| Edited By: Ashraf Kammaje
Updated on: Aug 20, 2023 | 9:08 AM

ಶಿಕ್ಷಕ ಅಂಪಾರು ದಿನಕರಶೆಟ್ಟಿ ಆಗಾಗ ಬಂದು ಹಾಜರು ಪುಸ್ತಕದಲ್ಲಿ ಸಹಿ ಹಾಕಿ ಹಿಂದಿರುಗುತ್ತಿದ್ದರು. ಜೊತೆಗೆ ನಿರಂತರವಾಗಿ ಶಾಲೆಯ ಯಾವುದೇ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಶಿಕ್ಷಕನ ಗೈರು ಹಾಜರಿಯ ಕುರಿತು ಪಂಚಾಯತ್ ಅಧ್ಯಕ್ಷ ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಉಡುಪಿ, ಆ.30: ಸುಮಾರು ಏಳು ವರ್ಷಗಳಿಂದ ಶಾಲೆಗೆ ಗೈರಾಗಿ ಸಂಬಳ ಪಡೆಯುತ್ತಿದ್ದ ಶಾಲಾ ಶಿಕ್ಷಕನನ್ನು(School Teacher) ಸದ್ಯ ಅಮಾನತುಗೊಳಿಸಲಾಗಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಆನಗಳ್ಳಿ ಸರ್ಕಾರಿ ಶಾಲೆಯ ಸಹಶಿಕ್ಷಕ ಅಂಪಾರು ದಿನಕರಶೆಟ್ಟಿ ಎಂಬುವವರು ಸುಮಾರು 7 ವರ್ಷಗಳಿಂದ ಶಾಲೆಗೆ ಬಾರದೆ, ಮಕ್ಕಳಿಗೆ ಪಾಠ ಮಾಡದೆ ಮನೆಯಲ್ಲೇ ಕುಳಿತು ಸಂಬಳ ಪಡೆಯುತ್ತಿದ್ದರು. ಸದ್ಯ ಈಗ ಸಸ್ಪೆಂಡ್ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಸರಕಾರಿ ನೌಕರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಆಗಿರುವ ಅಂಪಾರು ದಿನಕರಶೆಟ್ಟಿ ಅವರು ಆನಗಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕರೂ ಆಗಿದ್ದಾರೆ. ತಮ್ಮ ಮೇಲೆ ಬೆಟ್ಟದಷ್ಟು ಜವಾಬ್ದಾರಿ ಇದ್ದರೂ 2017 ರಿಂದ ಶಾಲೆಯ ಕಡೆಗೆ ಮುಖ ತೋರಿಸದೆ ಸರಕಾರಿ ಸಂಬಳ ಪಡೆಯುತ್ತಿದ್ದರು. ಅನಾರೋಗ್ಯದ ನೆಪ ಹೇಳಿ ಶಾಲೆಗೆ ಹಾಜರಾಗದೆ, ಬೇರೆಯೇ ವ್ಯವಹಾರ ಮಾಡಿಕೊಂಡಿದ್ದರು. ಸದ್ಯ ಈ ಬಗ್ಗೆ ತಿಳಿಯುತ್ತಿದ್ದಂತೆ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.

ಇನ್ನು ಸಹಶಿಕ್ಷಕ ಅನಾರೋಗ್ಯದಿಂದ ರಜೆಯಲ್ಲಿದ್ದ ಕಾರಣ ಇತರೆ ಶಿಕ್ಷಕರು ಮಕ್ಕಳಿಗೆ ತಮ್ಮ ಪಾಠದ ಜೊತೆಗೆ ರಜೆಯಲ್ಲಿದ್ದ ಶಿಕ್ಷಕನ ಪಾಠವನ್ನೂ ವರ್ಷಗಳ ಕಾಲ ಹೇಳಿಕೊಟ್ಟಿದ್ದಾರೆ. ಈ ವಿಚಾರ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕ್ರಮ ಕೈಗೊಂಡಿಲ್ಲ. ಶಿಕ್ಷಕ ಅಂಪಾರು ದಿನಕರಶೆಟ್ಟಿ ಆಗಾಗ ಬಂದು ಹಾಜರು ಪುಸ್ತಕದಲ್ಲಿ ಸಹಿ ಹಾಕಿ ಹಿಂದಿರುಗುತ್ತಿದ್ದರು. ಜೊತೆಗೆ ನಿರಂತರವಾಗಿ ಶಾಲೆಯ ಯಾವುದೇ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಶಿಕ್ಷಕನ ಗೈರು ಹಾಜರಿಯ ಕುರಿತು ಪಂಚಾಯತ್ ಅಧ್ಯಕ್ಷ ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ ಬಳಿಕ ಇಲಾಖೆ ಎಚ್ಚೆತ್ತುಕೊಂಡಿದ್ದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ರು. ಈ ವೇಳೆ ದಿನಕರಶೆಟ್ಟಿ ಗೈರಾಗಿದ್ದು ಶಿಕ್ಷಕನ ವರ್ತನೆ ನೋಡಿ ಶಿಕ್ಷಕ ಅಂಪಾರು ದಿನಕರಶೆಟ್ಟಿ ಅಮಾನತು ಮಾಡಿ ಇಲಾಖೆ ಆದೇಶ ಹೊರಡಿಸಿದೆ.
