
ಚಿಕ್ಕಮಗಳೂರು: ರೌಡಿ ಶೀಟರ್ನನ್ನು (Rowdy Sheeter) ಬಂಧಿಸಲು ಹೋದ ಪೊಲೀಸರ (Police) ಮೇಲೆ ಮಚ್ಚು ಬೀಸಿದ ಕಾರಣ ಸಬ್ ಇನ್ಸ್ಪೆಕ್ಟರ್ (Sub Inspector) ರೌಡಿ ಶೀಟರ್ ಮೇಲೆ ಗುಂಡು ಹಾರಿಸಿದ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಎನ್ಆರ್ಪುರ (NR Pura) ತಾಲೂಕಿನ ಬಾಳೆಹೊನ್ನೂರು ಸಮೀಪದ ಮಾಗಲು ಗ್ರಾಮದಲ್ಲಿ ನಡೆದಿದೆ.

ಮಾಗಲು ಗ್ರಾಮದ ಪೂರ್ಣೇಶ್ ಎಂಬವನ ಮೇಲೆ 2012 ರಿಂದ 8 ಪ್ರಕರಣಗಳು ದಾಖಲಾಗಿದ್ದವು. 4 ಹಾಫ್ ಮರ್ಡರ್ ಕೇಸ್, 3 ಹಲ್ಲೆ ಪ್ರಕರಣ ಮತ್ತೊಂದು ಪೊಲೀಸರ ಮೇಲೆ ಹಲ್ಲೆ ಮಾಡಿದ್ದು, ಪ್ರಕರಣ ಸಂಬಂಧ ಕೋರ್ಟಿನಿಂದ ಸಮನ್ಸ್ ಜಾರಿಯಾಗಿದ್ದರೂ ಆತ ಕೋರ್ಟಿಗೆ ಹಾಜರಾಗಿರಲಿಲ್ಲ. ಆತ ಮನೆಗೂ ಹೋಗುತ್ತಿರಲಿಲ್ಲ. ರಾತ್ರಿ ವೇಳೆ ಕಾಡು, ಕಾಫಿ ತೋಟ, ಕಾಡಿನ ದೊಡ್ಡ-ದೊಡ್ಡ ಮರಗಳ ಮೇಲೆ ಮಲಗಿ ಪೊಲೀಸರಿಗೂ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ

ಆತ ಮಾಗಲು ಗ್ರಾಮದ ತಮ್ಮ ಮನೆಯಲ್ಲಿ ಇರುವ ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋದಾಗ ತಪ್ಪಿಸಿಕೊಳ್ಳಲು ಪೊಲೀಸರ ಮೇಲೂ ಮಚ್ಚು ಬೀಸಿದ್ದಾನೆ. ಎನ್ಆರ್ ಪುರ ತಾಲೂಕಿನ ಬಾಳೆಹೊನ್ನೂರು ಸಬ್ ಇನ್ಸ್ಪೆಕ್ಟರ್ ದಿಲೀಪ್ ಕುಮಾರ್ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಆದರೆ ಪೊಲೀಸರ ಮಾತು ಕೇಳದೆ ಪೊಲೀಸ್ ಪೇದೆ ಮಂಜುನಾಥ್ ಎಂಬವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಘಟನೆಯಿಂದ ಪೇದೆ ಮಂಜುನಾಥ್ ಎಡಗೈಗೆ ಗಂಭೀರ ಗಾಯವಾಗಿದ್ದು, ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ

ಪೊಲೀಸರ ಮೇಲೆ ಮಚ್ಚು ಬೀಸಿದ ಕಾರಣ ಆತ್ಮರಕ್ಷಣೆಗಾಗಿ ರೌಡಿ ಶೀಟರ್ ಬಲಗಾಲಿನ ಮಂಡಿಗೆ ಗುಂಡು ಹಾರಿಸಿ ಬಂಧಿಸಿ, ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ವಿಕ್ರಂ ಅಮಟೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ, ಪೇದೆ ಮಂಜುನಾಥ್ ಆರೋಗ್ಯ ವಿಚಾರಿಸಿದ್ದಾರೆ. ರೌಡಿ ಶೀಟರ್ ಪೂರ್ಣೇಶ್ ಮೇಲೆ 2012ರಿಂದ 8 ಕೇಸ್ಗಳು ದಾಖಲಾಗಿವೆ. ಆತನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದರಿಂದ ಆತನಿಂದ ಹಲ್ಲೆಗೊಳಗಾದವರು ಸಂತಸಪಟ್ಟಿದ್ದಾರೆ. ಈ ಕುರಿತು ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ