| Edited By:Ashraf Kammaje
Updated on:Sep 18, 2023 | 1:37 PM

ಉದ್ಯಮಿ ಗೋವಿಂದ ಬಾಬು ಪೂಜಾರಿ ಬಳಿ 5 ಕೋಟಿ ರೂ. ವಂಚಿಸುವುದಲ್ಲದೇ ಆತನ ವಿರುದ್ಧವೇ ಜಾರಿ ನಿರ್ದೇಶಾನಲಯಕ್ಕೆ ಪತ್ರ ಬರೆಯಲಾಗಿದೆ. ಜೊತೆಗೆ ಪತ್ರದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಸಹ ಚೈತ್ರಾ ಕುಂದಾಪುರ ಪ್ರಸ್ತಾಪ ಮಾಡಿದ್ದಾರೆ. ನನಗೂ ಆಕೆಯ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.

ಮಂಗಳೂರು, ಸೆಪ್ಟೆಂಬರ್ 18: ಚೈತ್ರಾ ಕುಂದಾಪುರ ವಂಚನೆ ಪ್ರಕರಣ ಬಗೆದಷ್ಟು ಆಳ ಹೆಚ್ಚುತ್ತಿದೆ. ವಿಧಾನ ಸಭಾ ಚುನಾವಣೆಯಲ್ಲಿ ಬೈಂದೂರಿನಿಂದ ಬಿಜೆಪಿ ಟಿಕೆಟ್ ಕೊಡಿಸುವ ಭರವಸೆ ನೀಡಿ ಉದ್ಯಮಿ ಗೋವಿಂದ ಬಾಬು ಪೂಜಾರಿ (Govind Babu Pujari) ಬಳಿ 5 ಕೋಟಿ ರೂ. ವಂಚಿಸುವುದಲ್ಲದೇ ಆತನ ವಿರುದ್ಧವೇ ಜಾರಿ ನಿರ್ದೇಶಾನಲಯಕ್ಕೆ ಪತ್ರ ಬರೆಯಲಾಗಿದೆ. ಜೊತೆಗೆ ಪತ್ರದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬರು ಸ್ವಾಮೀಜಿ ಹೆಸರನ್ನು ಸಹ ಚೈತ್ರಾ ಕುಂದಾಪುರ ಪ್ರಸ್ತಾಪ ಮಾಡಿದ್ದಾರೆ.

ನನಗೂ ಆಕೆಯ ಪ್ರಕರಣಕ್ಕೂ ಸಂಬಂಧ ಇಲ್ಲ: ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ
ಚೈತ್ರಾ ಐಟಿ ಇಲಾಖೆಗೆ ಬರೆದಿರುವ ಪತ್ರದಲ್ಲಿ ಮಂಗಳೂರಿನ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೆಸರು ಉಲ್ಲೇಖಿಸಲಾಗಿದೆ. ಈ ಕುರಿತಾಗಿ ಪ್ರತಿಕ್ರಿಯಿಸಿದ್ದು, ಚೈತ್ರಾ ನನಗೆ ಫೋನ್ ಮಾಡಿ ನಿಮ್ಮ ಮೇಲೆ ದೂರು ಇದೆ ಎಂದಿದ್ದರು. ನಿಮಗೆ ಗೋವಿಂದಬಾಬು ಪೂಜಾರಿ 1.50 ಕೋಟಿ ರೂ. ಹಣ ನೀಡಿದ್ದಾರಂತೆ. ಹಣ ವಾಪಸ್ ನೀಡಿ ಎಂದು ಚೈತ್ರಾ ಕುಂದಾಪುರ ನನಗೆ ಹೇಳಿದ್ದರು. ಆಗ ಚೈತ್ರಾ ಕುಂದಾಪುರ ಹೇಳಿಕೆಯನ್ನು ನಾನು ಖಂಡಿಸಿದ್ದೆ. ಚೈತ್ರಾ ಕುಂದಾಪುರ ಸುಳ್ಳು ಆರೋಪದ ಬಗ್ಗೆ ನಾನು ಆಕ್ರೋಶಗೊಂಡಿದ್ದೆ ಎಂದು ಹೇಳಿದ್ದಾರೆ

ನನಗೂ ಆಕೆಯ ಪ್ರಕರಣಕ್ಕೂ ಸಂಬಂಧ ಇಲ್ಲ. ಜುಲೈ ತಿಂಗಳಲ್ಲಿ ಹಿಂದು ಸಂಘಟನೆಯ ಸತ್ಯಜಿತ್ ಸುರತ್ಕಲ್ ಫೋನ್ ಮಾಡಿದ್ದರು. ಗೋವಿಂದ ಪೂಜಾರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ವಂಚಿಸಿರುವ ಬಗ್ಗೆ ನನಗೆ ಪ್ರಶ್ನೆ ಮಾಡಿದ್ದರು. ಆದರೆ ನನಗೇನೂ ತಿಳಿದಿರಲಿಲ್ಲ, ನನ್ನಲ್ಲಿ ಯಾಕೆ ಪ್ರಶ್ನೆ ಮಾಡುವುದೆಂದು ಕೇಳಿದ್ದೆ. ಬಳಿಕ ಅವರೇ ಫೋನ್ ಮಾಡಿ, ಚೈತ್ರಾ ಮತ್ತು ಅಭಿನವ ಹಾಲಶ್ರೀ ಹೆಸರಿದೆ ಎಂದಿದ್ದರು.
ಅಭಿನವ ಹಾಲಶ್ರೀ ಹೆಸರು ಬಂದಾಗ ಚಕ್ರವರ್ತಿ ಸೂಲಿಬೆಲೆಯನ್ನು ಸಂಪರ್ಕಿಸಿದ್ದ ವಜ್ರದೇಹಿ ಸ್ವಾಮೀಜಿ
ಅಭಿನವ ಹಾಲಶ್ರೀ ಯುವ ಬ್ರಿಗೇಡ್ ಜೊತೆ ಗುರುತಿಸಿಕೊಂಡಿದ್ದರು. ಹೀಗಾಗಿ ಚಕ್ರವರ್ತಿ ಸೂಲಿಬೆಲೆ ಹೆಸರು ತಳುಕು ಹಾಕಿಕೊಳ್ಳುವ ಸಂಶಯ ಬಂತು. ಆ ಸಂದರ್ಭದಲ್ಲಿ ಅವರಿಗೆ ಫೋನ್ ಮಾಡಿದೆ. ಅಭಿನವ ಹಾಲಶ್ರೀ ಹೆಸರು ಇರುವುದರಿಂದ ನಾಳೆ ನಮ್ಮ ಹೆಸರು ಸಹ ಬರಬಹುದು ಎಂದಿದ್ದೆ. ನಗುತಾ ನನ್ನ ಹೆಸರು ಬಂತಾ ಎಂದು ಚಕ್ರವರ್ತಿ ಕೇಳಿದ್ದರು.

ನಿಮ್ಮ ಹೆಸರು ಬಂದಿಲ್ಲ ಆದರೆ ಅಭಿನವ ಹಾಲಶ್ರೀ ಹೆಸರು ಬಂದಿದೆ. ನಾಳೆ ನಿಮ್ಮ ಹೆಸರು ತಳುಕು ಹಾಕಿಕೊಳ್ಳಬಹುದು ಎಂದಿದ್ದೆ. ನಾನು ಒಂದು ಹಂತದಲ್ಲಿ ಈ ಬಗ್ಗೆ ವಿಚಾರಣೆ ಮಾಡಿದ್ದೇನೆ. ಸಿಟಿ ರವಿ ಅವರ ಗಮನಕ್ಕೂ ತಂದಿದ್ದೇನೆ ಎಂದು ಚಕ್ರವರ್ತಿ ಹೇಳಿದ್ದರು
ಗಗನ್ ಕಡೂರು ಹೆಸರು ಬಂದಾಗ ಸಿಟಿ ರವಿ ಗಮನಕ್ಕೆ ತರಲಾಯಿತು. ಅವರಲ್ಲಿ ಕೂಲಕುಂಶವಾಗಿ ಮಾತಾಡಿ ಸುಮ್ಮನೆ ಬಿಡಬೇಡಿ ಎಂದಿದ್ದೆ. ಚೈತ್ರಾ ಕುಂದಾಪುರ ಜೊತೆ ಒಡನಾಟ ಇದೆಯಾ ಎಂದು ಸೂಲಿಬೆಲೆ ಕೇಳಿದ್ದರು. ಚೈತ್ರಾ ಕುಂದಾಪುರ ಬರೆದ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದೆ. ಹೀಗಾಗಿ ಅವರು ಸಂಪರ್ಕ ಇದೆ ಎಂದು ಹೇಳಿದ್ದೆ. ಹಾಗಾದ್ದರೆ ಚೈತ್ರ ಕುಂದಾಪುರ ಜೊತೆಯೂ ಒಮ್ಮೆ ಮಾತನಾಡಿ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದರು ಎಂದರು.