
Hubballi Neha Murder Case: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹತ್ಯೆಗೈದ ಆರೋಪಿ ಫಯಾಜ್ನನ್ನು ಗುಂಡಿಕ್ಕಿ ಕೊಲ್ಲುವಂತೆ ಆಗ್ರಹಗಳ ವ್ಯಕ್ತವಾಗುತ್ತಿವೆ. ಈ ರೀತಿಯ ಕೃತ್ಯಗಳು ಮತ್ತೆ ನಡೆಯಬಾರದು ಎಂದರೆ ಇಂತಹ ರಕ್ಕಸರನ್ನು ನೇರವಾಗಿ ನೇಣಿಗೆ ಹಾಕುವ ಕಾನೂನು ಜಾರಿತೆ ತರಬೇಕೆಂಬ ಕೂಗುಗಳು ಕೇಳಿ ಬರುತ್ತಿವೆ. ಇನ್ನು ಈ ಘಟನೆಯನ್ನು ಅಂಜುಮನ್ ಸಂಸ್ಥೆ ಸಹ ಖಂಡಿಸಿದೆ

ಹುಬ್ಬಳ್ಳಿ, (ಏಪ್ರಿಲ್ 19): ಹುಬ್ಬಳ್ಳಿಯಲ್ಲಿ (Hubballi) ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ (Hubballi Neha Murder Case) ಹತ್ಯೆಗೈದ ಆರೋಪಿ ಫಯಾಕ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ನಿನ್ನೆ(ಏಪ್ರಿಲ್ 18) ಎಕ್ಸಾಂ ಇದೆ ಅಂತ ಹೊಸ್ತಿಲು ದಾಟಿದ್ದ ಮಗಳು ಹೆಣವಾಗಿ ಮರಳಿದ್ದಾಳೆ. ರಕ್ಕಸನ ಅಟ್ಟಹಾಸಕ್ಕೆ ಜ್ಞಾನ ದೇಗುಲದಲ್ಲೇ ಬರ್ಬರವಾಗಿ ಕೊಲೆಯಾಗಿದ್ದಾಳೆ. ಮಗಳ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಸಾರ್ವಜನಿಕರು ಆಕ್ರೋಶದ ಕಿಡಿ ಹೊತ್ತಿಸಿದೆ. ಹಿಂದೂಪರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಆರೋಪಿಯನ್ನು ಎನ್ಕೌಂಟರ್ ಮಾಡಬೇಕೆಂದು ಆಗ್ರಹಿಸುತ್ತಿವೆ. ಇನ್ನು ಈ ಘಟನೆಯನ್ನು ಹುಬ್ಬಳ್ಳಿಯ ಅಂಜುಮನ್ ಸಂಸ್ಥೆ ಖಂಡಿಸಿದೆ. ಅಲ್ಲದೇ ಆರೋಪಿಯನ್ನು ಎನ್ಕೌಂಟರ್ ಮಾಡುವಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದೆ.

ಇನ್ನು ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅಂಜುಮನ್ ಸಂಸ್ಥೆ ಮುಖ್ಯಸ್ಥ ಅಲ್ತಾಫ್, ನೇಹಾ ಹತ್ಯೆಯನ್ನು ನಾವು ಖಂಡಿಸುತ್ತೇವೆ. ಆರೋಪಿ ಫಯಾಜ್ ನನ್ನು ನಮ್ಮ ಕೈಗೆ ಕೊಡಿ ಅವನ ರುಂಡ ಕತ್ತರಿಸಿ ಹುಬ್ಬಳ್ಳಿ ಬಾಗಿಲಿಗೆ ಹಾಕುತ್ತೇವೆ. ಫಯಾಜ್ನನ್ನು ಎನ್ಕೌಂಟರ್ ಮಾಡುವಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದೇವೆ. ಭಾರತೀಯ ಜನತಾ ಪಕ್ಷದವರು ಇದರಲ್ಲಿ ರಾಜಕೀಯ ಮಾಡಬಾರದು. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದೇವೆ. ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್ನಲ್ಲಿ ಆರೋಪಿ ಎನ್ಕೌಂಟರ್ ಮಾಡಬೇಕು ಎಂದು ಹೇಳಿದರು

