
ದಕ್ಷಿಣ ಕನ್ನಡ (ಡಿ.29): ದೇಶದಲ್ಲಿ ಭಾರತಮಾತೆ ಮತ್ತು ಮಹಿಳೆಯರಿಗೆ ಆರ್ಎಸ್ಎಸ್ ಗೌರವ ನೀಡುತ್ತಾರೆ ಎನ್ನುತ್ತಾರೆ . ಆದರೆ, ಅದೇ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮುಸ್ಲಿಂ ಮಹಿಳೆಯರ ಬಗ್ಗೆ ತೀವ್ರ ಅವಹೇಳನ ಮಾಡಿದ್ದಾರೆ. ಆದರೂ, ಅವರ ಮೇಲೆ ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಒಂದು ವೇಳೆ ಇದೇ ಮಾತನ್ನು ನಾನು ಹೇಳಿದ್ದರೆ ನನ್ನ ಮನೆಯನ್ನೇ ಸುಟ್ಟು ಹಾಕುತ್ತಿದ್ದರು ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಮೊಯ್ದೀನ್ ಬಾವಾ ಹೇಳಿದ್ದಾರೆ.

ಮುಸ್ಲಿಂ ಮಹಿಳೆಯರ ಬಗ್ಗೆ ಕಲ್ಲಡ್ಕ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ ವಿಚಾರದ ಕುರಿತು ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಆರ್ಎಸ್ಎಸ್ನವರು ಮಾತೆಗೆ ವಿಶೇಷ ಸ್ಥಾನಮಾನ ನೀಡುತ್ತಾರೆ. ಭಾರತದಲ್ಲಿ ಜಾತಿ ಧರ್ಮ ಮೀರಿ ಮಹಿಳೆಯರಿಗೆ ಮಾತೆಯ ಸ್ಥಾನವನ್ನ ಕೊಟ್ಟಿದ್ದೀವಿ. ಕಲ್ಲಡ್ಕ ಪ್ರಭಾಕರ್ ಭಟ್ರು ನೀಡಿದ ಹೇಳಿಕೆಯಿಂದ ಒಂದು ಸಮುದಾಯ ಮಾತ್ರವಲ್ಲ, ಪ್ರತಿಯೊಂದು ಹೆಂಗಸರಿಗೂ ನೋವಾಗುವ ಪರಿಸ್ಥಿತಿಯಾಗಿದೆ. ಆದರೆ ಯಾರೂ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಿಲ್ಲ. ಇನ್ನೊಂದು ತಂಡವಾಗಿದ್ದರೆ ಏನು ಮಾಡ್ತಾಯಿದ್ರು ನಿಮಗೆ ಗೊತ್ತಿದೆ ಎಂದು ಕಿಡಿಕಾರಿದರು.

ಮಂಗಳೂರಿನಲ್ಲಿ ಇಂದು ನಾವು ಎರಡು ಕಡೆ ಪ್ರತಿಭಟನೆಗೆ ಮುಂದಾಗಿದ್ದೆವು. ಆದರೆ ಕಮಿಷನರ್ ನವರ ಮಾತಿಗೆ ಬೆಲೆ ನೀಡಿ ನಿಲ್ಲಿಸಿದ್ದೇವೆ. ಈ ರೀತಿಯ ಹೇಳಿಕೆಯಿಂದ ಕೋಮು ಉದ್ವೆಗಗೊಳ್ಳುತ್ತದೆ. ಕಾನೂನು ಕೈಗೆತ್ತಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಹಾಗಾದರೆ ನಾಳೆ ಯಾರೂ ಇಂತಹ ಹೇಳಿಕೆ ಕೊಟ್ಟರೂ, ಸರಕಾರ ಕೈ ಕಟ್ಟಿ ಕುಳಿತುಕೊಂಡ್ರೆ ಯಾರಾದರೂ ಕಾನೂನು ಕೈ ಗೆತ್ತಿಕೊಳ್ಳಬಹುದಾ? ಒಬ್ಬೊಬ್ಬರಿಗೆ ಒಂದೊಂದು ಕಾನೂನು ಅಲ್ಲ, ಎಲ್ಲರಿಗೂ ಒಂದೇ ಕಾನೂನು ಇರಬೇಕು. ಬ್ರಾಹ್ಮಣ ಸಮುದಾಯದಲ್ಲಿ ಮಹಿಳೆಯರಿಗೆ ಒಳ್ಳೆ ಸ್ಥಾನಮಾನ ನೀಡಲಾಗುತ್ತದೆ. ಇಳಿವಯಸ್ಸಿನಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರು ನೀಡಿದ ಹೇಳಿಕೆ ನಮಗೆ ತಲೆ ತಗ್ಗಿಸುವ ಪರಿಸ್ಥಿತಿ ನಿರ್ಮಿಸಿದೆ ಎಂದು ಹೇಳಿದರು.
ಸರಕಾರ ಶಾಂತಿ ಸುವ್ಯವಸ್ಥೆಗೆ ಹಾನಿಯಾಗುತ್ತೆ ಎಂದು ಪ್ರಭಾಕರ್ ಭಟ್ ಬಂಧಿಸದಿರೋದು ಸರಿಯಲ್ಲ. ಶಾಂತಿ ಸುವ್ಯವಸ್ಥೆ ಎಂದು.. ಅವನು ಏನು ಮಾಡಿದ್ರು ಸರಿನಾ? ಮುಲಾಜಿಲ್ಲದೆ ಹೇಳುತ್ತೇನೆ. ಸರಕಾರವನ್ನು ನಂಬಿ ಶೇ.98 ಅಲ್ಪಸಂಖ್ಯಾತರು ಕಾಂಗ್ರೆಸ್ಗೆ ಮತ ಹಾಕಿದ್ದಾರೆ. ಫ್ರೀ ಕೊಡಿ, ಅದು ಕೊಡಿ ಇದು ಕೊಡಿ ಎಂದಲ್ಲ. ಶಾಂತಿ ನೆಮ್ಮದಿ ಕೊಡಿ ಎಂದು ಮತ ಹಾಕಿರೋದು. ಯಾರು ಭಯೋತ್ಪಾದನೆ ಮಾಡ್ತಾರೆ ತೊಂದರೆ ಕೊಡ್ತಾರೆ ಅವರನ್ನ ಸರಕಾರ ಮುಲಾಜಿಲ್ಲದೇ ಬಂಧಿಸಬೇಕು ಎಂದು ಆಗ್ರಹಿಸಿದರು.

ಕಲ್ಲಡ್ಕ ಪ್ರಭಾಕರ್ ವಿವಾದಾತ್ಮಕ ಹೇಳಿಕೆ ಕುರಿತು ಸರಕಾರ ಎಜಿ ಮೂಲಕ ನಿನ್ನೆ ಏನು ಮಾಡಿದ್ದಾರೆ ಎಲ್ಲರಿಗೂ ತಿಳಿದಿದೆ. ಹಾಗಾದ್ರೆ ಅವನು ಏನು ಬೇಕಾದ್ರು ಮಾಡಲಿ. ಶಾಂತಿ ಸುವ್ಯವಸ್ಥೆ ಎಂದು ಏನು ಬೇಕಾದ್ರೂ ಮಾಡಬಹುದಾ? ವ್ಯಕ್ತಿ ಪ್ರಮುಖ ಅಲ್ಲ ಕಾನೂನು ಯಾರು ಮೀರಬಾರದು. ಕಾನೂನು ಯಾಕೆ ಇರೋದು? ಸರಕಾರ ಯಾಕೆ ಇರೋದು? ಹಾಗಾದ್ರೆ ಒಬ್ಬನನ್ನು ಕೊಂದರೂ ಬಿಟ್ಟು ಬಿಡೋದಾ? ಇದೆ ಹೇಳಿಕೆ ನಾನು ಕೊಟ್ಟಿದ್ರೆ ನನ್ನ ಮನೆಯನ್ನ ಸುಟ್ಟು ಹಾಕುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.