
ಸುಳ್ಯ: ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಎಣ್ಮೂರು ಸಮೀಪದ ಕಲ್ಲೇರಿಯ ಕುಲಾಯಿತೋಡು ಎಂಬಲ್ಲಿನ ಮನೆಯೊಂದಕ್ಕೆ ಎನ್ಐಎ ಅಧಿಕಾರಿಗಳ ತಂಡ ಮಂಗಳವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಘಟನೆ ವರದಿಯಾಗಿದೆ.
ಬೆಳ್ಳಾರೆ ಠಾಣಾ ವ್ಯಾಪ್ತಿಯ ಎಣ್ಮೂರು ಸಮೀಪದ ಕುಲಾಯಿತೋಡಿನ ಮನೆಯ ಕೊಠಡಿಯೊಂದರಲ್ಲಿ ಬಾಡಿಗೆಗೆ ವಾಸವಿದ್ದ ಕೇರಳ ಮೂಲದ ವ್ಯಕ್ತಿಯ ವಿಚಾರಣೆ ನಡೆಸಿರುವುದಾಗಿ ಹೇಳಲಾಗಿದೆ.

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದುಕೊಂಡೇ (Bangalore Central Jail) ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣಕನ್ನಡ ಜಿಲ್ಲೆಯಲ್ಲಿಯೂ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಳಿ ನಡೆಸಿದೆ. ಕಡಬ ತಾಲೂಕಿನ ಎಣ್ಮೂರು ಗ್ರಾಮದ ಕುಲಾಯಿತೋಡು ಎಂಬಲ್ಲಿ ಎನ್ಐಎ ದಾಳಿ ನಡೆಸಿದೆ. ದಾಳಿ ವೇಳೆ ಕೇರಳದ ಇಡುಕ್ಕಿ ಮೂಲದ ಬಿಜು ಅಬ್ರಹಾಂ ಎಂಬವನ ವಿಚಾರಣೆ ನಡೆಸಲಾಗಿದೆ.

ಬಾಡಿಗೆ ಮನೆಯಲ್ಲಿ ವಾಸವಿದ್ದ ಬಿಜು ಅಬ್ರಹಾಂ, ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದಾರೆ. ನಾಲ್ಕು ದಿನದ ಹಿಂದಷ್ಟೇ ಎಡಮಂಗಲದಿಂದ ಕುಲಾಯಿತೋಡು ಎಂಬಲ್ಲಿಗೆ ಶಿಫ್ಟ್ ಆಗಿದ್ದರು. ಸದ್ಯ ದಾಳಿ ನಡೆಸಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇನ್ನು ಏಳು ರಾಜ್ಯಗಳ 17 ಸ್ಥಳಗಳಲ್ಲಿ ಎನ್ಐಎ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
