
Udhayanidhi Stalin on Ram Mandir ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಡಿಎಂಕೆ ಯಾವುದೇ ನಂಬಿಕೆ ಅಥವಾ ಧರ್ಮದ ವಿರುದ್ಧ ಅಲ್ಲ, ಆದರೆ ಮಸೀದಿ ಕೆಡವಿ ಮಂದಿರ ನಿರ್ಮಿಸುವುದನ್ನು ನಾವು ಒಪ್ಪೋದಿಲ್ಲ ಎಂದಿದ್ದಾರೆ.
ಚೆನ್ನೈ (ಜ.18): ಸನಾತನ ಧರ್ಮದ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ದೇಶಾದ್ಯಂತ ಆಕ್ರೋಶಕ್ಕೆ ತುತ್ತಾಗಿದ್ದ ತಮಿಳುನಾಡು ಕ್ರೀಡಾ ಸಚಿವ ಹಾಗೂ ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್ ಪುತ್ರ ಉದಯನಿಧಿ ಸ್ಟ್ಯಾಲಿನ್ ಈಗ ರಾಮಮಂದಿರ ವಿಚಾರವಾಗಿ ಮಾತನಾಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಹಾಗೂ ಪ್ರಾಣ ಪ್ರತಿಷ್ಠಾಪನೆಯ ಬಗ್ಗೆ ಮಾತನಾಡಿರುವ ಸ್ಟ್ಯಾಲಿನ್, ಡಿಎಂಕೆ ಯಾವುದೇ ನಂಬಿಕೆ ಅಥವಾ ಧರ್ಮವನ್ನು ವಿರೋಧಿಸುವುದಿಲ್ಲ ಎಂದು ಹೇಳಿದ್ದು, ಮಸೀದಿ ಕೆಡವಿ ಮಂದಿರ ಕಟ್ಟುವುದನ್ನು ನಾವು ಒಪ್ಪುವುದಿಲ್ಲ ಎಂದಿದ್ದಾರೆ. ಡಿಎಂಕೆ ಯಾವುದೇ ನಂಬಿಕೆ ಅಥವಾ ಧರ್ಮವನ್ನು ವಿರೋಧಿಸುವುದಿಲ್ಲ ಎಂದು ಕರುಣಾನಿಧಿ ಅವರು ಯಾವಾಗಲೂ ಹೇಳುತ್ತಿದ್ದರು, ಮಂದಿರ ಕಟ್ಟುವುದು ಸಮಸ್ಯೆಯಲ್ಲ, ಆದರೆ ಮಸೀದಿ ಕೆಡವಿ ಅಲ್ಲಿ ಮಂದಿರ ನಿರ್ಮಿಸುವುದನ್ನು ನಾವು ಒಪ್ಪುವುದಿಲ್ಲ, ಆಧ್ಯಾತ್ಮಿಕತೆ ಮತ್ತು ರಾಜಕೀಯವನ್ನು ಬೆರೆಸಬೇಡಿ ಎಂದು ಉದಯನಿಧಿ ತಿಳಿಸಿದ್ದಾರೆ.

ಸನಾತನ ಮತ್ತು ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಉದಯನಿಧಿ ಸ್ಟಾಲಿನ್ ಸುದ್ದಿಯಾಗಿದ್ದರು. ಸ್ಟ್ಯಾಲಿನ್ ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಹೋಲಿಸಿದರು. ಸನಾತನ ಸಂಸ್ಥೆಯನ್ನು ವಿರೋಧಿಸುವುದು ಮಾತ್ರವಲ್ಲದೆ ನಿರ್ಮೂಲನೆ ಮಾಡಬೇಕು ಎಂದು ಹೇಳುವ ಮೂಲಕ ಚರ್ಚೆಗ ಕಾರಣರಾಗಿದ್ದರು. ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅವುಗಳನ್ನು ಸಂಪೂರ್ಣವಾಗಿ ನಾಶ ಮಾಡಬೇಕು ಎಂದು ಹೇಳಿದರು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕರೋನಾವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅವುಗಳನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕು. ಹಾಗೆಯೇ ಸನಾತನವನ್ನೂ ನಾಶಪಡಿಸಬೇಕು ಎಂದಿದ್ದರು.

ಉದಯನಿಧಿ ಸ್ಟಾಲಿನ್ ಕರುಣಾನಿಧಿಯವರ ಮೊಮ್ಮಗ: ಉದಯನಿಧಿ ಸ್ಟಾಲಿನ್ಗೆ ವಂಶಪಾರಂಪರ್ಯವಾಗಿ ರಾಜಕೀಯ ಬಂದಿದೆ. ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ದ್ರಾವಿಡ ನಾಯಕ ದಿವಂಗತ ಎಂ ಕರುಣಾನಿಧಿ ಅವರ ಮೊಮ್ಮಗ. ಉದಯನಿಧಿ ಅವರ ತಂದೆ ಎಂಕೆ ಸ್ಟಾಲಿನ್ ಅವರು ಡಿಎಂಕೆ ಮುಖ್ಯಸ್ಥ ಮತ್ತು ಪ್ರಸ್ತುತ ತಮಿಳುನಾಡಿನ ಮುಖ್ಯಮಂತ್ರಿ. ಕಳೆದ ವರ್ಷವಷ್ಟೇ ಅವರನ್ನು ಸ್ಟಾಲಿನ್ ಸರ್ಕಾರದಲ್ಲಿ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವರನ್ನಾಗಿ ಮಾಡಲಾಯಿತು. ಇದಲ್ಲದೇ ಡಿಎಂಕೆ ಯುವ ಘಟಕದ ರಾಜ್ಯ ಕಾರ್ಯದರ್ಶಿಯೂ ಆಗಿದ್ದಾರೆ.
