
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ನಮ್ಮ ಬೆಂಬಲ ಇಲ್ಲ ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಕೇರಳದ ಸಿಎಂ ಪಿಣರಾಯಿ ವಿಜಯನ್ ಬೆಂಬಲಿಸಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಹೇಳಿದ್ದಾರೆ ಎನ್ನಲಾಗಿತ್ತು. ಈ ವಿಚಾರವನ್ನು ತಳ್ಳಿ ಹಾಕಿ ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತಪಿಡಿಸಿರುವ ವಿಜಯನ್.. ದೇವೇಗೌಡರ ಹೇಳಿಕೆಯಿಂದ ನನಗೆ ಅಚ್ಚರಿಯಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯನ್ನು ನಾನು ಬೆಂಬಲಿಸುತ್ತೇನೆ ಅನ್ನೋ ಅವರ ಕಲ್ಪನೆಯನ್ನ ನಾನು ಒಪ್ಪುವುದಿಲ್ಲ. ಅದು ಅವರ ಭ್ರಮೆ ಅಷ್ಟೇ. ರಾಜಕಾರಣದಲ್ಲಿ ಪಳಗಿರುವ, ಹಿರಿಯ ಮುತ್ಸದ್ಧಿಯೊಬ್ಬರು ಇಂಥ ಆಧಾರ ರಹಿತ ಹೇಳಿಕೆಯನ್ನು ನೀಡುತ್ತಿರೋದು ನಾಚಿಕೆಗೇಡಿನ ಸಂಗತಿ. ಅದು ಅಸತ್ಯ ಮತ್ತು ಅಸಂಬದ್ಧ. ಸಂಘಪರಿವಾರದ ವಿರುದ್ಧ ನಮ್ಮ ಹೋರಾಟ ಯಾವುತ್ತೂ ನಿಲ್ಲುವುದಿಲ್ಲ. ನಮ್ಮ ನಿಲುವಿನಲ್ಲಿ ಯಾವುದೇ ಅಸ್ಪಷ್ಟತೆ ಇಲ್ಲ ಎಂದು ಕಿಡಿಕಾರಿದ್ದಾರೆ.

ಸೀತಾರಾಂ ಯೆಚೂರಿ ಹೇಳಿದ್ದೇನು?
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸುದ್ದಿಗೋಷ್ಟಿ ನಡೆಸಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಪಿಎಂ ಕುರಿತು ನನ್ನ ಹೇಳಿಕೆಗಳಲ್ಲಿ ಗೊಂದಲಗಳಿವೆ ಎಂದು ದೇವೇಗೌಡ ಹೇಳಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯನ್ನು ಕೇರಳ ಸಿಪಿಎಂ ಬೆಂಬಲಿಸುತ್ತದೆ ಎಂದು ದೇವೇಗೌಡರಿಗೆ ನಾನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಅವರೊಂದಿಗೆ (ದೇವೇಗೌಡ) ಮಾತಾಡುವಾಗಲೆಲ್ಲ ಜಾತ್ಯಾತೀತವಾದದ ಬಗ್ಗೆ ಹೇಳುತ್ತಾರೆ. ಹೀಗಿರುವಾಗ ನಾವು ಬಿಜೆಪಿ ಜೊತೆ ಹೋಗೋದು ಹೇಗೆ? ಆದರೆ ಅವರೀಗ ಬಿಜೆಪಿ ಜೊತೆ ಹೋಗಿದ್ದಾರೆ. ಜಾತ್ಯತೀತತೆಯ ಬಗ್ಗೆ ಅವರ ಬದ್ಧತೆ ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
