
ಈದ್ ಮಿಲಾದ್ ಮೆರವಣಿಗೆ ಹಿನ್ನಲೆ ಶಿವಮೊಗ್ಗದ ರಾಗಿಗುಡ್ಡ- ಶಾಂತಿನಗರದಲ್ಲಿ ಅಳವಡಿಸಲಾಗಿದ್ದ ಕಟೌಟ್ ವಿವಾದಕ್ಕೆ ಕಾರಣವಾಗಿದೆ. ಕಟೌಟ್ಗೆ ಪೊಲೀಸರು ಬಳಿ ಬಣ್ಣ ಹಚ್ಚಿದ್ದು ಮುಸ್ಲಿಂ ಯುವಕನೋರ್ವ ಕೈ ಕೊಯ್ದುಕೊಂಡು ಬಿಳಿ ಬಣ್ಣದ ಮೇಲೆಯೇ ರಕ್ತದಲ್ಲಿ “ಶೇರ್ ಟಿಪ್ಪು” ಎಂದು ಬರೆದಿದ್ದಾನೆ

ಶಿವಮೊಗ್ಗ, ಅ.01: ಈದ್ ಮಿಲಾದ್ (Eid Milad Un Nabi) ಮೆರವಣಿಗೆ ಹಿನ್ನಲೆ ಶಿವಮೊಗ್ಗದ ರಾಗಿಗುಡ್ಡ- ಶಾಂತಿನಗರದಲ್ಲಿ ಟಿಪ್ಪು ಸುಲ್ತಾನ್ ಕಟೌಟ್ (CutOut) ಅಳವಡಿಸಲಾಗಿತ್ತು. ಈ ವಿಚಾರ ಗಲಾಟೆ, ಗೊಂದಲಕ್ಕೆ ಕಾರಣವಾಗುತ್ತಿದ್ದಂತೆ ಸ್ಥಳದಲ್ಲಿ ಜನ ಗುಂಪುಗೂಡಿದ್ದರು. ಶಿವಮೊಗ್ಗ – ಹೊನ್ನಾಳಿ ರಸ್ತೆಯಲ್ಲಿ ಪ್ರತಿಭಟನೆಗಳು ಶುರುವಾದವು. ಇದರಿಂದ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಮನವರಿಕೆ ಮಾಡಿ, ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಮುಸ್ಲಿಂ ಮುಖಂಡರ ಜೊತೆ ಎಸ್ಪಿ ಮಿಥುನ್ (SP Mithun Kumar) ಮಾತುಕತೆ ನಡೆಸಿ ಟಿಪ್ಪು ಸುಲ್ತಾನ್ ಕಟೌಟ್ ಗೆ ಬಣ್ಣ ಬಳಿದರು. ಪೊಲೀಸರು ಬಣ್ಣ ಬಳಿಯುತ್ತಿದ್ದಂತೆ ಮುಸ್ಲಿಂ ಯುವಕನೋರ್ವ ಬಣ್ಣ ಬಳಿದಿದ್ದ ಕಟೌಟ್ ಮೇಲೆಯೇ ರಕ್ತದಲ್ಲಿ “ಶೇರ್ ಟಿಪ್ಪು” ಎಂದು ಬರೆದಿದ್ದಾನೆ.

ಬಣ್ಣ ಬಳಿದಿದ್ದ ಕಟೌಟ್ ಮೇಲೆ ರಕ್ತದ ಬರಹ
ಟಿಪ್ಪು ಕಟೌಟ್ ಮೇಲೆ ಪೊಲೀಸರು ಹಚ್ಚಿದ್ದ ಬಿಳಿ ಬಣ್ಣದ ಮೇಲೆಯೇ ರಕ್ತದಲ್ಲಿ “ಶೇರ್ ಟಿಪ್ಪು” ಎಂದು ಮುಸ್ಲಿಂ ಯುವಕನೋರ್ವ ಬರೆದಿದ್ದಾನೆ. ಕೈ ಕೊಯ್ದುಕೊಂಡು ರಕ್ತದಲ್ಲಿ ಬರೆದಿದ್ದಾರೆ. ಜೊತೆಗೆ ಕಟೌಟ್ ನಲ್ಲಿನ ಬಿಳಿ ಬಣ್ಣಕ್ಕೆ ತನ್ನ ರಕ್ತ ಚಿಮ್ಮಿಸಿದ್ದಾನೆ. ರೆಡ್ ಕಲರ್ ಪೆಯಿಂಟ್ ಸ್ಪ್ರೇ ಮಾಡಿದ್ದಾನೆ ಎನ್ನಲಾಗುತ್ತಿದೆ. ರಾಗಿಗುಡ್ಡ- ಶಾಂತಿನಗರ ಭಾಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇನ್ನು ಮತ್ತೊಂದೆಡೆ ಪೊಲೀಸರೇ ಕಟೌಟ್ ಗೆ ಬಣ್ಣ ಬಳಿದಿದ್ದರಿಂದ ಗೊಂದಲ ಸೃಷ್ಟಿಯಾಗಿದ್ದು ಮುಸ್ಲಿಂ ಮುಖಂಡರ ಜೊತೆ ಎಸ್ಪಿ ಮಿಥುನ್ ಕುಮಾರ್ ಮಾತುಕತೆ ನಡೆಸಿದರು. ಟಿಪ್ಪು ಕಟೌಟ್ ವಿವಾದಾತ್ಮಕವಾಗಿದ್ದ ಬಗ್ಗೆ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟರು. ಮಾತುಕತೆಯಲ್ಲಿ ಕಟೌಟ್ ಗೆ ಹಚ್ಚಿದ ಬಿಳಿ ಬಣ್ಣದ ಬದಲಾಗಿ ಬೇರೆ ಬಣ್ಣ ಬಳಿಯಲು ಮುಸ್ಲಿಂ ಮುಖಂಡರು ಸಮ್ಮತಿ ನೀಡಿದರು. ಬಳಿಕ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಮುಸ್ಲಿಂ ಯುವಕರು- ಮಹಿಳೆಯರು ಶಿವಮೊಗ್ಗ -ಹೊನ್ನಾಳಿ ರಸ್ತೆಯಲ್ಲಿನ ಪ್ರತಿಭಟನೆ ಕೈಬಿಟ್ಟರು. ಪೊಲೀಸರು ಬ್ಯಾರಿಕೇಡ್ ತೆಗೆದು ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಈ ವೇಳೆ ಮಾತನಾಡಿದ ಶಿವಮೊಗ್ಗ ಎಸ್ಪಿ ಜಿಕೆ ಮಿಥುನ್ ಕುಮಾರ್, ಶಿವಮೊಗ್ಗದ ರಾಗಿಗುಡ್ಡದಲ್ಲಿ ಒಂದು ಕಟ್ ಔಟ್ ವಿಚಾರವಾಗಿ ಗೊಂದಲ ಉಂಟಾಗಿತ್ತು. ಸ್ವಲ್ಪ ವಿವಾದಾತ್ಮಕವಾಗಿ ಕಟೌಟ್ ಇದ್ದಿದ್ದರಿಂದ ಅದಕ್ಕಾಗಿ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಂಡಿದ್ದೇವೆ. ಅದಕ್ಕೆ ಕೆಲವರಿಂದ ವಿರೋಧ ಕೂಡ ವ್ಯಕ್ತವಾಗಿತ್ತು. ಆ ಸಮಯದಲ್ಲಿ ನೂರಕ್ಕೂ ಹೆಚ್ಚು ಜನ ಸೇರಿದ್ದರು. ನಾನೇ ಮುಂದೆ ನಿಂತು ಅವರಿಗೆ ಸಮಾಧಾನಪಡಿಸಿ ವಿಚಾರವನ್ನು ತಿಳಿಸಿದ್ದೇನೆ. ಅವರಿಗೆ ಈಗ ಮನವರಿಕೆ ಮಾಡಿಕೊಟ್ಟಿದ್ದೇವೆ. ಈಗ ಅವರೆಲ್ಲರೂ ನಮ್ಮ ಮಾತಿಗೆ ಒಪ್ಪಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆಗೆ ಎಲ್ಲಾ ತಯಾರಿಯನ್ನು ಮಾಡಿಕೊಂಡಿದ್ದಾರೆ. ಅದಕ್ಕಾಗಿ ಶಿವಮೊಗ್ಗದಲ್ಲಿ ಅಲಂಕಾರ ಕೂಡ ಮಾಡಲಾಗಿದೆ. ಈದ್ ಮಿಲಾದ್ ಮೆರವಣಿಗೆ ಮಧ್ಯಾಹ್ನದ ವೇಳೆಗೆ ಪ್ರಾರಂಭವಾಗಲಿದೆ. ನಾವು ಕೂಡ ಸಾಕಷ್ಟು ತಯಾರಿನ ಮಾಡಿಕೊಂಡಿದ್ದೇವೆ.

ಸಾರ್ವಜನಿಕರು ಕೂಡ ಯಾವುದೇ ವದಂತಿಗಳಿಗೆ ಕಿವಿ ಕೊಡಬಾರದು. ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಅದನ್ನ ನಮ್ಮ ಬಳಿಗೆ ತೆಗೆದುಕೊಂಡು ಬನ್ನಿ. ಈಗ ಪರಿಸ್ಥಿತಿ ಶಾಂತಿಯುತವಾಗಿದ್ದು ನಮ್ಮ ಕಂಟ್ರೋಲ್ ನಲ್ಲಿದೆ. ಕಳೆದ 15 ದಿನಗಳಿಂದ ಶಿವಮೊಗ್ಗದಲ್ಲಿ ನಾವು ಬಂದೋಬಸ್ತ್ ಮಾಡುತ್ತಿದ್ದೇವೆ. ಆರ್ಎಎಫ್ ಎರಡು ತುಕಡಿ, 12 ಡಿಎಆರ್, 2 ಕೆಎಸ್ಆರ್ಪಿ ತುಕಡಿ ಹಾಗೂ 2500ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಶಿವಮೊಗ್ಗದಲ್ಲಿ ಎಲ್ಲಾ ರೀತಿಯ ಬಂದೋಬಸ್ತ್ ನಾವು ಮಾಡಿಕೊಂಡಿದ್ದೇವೆ ಎಂದರು.