
ಬೆಂಗಳೂರು: ತುಳು ಭಾಷೆಯನ್ನ (Tulu Language) ಕರ್ನಾಟಕದಲ್ಲಿ ಹೆಚ್ಚುವರಿ ಭಾಷೆಯಾಗಿ ಮಾಡಬೇಕೆಂಬ ಬೇಡಿಕೆ ಇದೆ. ಹೀಗಾಗಿ ತುಳುವನ್ನು ಹೆಚ್ಚುವರಿ ಭಾಷೆಯಾಗಿ ಮಾಡುವುದಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಇಂದು ಅರಮನೆ ಮೈದಾನದಲ್ಲಿ ನಡೆದ ಕಂಬಳ (Kambala) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಂಬಳವು ಕರಾವಳಿ ಭಾಗದ ಪ್ರಸಿದ್ಧ ಕ್ರೀಡೆಯಾಗಿದೆ. ಈ ಕ್ರೀಡೆ ಪ್ರತಿ ವರ್ಷ ಮುಂದುವರಿಸುವಂತಹ ಕೆಲಸ ಆಗಲಿ ಎಂದು ಹಾರೈಸಿದರು. ಅಲ್ಲದೆ ವಿಶೇಷವಾಗಿ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಆಯೋಜನೆ ಮಾಡಿ. ಕಂಬಳ ಕ್ರೀಡೆಯನ್ನ ಉಳಿಸಬೇಕು, ಬೆಳೆಸಬೇಕು ಎಂದರು.

ಇತಿಹಾಸದಲ್ಲಿ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿರೋ ಕಂಬಳದ ಮೊದಲ ದಿನದ ಝಲಕ್ ಅದ್ಭುತವಾಗಿತ್ತು. ಒಂದೆಡೆ ಸಿಂಗಾರ ಮಾಡಿಕೊಂಡ ಕೋಣಗಳು ಕರೆಯಲ್ಲಿ ಶರವೇಗದಲ್ಲಿ ಓಡುತ್ತಿದ್ರೆ,ಮತ್ತೊಂದೆಡೆ ಓಟಗಾರರನ್ನ ಹುರಿದುಂಬಿಸ್ತಿದ್ದ ಜನರಿಂದ ಅರಮನೆ ಮೈದಾನದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

ಬೆಳಗ್ಗೆ ಕಂಬಳಕ್ಕೆ ಚಾಲನೆ ಸಿಗ್ತಿದ್ದಂತೆ ಅಖಾಡಕ್ಕಿಳಿದ ಕೋಣಗಳು ಕರೆಯಲ್ಲಿ ನೀರು ಚಿಮ್ಮಿಸುತ್ತ ನೆರೆದಿದ್ದವರ ಹಾರ್ಟ್ ಬೀಟ್ ಹೆಚ್ಚುವಂತೆ ಮಾಡಿತ್ತು. ಕಂಬಳಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ತುಳುನಾಡಿನ ಗಂಡುಕಲೆಯನ್ನ ಸಿಲಿಕಾನ್ ಸಿಟಿಯಲ್ಲಿ ಆಯೋಜಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು
