
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸೆಕ್ಯೂರಿಟಿ ಗಾರ್ಡ್ ಪ್ರಕಾಶ್ ಕಾಪ್ಡೆ ದುರಂತ ಅಂತ್ಯ ಕಂಡಿದ್ದಾರೆ. ಬಂದೂಕಿನಿಂದ ಗುಂಡು ಹಾರಿಸಿಕೊಂಡು ಬುದುಕು ಅಂತ್ಯಗೊಳಿಸಿದ್ದಾರೆ. ಸ್ಟೇಟ್ ರಿಸರ್ವ್ ಪೊಲೀಸ್ ಜವಾನನಾಗಿರುವ ಪ್ರಕಾಶ್ ಸಾವು ಆಘಾತ ತಂದಿದೆ
ಮುಂಬೈ(ಮೇ.15) ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ಗೆ ವಿದಾಯ ಹೇಳಿ ವರ್ಷಗಳೇ ಉರುಳಿದೆ. ಆದರೆ ಸಚಿನ್ ಜನಪ್ರಿಯತೆ, ಸಚಿನ್ ಮೇಲಿನ ಗೌರವ ದುಪ್ಪಟ್ಟಾಗಿದೆ. ಸಚಿನ್ ಎಲ್ಲೆ ಹೋದರು ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಆದರೆ ಇದೀಗ ಸಚಿನ್ಗೆ ಭದ್ರತೆ ಒದಗಿಸುತ್ತಾ, ಕ್ರಿಕೆಟ್ ದೇವರನ್ನು ಸುರಕ್ಷಿತವಾಗಿಟ್ಟಿದ್ದ ಸೆಕ್ಯೂರಿಟಿ ಗಾರ್ಡ್ ಪ್ರಕಾಶ್ ಕಾಪ್ಡೆ ದುರಂತ ಅಂತ್ಯ ಕಂಡಿದ್ದರೆ. ರಾಜ್ಯ ರಿಸರ್ವ್ ಪೊಲೀಸ್ ಜವಾನ್ ಪ್ರಕಾಶ್ ಕಾಪ್ಡೆ ತಮ್ಮ ಬಂದೂಕಿನಿಂದ ಗಂಡು ಹಾರಿಸಿಕೊಂಡು ಬದುಕು ಅಂತ್ಯಗೊಳಿಸಿದ್ದಾರೆ.

ಸಚಿನ್ ತೆಂಡೂಲ್ಕರ್ಗೆ ಭದ್ರತೆ ಒದಗಿಸಲು ರಾಜ್ಯ ರಿಸರ್ವ್ ಪೊಲೀಸ್ ಜವಾನ್ ಪ್ರಕಾಶ್ ಕಾಪ್ಡೆ ನೇಮಕಗೊಂಡಿದ್ದರು.ಕೆಲ ದಿನಗಳ ರಜೆ ಪಡೆದು ತವರೂರಾದ ಜಮ್ನೇರ್ಗೆ ತೆರಳಿದ್ದ ಪ್ರಕಾಶ್ ಕಾಪ್ಡೆ ಕುಟುಂಬದ ಜೊತೆ ಕಾಲ ಕಳೆದಿದ್ದರು. ಪೂರ್ವಜರ ಮನೆಗೂ ಭೇಟಿ ನೀಡಿದ್ದರು. 39 ವರ್ಷದ ಪ್ರಕಾಶ್ ಕಾಪ್ಡೆ ತಮ್ಮ ರಿವಾಲ್ವರ್ನಿಂದ ಕುತ್ತಿಗೆಗೆ ಗುಂಡು ಹಾರಿಸಿ ಮೃತಪಟ್ಟಿದ್ದಾರೆ.

ಪ್ರಕಾಶ್ ಕಾಪ್ಡೆ ಪತ್ನಿ, ಇಬ್ಬರು ಪುಟ್ಟ ಮಕ್ಕಳು, ಪೋಷಕರು, ಸಹೋದರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕಾಶ್ ಕಾಪ್ಡೆ ಮೃತದೇಹ, ರಿವಾಲ್ವರ್ , ಮೊಬೈಲ್ ಫೋನ್ ಸೇರಿದಂತೆ ಇತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ಘಟನೆಗೆ ಕಾರಣಗಳು ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
