
Karnataka legislative Council Election: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ಹಾಗಾದ್ರೆ ಯಾವಾಗ ಮತದಾನ? ನಾಮಪತ್ರ ಸಲ್ಲಿಕೆ ಆರಂಭ ಯಾವಾಗ ಎನ್ನುವ ವಿವರ ಈ ಕೆಳಗಿನಂತಿದೆ.

ಬೆಂಗಳೂರು, (ಮೇ 20): ಕರ್ನಾಟಕ ವಿಧಾನಸಭೆಯಿಂದ ಆಯ್ಕೆಯಾಗುವ ವಿಧಾನ ಪರಿಷತ್ನ ( Karnataka legislative Council ) 11 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ವಿಧಾನಸಭೆಯಿಂದ ವಿಧಾನಪರಿಷತ್ಗೆ ಆಯ್ಕೆಯಾಗಿರುವ 11 ಸದಸ್ಯರ ಅಧಿಕಾರವಾಧಿ ಜೂನ್ 17ಕ್ಕೆ ಮುಕ್ತಾಯವಾಗಲಿದೆ. ಹೀಗಾಗಿ ಇಂದು(ಮೇ 20) ಕೇಂದ್ರ ಚುನಾವಣೆ ಆಯೋಗವು ಕರ್ನಾಟಕ ಮೇಲ್ಮನೆಯ 11 ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಣೆ ಮಾಡಿದ್ದು, ಜೂನ್ 13ರಂದು ಮತದಾನ ನಡೆಯಲಿದೆ. ಇನ್ನು ಅಂದೇ (ಜೂನ್ 13) ಫಲಿತಾಂಶ ಪ್ರಕಟವಾಗಲಿದೆ.

ಚುನಾವಣೆಯ ಪ್ರಮುಖ ದಿನಾಂಕಗಳು
- 2024 ಮೇ 27ರಂದು ಚುನಾವಣಾ ಅಧಿಸೂಚನೆ
- 2024, ಜೂನ್ 3ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನ
- 2024, 4ರಂದು ನಾಮಪತ್ರ ಪರಿಶೀಲನೆ
- 2024, ಜೂನ್ 6ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ
- 2024, ಜೂನ್ 13ರಂದು ಮತದಾನ
- 2024, ಜೂನ್ 13ರ ಸಂಜೆ 5ಗಂಟೆಗೆ ಮತದಾನ ಎಣಿಕೆ

ಯಾವೆಲ್ಲ ಸದಸ್ಯರ ಅವಧಿ ಅಂತ್ಯ?
ಇದೇ ಜೂನ್ 17ಕ್ಕೆ ಅಧಿಕಾವಧಿ ಮುಗಿಯುವ ವಿಧಾನಪರಿಷತ್ನ 11 ಸದಸ್ಯರು ಯಾರ್ಯಾರು ಎನ್ನುವುದನ್ನು ನೋಡುವುದಾದರೆ, ಅರವಿಂದ್ ಕುಮಾರ್ ಅರಳಿ, ಎನ್ಎಸ್ ಬೋಸರಾಜು (ಪ್ರಸ್ತುತ ಸಚಿವರು) , ಕೆ ಗೋವಿಂದರಾಜ್ (ಸಿಎಂ ರಾಜಕೀಯ ಕಾರ್ಯದರ್ಶಿ), ತೇಜಸ್ವಿನಿ ಗೌಡ, ಮುಜಿರಾಜು ಗೌಡ ಪಿಎಂ, ಕೆಪಿ ನಂಜುಂಡಿ, ಬಿಎಂ ಫಾರುಖ್, ರಘುನಾಥ್ ರಾವ್ ಮಲ್ಕಾಪೂರೆ, ಎನ್ ರವಿ ಕುಮಾರ್, ಎಸ್ ರುದ್ರೇಗೌಡ, ಕೆ ಹರೀಶ್ ಕುಮಾರ್.
ಯಾವ ಪಕ್ಷಕ್ಕೆ ಎಷ್ಟು ಸ್ಥಾನ ದೊರೆಯುತ್ತೆ?
ವಿಧಾನಸಭೆಯ ಬಲಾಬಲದ ಪ್ರಕಾರ, ಒಟ್ಟು 11 ಸ್ಥಾನಗಳಲ್ಲಿ ಏಳು ಕಾಂಗ್ರೆಸ್ ಪಾಲಾಗಲಿವೆ. ಬಿಜೆಪಿಗೆ ಮೂರು ಮತ್ತು ಜೆಡಿಎಸ್ಗೆ ಒಂದು ಸ್ಥಾ ದೊರಕಲಿದೆ, ಇನ್ನು ಜಗದೀಶ್ ಶೆಟ್ಟರ್ ಅವರ ಸ್ಥಾನ ಕಾಂಗ್ರೆಸ್ ತೆಕ್ಕೆಗೆ ಹೋಗಲಿದೆ.

ಮೇಲ್ಮನೆಗೆ ಹೋಗುತ್ತಾರಾ ಯತೀಂದ್ರ?
ಇನ್ನು ವಿಧಾನಸಭೆಯಿಂದ ಆಯ್ಕೆಯಾಗುವ ವಿಧಾನ ಪರಿಷತ್ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಮೂರು ಪಕ್ಷಗಳಲ್ಲಿ ಭಾರೀ ಪೈಪೋಟಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ ಯತೀಂದ್ರ ಅವರನ್ನು ಮೇಲ್ಮನೆಗೆ ತರಲು ಕಾಂಗ್ರೆಸ್ ನಾಯಕರು ಒಲವು ತೋರಿದ್ದಾರೆ ಎಂದು ತಿಳಿದುಬಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಯತೀಂದ್ರ ಅವರು ವರುಣಾ ಕ್ಷೇತ್ರವನ್ನು ತಮ್ಮ ತಂದೆ ಸಿದ್ದರಾಮಯ್ಯನವರಿಗೆ ಬಿಟ್ಟುಕೊಟ್ಟಿದ್ದರು. ಇದೀಗ ಯತೀಂದ್ರ ಅವರನ್ನ ವಿಧಾನಪರಿಷತ್ಗೆ ಕರೆತರುವ ಕಸರತ್ತು ನಡೆದಿದೆ ಎನ್ನಲಾಗಿದೆ.