
ಅಯೋಧ್ಯೆ ರಾಮ ಮಂದಿರದಲ್ಲಿ ಮೊದಲು ಪೂಜೆ ಮಾಡಿದ್ದ ನಾವೇ ಎಂದು ಕಾಂಗ್ರೆಸ್ ನಾಯಕರು ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ಅಯೋಧ್ಯೆಯಲ್ಲಿ ಮೊದಲು ರಾಮನಿಗೆ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೇ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಎಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ರಾಜ್ಯ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಕೂಡ ಅದೇ ಹೇಳಿಕೆಯನ್ನು ನೀಡಿದ್ದಾರೆ.

ಬೆಂಗಳೂರು, ಜ.22: ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಅವರು 1985 ರಲ್ಲಿ ಅಯೋಧ್ಯೆ ರಾಮಮಂದಿರದ ಬಾಗಿಲು ತೆಗೆಸಿದ್ದರು. ರಾಮ ಮಂದಿರ ಪೂಜೆಗೆ ಮೊದಲು ಅವಕಾಶ ಮಾಡಿಕೊಟ್ಟಿದ್ದೇ ರಾಜೀವ್ ಗಾಂಧಿ. ಇದರ ಬಗ್ಗೆ ಎಲ್ಲರಿಗೂ ಜಾಣ ಮರೆವು ಯಾಕೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಪ್ರಶ್ನಿಸಿದರು

ರಾಮಾಯಣ ನಡೆದು ಐದಾರು ಸಾವಿರ ವರ್ಷಗಳಾಯಿತು. ಇಷ್ಟು ವರ್ಷಗಳಲ್ಲಿ ಲಕ್ಷಾಂತರ ದೇವಸ್ಥಾನದ ನಿರ್ಮಾಣವಾಗಿದೆ. ಶ್ರೀರಾಮ ಎಲ್ಲರಿಗೂ ಆಶೀರ್ವಾದ ಮಾಡಲಿ ಎಂದರು. ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲು ಸೂಚನೆ ನೀಡಿದ್ದೆವು. ಬಿಜೆಪಿ ನಾಯಕರು ಹೇಳದೆಯೇ ಪೂಜೆಗೆ ಆದೇಶ ನೀಡಿದ್ದೇವೆ ಎಂದರು.
ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿ ಅಂತ ಹೇಳಿದ್ದೇವೆ. ಪ್ರತಿಯೊಬ್ಬ ಕಾಂಗ್ರೆಸ್ ನಾಯಕರು ದಿನ ಎದ್ದು ಪೂಜೆ ಮಾಡಿ ಬರುತ್ತೇವೆ. ಅದನ್ನ ಅವರಿಂದ ಕಲಿಯಬೇಕಾಗಿಲ್ಲ. ನಮ್ಮಿಂದಲೇ ಅವರು ಕಲಿಯಬೇಕು ಎಂದರು.