
ಐಜ್ವಾಲ್: ಮಣಿಪುರದಲ್ಲಿ (Manipur) ನಡೆಯುತ್ತಿರುವ ಹಿಂಸಾಚಾರಕ್ಕಿಂತ ಇಸ್ರೇಲ್-ಹಮಾಸ್ ಯುದ್ಧದಲ್ಲಿ (Israel-Hamas War) ಪ್ರಧಾನಿ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಸೋಮವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದರು.

ಚುನಾವಣಾ ಕಣದಲ್ಲಿರುವ ಮಿಜೋರಾಂನಲ್ಲಿ ಮಾತನಾಡಿದ ರಾಹುಲ್, ಪ್ರಧಾನಿ ಮತ್ತು ಭಾರತ ಸರ್ಕಾರ ಇಸ್ರೇಲ್ನಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ. ಆದರೆ ಮಣಿಪುರದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಆಸಕ್ತಿ ಇಲ್ಲ ಎಂಬುದು ನನಗೆ ಆಶ್ಚರ್ಯ ತಂದಿದೆ ಎಂದು ಹೇಳಿದರು.
ಜೂನ್ನಲ್ಲಿ ತಮ್ಮ ಮಣಿಪುರ ಭೇಟಿಯನ್ನು ಪ್ರಸ್ತಾಪಿಸಿದ ಅವರು ಮಣಿಪುರದ ಕಲ್ಪನೆಯನ್ನು ಬಿಜೆಪಿ ನಾಶಪಡಿಸಿದೆ. ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಉಲ್ಲೇಖಿಸಿ ಮಣಿಪುರ ಈಗ 2 ರಾಜ್ಯವಾಗಿದೆ, ಜನರನ್ನು ಹತ್ಯೆ ಮಾಡಲಾಗಿದೆ, ಮಹಿಳೆಯರಿಗೆ ಕಿರುಕುಳ ನೀಡಲಾಗಿದೆ ಮತ್ತು ಮಕ್ಕಳನ್ನು ಕೊಲ್ಲಲಾಗಿದೆ. ಆದರೆ ಪ್ರಧಾನಿ ಮಾತ್ರ ಅಲ್ಲಿಗೆ ಭೇಟಿ ನೀಡುತ್ತಿಲ್ಲ ಎಂದರು.

ಮೇ ತಿಂಗಳಲ್ಲಿ 2 ಸಮುದಾಯಗಳ ನಡುವೆ ಹಿಂಸಾಚಾರ ಪ್ರಾರಂಭವಾದಾಗಿನಿಂದ ಪ್ರಧಾನಿ ಮೋದಿ ಇನ್ನೂ ಮಣಿಪುರಕ್ಕೆ ಭೇಟಿ ನೀಡದಿರುವುದು ನಾಚಿಕೆಗೇಡಿನ ಸಂಗತಿ. ಮಣಿಪುರದ ಹಿಂಸಾಚಾರವು ಭಾರತದ ಕಲ್ಪನೆಯ ಮೇಲಿನ ಆಕ್ರಮಣ ಮತ್ತು ದೇಶದ ಜನರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಭಾರತ್ ಜೋಡೊ ಮೂಲಕ ನಾವು ದೇಶವನ್ನು ಒಂದುಗೂಡಿಸುತ್ತಿದ್ದೇವೆ ಎಂದರು.

ರಾಹುಲ್ ಗಾಂಧಿ ಅವರು ಸೋಮವಾರ ಐಜ್ವಾಲ್ನಲ್ಲಿ ಚನ್ಮರಿ ಜಂಕ್ಷನ್ನಿಂದ ರಾಜಭವನದವರೆಗೆ ಸುಮಾರು 2 ಕಿ.ಮೀ ಗಳಷ್ಟು ಪಾದಯಾತ್ರೆ ನಡೆಸಿದರು. ಎರಡು ದಿನಗಳ ಭೇಟಿಗಾಗಿ ಅವರು ಮಿಜೋರಾಂನಲ್ಲಿದ್ದಾರೆ. 40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಗೆ ನವೆಂಬರ್ 7 ರಂದು ಚುನಾವಣೆ ನಡೆಯಲಿದೆ.