
ನ್ಯೂಯಾರ್ಕ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಮುಂದುವರಿದಿರುವುದಕ್ಕೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗ್ಯುಟೆರಸ್ ಕಳವಳ ವ್ಯಕ್ತಪಡಿಸಿದ್ದು, ಗಾಜಾಪಟ್ಟಿ ಮಕ್ಕಳ ಸ್ಮಶಾನವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ತಕ್ಷಣವೇ ಕದನವಿರಾಮ ಘೋಷಿಸಬೇಕೆಂದು ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.

ಗಾಜಾಪಟ್ಟಿಯಲ್ಲಿನ ಪರಿಸ್ಥಿತಿ ಕೇವಲ ಮಾನವ ಸಂಘರ್ಷವಲ್ಲ, ಆದರೆ ಇದೊಂದು ಮಾನವೀಯತೆಯ ನೆಲೆಯದ್ದಾಗಿದೆ. ಕದನ ವಿರಾಮ ವಿಚಾರದಲ್ಲಿ ಎರಡು ದೇಶಗಳು ಮಾತ್ರ ಭಾಗಿಯಾಗುವುದಲ್ಲ, ಅಂತಾರಾಷ್ಟ್ರೀಯ ಸಮುದಾಯ ಕೂಡಾ ಗಮನಹರಿಸಬೇಕು ಎಂದು ಗ್ಯುಟೆರಸ್ ತಿಳಿಸಿದ್ದಾರೆ.
ಗಾಜಾಪಟ್ಟಿಗೆ ಮಾನವೀಯತೆಯ ನೆರವಿನ ಅಗತ್ಯವಿದೆ. ಯುದ್ಧದಿಂದಾಗಿ ಸಾವಿರಾರು ಮಕ್ಕಳು ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆ, ಔಷಧ, ಚಿಕಿತ್ಸೆಗಳಿಲ್ಲದೇ ಸಾವಿರಾರು ಮಂದಿ ಕಂಗಾಲಾಗಿದ್ದಾರೆ ಎಂದು ವರದಿ ವಿವರಿಸಿದೆ.

ಕಳೆದ ಒಂದು ತಿಂಗಳಿನಿಂದ ಮುಂದುವರಿದಿರುವ ಇಸ್ರೇಲ್, ಹಮಾಸ್ ನಡುವಿನ ಯುದ್ಧದಿಂದಾಗಿ ವಿಶ್ವಸಂಸ್ಥೆಯ ರಕ್ಷಣಾ ತಂಡ ಭಾರೀ ಬೆಲೆ ತೆತ್ತಿರುವುದಾಗಿ ವರದಿ ತಿಳಿಸಿದೆ.
ಯುದ್ಧದಲ್ಲಿ ವಿಶ್ವಸಂಸ್ಥೆಯ ರಕ್ಷಣಾ ತಂಡದ 89 ಸಿಬಂದಿಗಳು ತಮ್ಮ ಜೀವ ಕಳೆದುಕೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಇದು ತೀವ್ರ ಕಳವಳಕಾರಿ ವಿಷಯವಾಗಿದ್ದು, ಇಸ್ರೇಲ್ ಕೂಡಲೇ ಕದನ ವಿರಾಮ ಘೋಷಿಸಬೇಕೆಂದು ಗ್ಯುಟೆರಸ್ ಆಗ್ರಹಿಸಿದ್ದಾರೆ.

ಗಾಜಾಪಟ್ಟಿ ವಶಪಡಿಸಿಕೊಳ್ಳದಂತೆ ಅಮೆರಿಕ ಎಚ್ಚರಿಕೆ:
ಇಸ್ರೇಲ್ ಗಾಜಾಪಟ್ಟಿಯನ್ನು ಮರುವಶಪಡಿಸಿಕೊಳ್ಳುವ ಸಾಧ್ಯತೆ ಇದ್ದಿರುವುದಾಗಿ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಆದರೆ ಇಸ್ರೇಲ್ ಸೇನಾಪಡೆ ಗಾಜಾಪಟ್ಟಿಯನ್ನು ವಶಪಡಿಸಿಕೊಳ್ಳದಂತೆ ಎಚ್ಚರಿಕೆ ನೀಡಿದೆ.