರಿ ಲಂಕೇಶ್ ಹತ್ಯೆ ಆರೋಪಿಯನ್ನು ಭೇಟಿಯಾಗಿ ಆತ ನನ್ನ ಸ್ನೇಹಿತ ಎಂದಿದ್ದಾರೆ. ಕೊಲೆ ಆರೋಪಿಗಳು, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರನ್ನು ಪ್ರತಾಪ್ ಸಿಂಹ ತನಗೆ ಸಹೋದರ ಮತ್ತು ಸ್ನೇಹಿತರು ಎಂದು ಹೇಳುತ್ತಿರುವುದು ಆಕ್ರೊಶಕ್ಕೆ ಕಾರಣವಾಗಿದೆ. ಈತನಿಗೆ ಟಿಕೆಟ್ ಕೈತಪ್ಪಿದ್ದೆ ಒಳ್ಳೆದಾಯಿತು ಎಂದು ಜಾಲತಾಣಗಳಲ್ಲಿ ಹಲವರು ಕಾಮೆಂಟ್ ಮಾಡಿದ್ದಾರೆ.
