
ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಇತ್ತೀಚೆಗೆ ನಡೆದ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಎಸ್ಡಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಿಯಾಝ್ ಫರಂಗಿಪೇಟೆ ರವರಿಗೆ ಕಳೆದ ಹತ್ತು ದಿನಗಳಿಂದ ವಿವಿಧ ಮೊಬೈಲ್ ಸಂಖ್ಯೆಗಳಿಂದ ಯಾರೋ ಕಿಡಿಗೇಡಿಗಳು ಅನಗತ್ಯ ಮತ್ತು ಅಸಂಬದ್ಧ ಟೆಕ್ಸ್ಟ್ ಸಂದೇಶ, ಲಿಂಕ್ ಮತ್ತು ವಿಡಿಯೋ ವಾಟ್ಸಪ್ ಸಂದೇಶಗಳನ್ನು ರವಾನಿಸುತ್ತಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಈ ಬಗ್ಗೆ ಪತ್ರಿಕಾ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು ಇಂಟರ್ನೆಟ್ ಸಂಖ್ಯೆ, ಸ್ಥಳೀಯ ಸಂಖ್ಯೆ ಹಾಗೂ ವಿದೇಶಿ ಮೊಬೈಲ್ ಸಂಖ್ಯೆಗಳ ಮೂಲಕ ಯಾರೋ ಅಪರಿಚಿತರು ಅನಗತ್ಯ ಮತ್ತು ಅಸಂಬದ್ಧ ಸಂದೇಶಗಳನ್ನು ರವಾನೆ ಮಾಡುತ್ತಿದ್ದು ಈ ಸಂಖ್ಯೆಗಳ ಪೈಕಿ ಕೆಲವೊಂದು ಮೊಬೈಲ್ ಸಂಖ್ಯೆಗೆ ಮರು ಸಂದೇಶಗಳನ್ನು ರವಾನಿಸಿದಾಗ ಯಾವುದೇ ಪ್ರತಿಕ್ರಿಯೆಗಳು ವ್ಯಕ್ತವಾಗದ ಹಿನ್ನೆಲೆಯಲ್ಲಿ ಹಾಗೂ ಬರುತ್ತಿರುವ ಸಂದೇಶಗಳಿಗೂ ರಿಯಾಝ್ ಫರಂಗಿಪೇಟೆ ರವರಿಗೂ ಯಾವುದೇ ಸಂಬಂಧಗಳಿಲ್ಲದೆ ಇದ್ದುದರಿಂದ ಈ ಎಲ್ಲಾ ವಾಟ್ಸಾಪ್ ಸಂದೇಶಗಳ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಅವರು ಇದು ಯಾರೋ ಕಿಡಿಗೇಡಿಗಳು ಯಾವುದೋ ಅಕ್ರಮ ಚಟುವಟಿಕೆಗಳನ್ನು ನಡೆಸುವ ದುರುದ್ದೇಶದಿಂದ ಅಥವಾ ಸೈಬರ್ ಅಪರಾಧ ಎಸಗುವ ಹುನ್ನಾರದಿಂದ ಅಥವಾ ತಮಗೆ ಮಾನಸಿಕ ಹಿಂಸೆ ನೀಡುವ ಉದ್ದೇಶದೊಂದಿಗೆ ಈ ರೀತಿ ಮಾಡುತ್ತಿದ್ದಾರೆ ಎಂಬ ಆರೋಪದೊಂದಿಗೆ ಸಂದೇಶ ರವಾನಿಸಿರುವ ಎಲ್ಲಾ ಸಂಖ್ಯೆಗಳ ದಾಖಲೆ ಸಮೇತ ಎಸ್ಡಿಪಿಐ ಜಿಲ್ಲಾ ನಿಯೋಗದೊಂದಿಗೆ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮತ್ತು ಬಂಟ್ವಾಳ ನಗರ ಠಾಣಾಧಿಕಾರಿಯವರಿಗೆ ಲಿಖಿತ ದೂರನ್ನು ನೀಡಿ ಈ ರೀತಿ ಅನಗತ್ಯ ಮತ್ತು ಅಸಂಬದ್ಧ ಸಂದೇಶಗಳನ್ನು ರವಾನಿಸುತ್ತಿರುವ ಜಾಲವನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಮನವಿ ಮಾಡಿಕೊಂಡಿರುತ್ತಾರೆ.

ಜಿಲ್ಲಾ ನಿಯೋಗದಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು, ಜಿಲ್ಲಾ ಸಮಿತಿ ಸದಸ್ಯರಾದ ಸಾಹುಲ್ ಎಸ್ ಹೆಚ್, ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಮುನೀಶ್ ಅಲಿ, ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಶ್ರಫ್ ತಲಪಾಡಿ ಮತ್ತು ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷ ಶೆರೀಫ್.ವಿ ರವರು ಉಪಸ್ಥಿತರಿದ್ದರು.