| Edited By: Ashraf Kammaje
Updated on: Sep 08, 2023 | 10:05 AM

ಆಪರೇಷನ್ ಮಾಡಲ್ಲ ಎಂದು ಹೇಳುತ್ತಲೇ ಒಳಗೊಳಗೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಾಯಕರಿಗೆ ಗಾಳ ಹಾಕುತ್ತಲೇ ಇದೆ. ಈಗಾಗಲೇ ಎಸ್ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಸೇರಿದಂತೆ ಹಲವು ನಾಯಕರಿಗೆ ಡಿಕೆ ಶಿವಕುಮಾರ್ ಸಂಪರ್ಕಿಸಿ ಮಾತುಕತೆ ಮುಗಿಸಿದ್ದಾರೆ. ಇದರ ಮಧ್ಯೆ ಬಿಜೆಪಿಯ ಮಾಜಿ ಶಾಸಕರೊಬ್ಬರು ಕಾಂಗ್ರೆಸ್ ಸೇರ್ಪಡೆಗೆ ತೀರ್ಮಾನಿಸಿದ್ದಾರೆ. ಈ ಬಗ್ಗೆ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಪಕ್ಷ ಸೇರಲು ಸಮ್ಮತಿ ಸೂಚಿಸಿದ್ದಾರೆ.
ಉಡುಪಿ (ಸೆಪ್ಟೆಂಬರ್ 08): ಪಕ್ಷಾಂತರ ಮಾಡಲ್ಲ ಎಂದು ಹೇಳುತ್ತಲೇ ಬಿಜೆಪಿಯ ಕೆಲ ಶಾಸಕರಿಂದ ಕಾಂಗ್ರೆಸ್ನತ್ತ ಮುಖ ಮಾಡುತ್ತಿದ್ದಾರೆ. ಮತ್ತೊಂದೆಡೆ ವಿಧಾನಸಭೆ ಯಲ್ಲಿ ಮೊಳಗಿಸಿದ ವಿಜಯ ದುಂದುಬಿಯನ್ನು, ಲೋಕಸಭೆಯಲ್ಲೂ (Loksabha Elections 2024) ಹಾರಿಸಬೇಕೆಂಬುದು ಕಾಂಗ್ರೆಸ್(Congress) ನಾಯಕರ ಮಹದಾಸೆ. ಹೀಗಾಗಿಯೇ, ಬಿಜೆಪಿ ಹಾಲಿ ಶಾಸಕರು, ಸೋತಿರುವ ಪ್ರಭಾವಿ ಮಾಜಿ ಶಾಸಕರು, ಬಿಜೆಪಿ, ಜೆಡಿಎಸ್ನ ಪ್ರಭಾವಿ ಮುಖಂಡರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ. ಮತ್ತೊಂದೆಡೆ ಡಿಕೆ ಶಿವಕುಮಾರ್ ಯಾವುದೇ ಆಪರೇಷನ್ ಹಸ್ತ ನಡೆದಿಲ್ಲ ಎನ್ನುತ್ತಲೇ ಒಬ್ಬೊಬ್ಬರನ್ನೇ ಭೇಟಿಯಾಗಿ ಪಕ್ಷಕ್ಕೆ ಸೆಳೆಯುತ್ತಿದ್ದಾರೆ. ಇದೀಗ ಬಿಜೆಪಿ ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ(Bm sukumar Shetty) ಸಹ ಕಾಂಗ್ರೆಸ್ ಗಾಳಕ್ಕೆ ಬಿದ್ದಿದ್ದಾರೆ.

ಉಡುಪಿ ಜಿಲ್ಲೆ ಬೈಂದೂರು ಕ್ಷೇತ್ರದ ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೆರ್ಪಡೆಯಾಗಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಖುದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರಲು ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸುಕುಮಾರ್ ಶೆಟ್ಟಿ, ಮುಂದಿನ ದಿನಗಳಲ್ಲಿ ಬಿಜೆಪಿಗೆ ಭವಿಷ್ಯ ಇಲ್ಲ ಎಂದು ಕಾಂಗ್ರೆಸ್ ಸೇರುವ ಧೃಢ ನಿರ್ಧಾರ ಮಾಡಿದ್ದೇನೆ. ಕರಾವಳಿಯಲ್ಲಿ ಹಿಂದುತ್ವದ ಅಲೆ ಹೊರತುಪಡಿಸಿ ಬೇರೆಲ್ಲ ಕಡೆ ಬಿಜೆಪಿ ಹೆಸರು ಹಾಳುಮಾಡಿಕೊಂಡಿದೆ. ಡಿ ಕೆ ಶಿವಕುಮಾರ್ ಬಹಳಷ್ಟು ಬಾರಿ ಕರೆಮಾಡಿ ಆಹ್ವಾನ ನೀಡಿದ್ದಾರೆ. ಈಗ ನಾನು ಡಿಕೆ ಶಿವಕುಮಾರ್ ಅವರನ್ನ ಭೇಟಿಯಾಗಿ ಪಕ್ಷಕ್ಕೆ ಸೇರುವ ಬಗ್ಗೆ ಗ್ರೀನ್ ಸಿಗ್ನಲ್ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಬೆಳೆಯುವವರನ್ನು ಭಾರತೀಯ ಜನತಾ ಪಕ್ಷದಲ್ಲಿ ಬಿಡುವುದಿಲ್ಲ, ಕಾಲೆಳೆದು ಮಲಗಿಸುವ ಕೆಲಸ ಬಿಜೆಪಿಯ ಪರಿಪಾಠವಾಗಿದೆ. ಕಳೆದ ಚುನಾವಣೆಯಲ್ಲಿ ನನಗೆ ಟಿಕೆಟ್ ಕೊಡದೆ ಅನ್ಯಾಯ ಮಾಡಿದ್ದಾರೆ. ಬಿಜೆಪಿಗೆ ಭವಿಷ್ಯ ಇಲ್ಲ ಎಂದು ಕಾಂಗ್ರೆಸ್ ಸೇಡುತ್ತಿದ್ದೇನೆ ಎಂದರು
