
ಎನ್ಡಿಎ ಮೈತ್ರಿಕೂಟದ ಭಾಗವಾಗಿರುವ ಜೆಡಿಯು ನಾಯಕ ನಿತೀಶ್ ಕುಮಾರ್ ಹಾಗೂ ಟಿಡಿಪಿಗೆ ಇಂಡಿಯಾ ಒಕ್ಕೂಟ ಬಿಗ್ ಆಫರ್ಅನ್ನು ನೀಡಿದ್ದು ತಮ್ಮ ಜೊತೆ ಕೈ ಜೋಡಿಸಿ ಸರ್ಕಾರ ರಚಿಸಲು ನೆರವಾಗುವಂತೆ ಮನವಿ ಮಾಡಿದೆ.
ಬೆಂಗಳೂರು (ಜೂ.4): ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಈ ಬಾರಿ ಅಧಿಕಾರದಿಂದ ಕೆಳಗಿಳಿಸಲೇ ಬೇಕು ಎಂದು ಪಣತೊಟ್ಟಿರುವ ಇಂಡಿ ಒಕ್ಕೂಟ, ಎನ್ಡಿಎ ಮೈತ್ರಿಕೂಟದ ಭಾಗವಾಗಿ ಪ್ರಮುಖ ಪಾತ್ರ ವಹಿಸಲಿರುವ ಜೆಡಿಯು ಹಾಗೂ ಟಿಡಿಪಿ ಪಕ್ಷಕ್ಕೆ ಬಿಗ್ ಆಫರ್ಅನ್ನು ನೀಡಿದೆ. ಮೂಲಗಳ ಪ್ರಕಾರ ನಿತೀಶ್ ಕುಮಾರ್ಗೆ ಇಂಡಿ ಒಕ್ಕೂಟದ ನಾಯಕರು ಉಪಪ್ರಧಾನಿ ಸ್ಥಾನವನ್ನು ಆಫರ್ ಮಾಡಿದ್ದಾರೆ ಎಂದು ವರದಿಯಾಗಿದೆ. ಇನ್ನು ಆಂಧ್ರಪ್ರದೇಶದ ವಿಧಾನಸಭೆಯಲ್ಲೂ ಅಧಿಕಾರ ಪಡೆದುಕೊಂಡಿರುವ ಟಿಡಿಪಿ ಪಕ್ಷವನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಆಫರ್ಅನ್ನು ಚಂದ್ರಬಾಬು ನಾಯ್ಡುಗೆ ನೀಡಿದೆ ಎನ್ನಲಾಗಿದೆ. ಇನ್ನೊಂದೆಡೆ ಬಿಜೆಪಿ ಎರಡೂ ಪಕ್ಷಗಳ ನಾಯಕರೊಂದಿಗೆ ಮಾತನಾಡಿದ್ದು, ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ.

ಲೋಕಸಭೆ ಚುನಾವಣೆಯೆ ಮತಎಣಿಕೆ ಪ್ರಕ್ರಿಯೆ ಇನ್ನೂ ಜಾರಿಯಲ್ಲಿದೆ. ಆಡಳಿತಾರೂಢ ಎನ್ಡಿಎ ಸರಳ ಬಹುಮತದೊಂದಿಗೆ ಅಧಿಕಾರ ಪಡೆಯುವ ಸಾಧ್ಯತೆ ಇದೆ. ಇನ್ನು ಬಿಜೆಪಿ ಅತಿದೊಡ್ಡ ಪಕ್ಷವಾಗಲಿದ್ದು, ತನ್ನ ಮಿತ್ರ ಪಕ್ಷಗಳ ಮೂಲಕ ಮಾತ್ರವೇ 272ರ ಮ್ಯಾಜಿಕ್ ನಂಬರ್ ಮುಟ್ಟಲು ಸಾಧ್ಯವಾಗಲಿದೆ. ಆದರೆ ಇಂಡಿ ಒಕ್ಕೂಟಕ್ಕೆ 272 ಸೀಟ್ಗಳ ಮ್ಯಾಜಿಕ್ ನಂಬರ್ ತಲುಪೋದು ಸದ್ಯದ ಮಟ್ಟಿಗೆ ಕಷ್ಟವಾಗಿ ಕಾಣತ್ತಿದೆ. ಆದರೆ, ಚುನಾವಣ ರಣತಂತ್ರ ವರ್ಕ್ಔಟ್ ಆದಲ್ಲಿ , ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಏರುವ ಅವಕಾಶವೂ ಇದೆ.

ಎರಡು ಎನ್ಡಿಎ ಪಾಲುದಾರರಾದ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಜನತಾ ದಳ (ಯುನೈಟೆಡ್) (ಜೆಡಿಯು) ಗಳನ್ನು ಸೆಳೆಯಲು ಇಂಡಿ ಮೈತ್ರಿ ಪ್ರಮುಖ ಸ್ಥಾನಗಳನ್ನು ನೀಡಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಸಂಭಾವ್ಯ ಆಫರ್ನಲ್ಲಿ ನಿತೀಶ್ ಕುಮಾರ್ ಅವರಿಗೆ ಉಪಪ್ರಧಾನಿ ಹುದ್ದೆ ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯಿಂದಲೂ ಮನವಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಎನ್ಡಿಎ ಪ್ರಮುಖ ಪಾಲುದಾರ ತೆಲುಗು ದೇಶಂ ಪಕ್ಷದ (ಟಿಡಿಪಿ) ಚಂದ್ರಬಾಬು ನಾಯ್ಡು ಅವರನ್ನು ಸಂಪರ್ಕಿಸಿದ್ದಾರೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಸಂಚಾಲಕರಾಗಿ ನಾಯ್ಡು ಅವರಿಗೆ ಬಿಜೆಪಿ ಆಫರ್ ನೀಡಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚಿನ ಮಾಹಿತಿ ಪ್ರಕಾರ ಟಿಡಿಪಿ 16 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ನಡುವೆ, ತಮಿಳುನಾಡು ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮಿತ್ರ ಎಂಕೆ ಸ್ಟಾಲಿನ್ ಕೂಡ ನಾಯ್ಡು ಅವರನ್ನು ಸಂಪರ್ಕಿಸಿ ಇಂಡಿ ಮೈತ್ರಿಗೆ ಬೆಂಬಲ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಹಾರದಲ್ಲಿ, ಶರದ್ ಪವಾರ್ ಅವರು ನಿತೀಶ್ ಕುಮಾರ್ ಅವರನ್ನು ಸಂಪರ್ಕಿಸಿ ಇಂಡಿ ಬಣಕ್ಕೆ ಬೆಂಬಲವನ್ನು ಸಂಗ್ರಹಿಸಿದ್ದಾರೆ. ಆದರೆ, ನಿತೀಶ್ ಕುಮಾರ್ ಅವರ ರಾಜಕೀಯ ಪಲ್ಲಟಗಳ ಇತಿಹಾಸ ಮತ್ತು “ಒಕ್ಕೂಟ ವಿರೋಧ” ವನ್ನು ಪ್ರಸ್ತಾಪಿಸುವಲ್ಲಿ ಅವರ ಪಾತ್ರದ ಹೊರತಾಗಿಯೂ, ಪಕ್ಷವು ಬಿಜೆಪಿ ನೇತೃತ್ವದ ಎನ್ಡಿಎಯೊಂದಿಗೆ ಉಳಿಯುತ್ತದೆ ಎಂದು ಜೆಡಿಯು ವಕ್ತಾರರು ಹೇಳಿದ್ದಾರೆ
