
ಎನ್ಸಿಇಆರ್ಟಿಯು ಮಕ್ಕಳಿಗೆ ಅಸಂವಿಧಾನಿಕ, ಅವೈಜ್ಞಾನಿಕ ಮತ್ತು ತಿರುಚಿದ ಇತಿಹಾಸದ ವಿಷಯಗಳನ್ನು ಕಲಿಸಲು ಬಯಸಿದರೆ, ಕೇರಳ ಅದನ್ನು ವಿರೋಧಿಸುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಪ್ರಸ್ತುತ ಬಳಸುತ್ತಿರುವ 44 ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವ ಕೆಲಸವನ್ನು ವಿವರವಾಗಿ ಚರ್ಚಿಸಲು ಕೇರಳ ಸರ್ಕಾರವು ರಾಜ್ಯ ಪಠ್ಯಕ್ರಮ ಸಮಿತಿಯನ್ನು ಕರೆಯಲಿದೆ ಎಂದು ಸಚಿವರು ಹೇಳಿದ್ದಾರೆ.

ತಿರುವನಂತಪುರಂ ಅಕ್ಟೋಬರ್ 26: ಶಾಲಾ ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಬದಲಿಗೆ ‘ಭಾರತ್’ (Bharat)ಎಂದು ದೇಶದ ಹೆಸರನ್ನಾಗಿ ಮಾಡಬೇಕು ಎಂಬ (NCERT) ಉನ್ನತ ಮಟ್ಟದ ಸಮಿತಿಯ ಶಿಫಾರಸನ್ನು ರಾಜ್ಯ ಸರ್ಕಾರ ಒಪ್ಪಿಕೊಳ್ಳುವುದಿಲ್ಲ ಎಂದು ಕೇರಳ ಶಿಕ್ಷಣ ಸಚಿವ ವಿ ಶಿವನ್ಕುಟ್ಟಿ (V Sivankutty) ಗುರುವಾರ ಹೇಳಿದ್ದಾರೆ. ಸಂವಿಧಾನದಲ್ಲಿ ಹೇಳಿರುವಂತೆ ಇಂಡಿಯಾ ಅಥವಾ ಭಾರತವನ್ನು ಬಳಸುವ ಹಕ್ಕು ನಾಗರಿಕರಿಗೆ ಇದೆ. ಅವರು ಈಗ ಭಾರತವನ್ನು ಮಾತ್ರ ದೇಶದ ಹೆಸರಾಗಿ ಬಳಸಬೇಕು ಎಂದು ಹೇಳುತ್ತಿರುವುದು ಸಂಕುಚಿತ ರಾಜಕೀಯ, ಇದನ್ನು ಕೇರಳ ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿ ಶಿವನ್ಕುಟ್ಟಿ ಹೇಳಿದ್ದಾರೆ.

ಐತಿಹಾಸಿಕ ಸತ್ಯಗಳನ್ನು ತಿರುಚಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಡೆಸುತ್ತಿದೆ ಎಂದು ಶಿವನ್ಕುಟ್ಟಿ ಆರೋಪಿಸಿದ್ದಾರೆ.
“ಮೊದಲು, ಎನ್ಸಿಇಆರ್ಟಿ ಕೆಲವು ಭಾಗಗಳನ್ನು ತೆಗೆದುಹಾಕಿದ ನಂತರ, ನಾವು ಅವುಗಳನ್ನು ಹೆಚ್ಚುವರಿ ಪಠ್ಯಪುಸ್ತಕಗಳ ಮೂಲಕ ರಾಜ್ಯದಲ್ಲಿ ಕಲಿಸುವ ಪಠ್ಯಕ್ರಮದಲ್ಲಿ ಸೇರಿಸಿದ್ದೇವೆ” ಎಂದು ವಿ ಶಿವನ್ಕುಟ್ಟಿ ಹೇಳಿದ್ದಾರೆ. ಎನ್ಸಿಇಆರ್ಟಿಯು ಮಕ್ಕಳಿಗೆ ಅಸಂವಿಧಾನಿಕ, ಅವೈಜ್ಞಾನಿಕ ಮತ್ತು ತಿರುಚಿದ ಇತಿಹಾಸದ ವಿಷಯಗಳನ್ನು ಕಲಿಸಲು ಬಯಸಿದರೆ, ಕೇರಳ ಅದನ್ನು ವಿರೋಧಿಸುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಪ್ರಸ್ತುತ ಬಳಸುತ್ತಿರುವ 44 ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವ ಕೆಲಸವನ್ನು ವಿವರವಾಗಿ ಚರ್ಚಿಸಲು ಕೇರಳ ಸರ್ಕಾರವು ರಾಜ್ಯ ಪಠ್ಯಕ್ರಮ ಸಮಿತಿಯನ್ನು ಕರೆಯಲಿದೆ ಎಂದು ಸಚಿವರು ಹೇಳಿದ್ದಾರೆ.

ಇತಿಹಾಸಕಾರ ಸಿಐ ಇಸಾಕ್ ನೇತೃತ್ವದ ಎನ್ಸಿಇಆರ್ಟಿ ಸಮಿತಿಯು ಶಾಲಾ ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ ಬದಲು ಭಾರತ’ ಎಂದು ಬದಲಿಸಲು ಶಿಫಾರಸು ಮಾಡಿದೆ.
ಸಮಾಜ ವಿಜ್ಞಾನಕ್ಕಾಗಿ ಏಳು ಸದಸ್ಯರ ಸಮಿತಿಯು ಶಿಫಾರಸುಗಳನ್ನು ಮಾಡಿದ್ದು ಇದು ವಿವಿಧ ವಿಷಯಗಳ ಕುರಿತು ಪೊಸಿಷನ್ ಪೇಪರ್ ತಯಾರಿಸಲು ಎನ್ಸಿಇಆರ್ಟಿಯಿಂದ ರಚಿಸಲ್ಪಟ್ಟ ಸಮಿತಿಗಳಲ್ಲಿ ಒಂದಾಗಿದೆ.