
ಬೆಂಗಳೂರು: ಜೆಡಿಎಸ್ (JDS) ಕಚೇರಿ ಮುಂದೆ ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’ ಎಂದು ಬರೆದಿರುವ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ಕಾರ್ಯಕರ್ತರು ಲೇವಡಿ ಮಾಡಿದ್ದಾರೆ. ಮಾಜಿ ಸಿಎಂ ವಿರುದ್ಧ ವಿದ್ಯುತ್ ಅಕ್ರಮ ಆರೋಪ ಕೇಳಿ ಬಂದಾಗಿಂದ ಒಂದಲ್ಲ ಒಂದು ರೀತಿಯಲ್ಲಿ ‘ಕೈ’ ಕಾರ್ಯಕರ್ತರು ಕಾಲೆಳೆಯುತ್ತಿದ್ದಾರೆ.

ಹೆಚ್ಡಿಕೆ ಫೋಟೋ ಇರುವ ಪೋಸ್ಟರ್ನಲ್ಲಿ ‘ವಿದ್ಯುತ್ ಕಳ್ಳ ಕುಮಾರಸ್ವಾಮಿ’ (H.D.Kumaraswamy) ಎಂದು ಬರೆಯಲಾಗಿದೆ. 200 ಯೂನಿಟ್ ಉಚಿತ.. ನೆನಪಿಟ್ಟುಕೊಳ್ಳಿ, ಹೆಚ್ಚು ಕದಿಯಬೇಡಿ ಎಂದು ಬರೆದು ಕಾಂಗ್ರೆಸ್ (Congress) ಕಾರ್ಯಕರ್ತರು ಲೇವಡಿ ಮಾಡಿದ್ದಾರೆ

ಜೆ.ಪಿ.ನಗರದಲ್ಲಿರುವ ನಿವಾಸಕ್ಕೆ ದೀಪಾವಳಿ ಅಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ವಿದ್ಯುತ್ ಕಳವು ಪ್ರಕರಣದಲ್ಲಿ ಹೆಚ್ಡಿಕೆ ವಿರುದ್ಧ ಬೆಸ್ಕಾಂ ಜಾಗೃತದಳ ಪ್ರಕರಣ ದಾಖಲಿಸಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ವಿದ್ಯುತ್ ಕಲಾಂ 135 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

ಮಾಜಿ ಸಿಎಂ ವಿದ್ಯುತ್ ಕಳ್ಳತನ ಮಾಡಿದ್ದಾರೆ ಎಂದು ಕಾಂಗ್ರೆಸ್ ಎಕ್ಸ್ನಲ್ಲಿ ಪೋಸ್ಟ್ ಹಾಕಿ ಗಂಭೀರ ಆರೋಪ ಮಾಡಿತ್ತು. ಒಬ್ಬ ಮಾಜಿ ಸಿಎಂ ವಿದ್ಯುತ್ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ. ಇಷ್ಟೊಂದು ದಾರಿದ್ರ್ಯ ಬಂದಿದ್ದರೆ ಗೃಹಜ್ಯೋತಿಗೆ ಅರ್ಜಿ ಹಾಕಬಹುದಿತ್ತು ಎಂದು ಕಾಂಗ್ರೆಸ್ ಚಾಟಿ ಬೀಸಿತ್ತು.
ವಿದ್ಯುತ್ ಕಳ್ಳತನ ಮಾಡಿದ್ದಾರೆ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಹೆಚ್ಡಿಕೆ ಪ್ರತಿಕ್ರಿಯೆ ನೀಡಿದ್ದರು. ಇದು ಅಚಾತುರ್ಯದಿಂದ ಆದ ಘಟನೆ. ದಂಡ ಕಟ್ಟುತ್ತೇನೆ ಎಂದು ಹೇಳಿದ್ದರು