
ಲೇಹ್ನಿಂದ 150 ಕಿಮೀ ದೂರದಲ್ಲಿರುವ ಕಿಯಾರಿಯಲ್ಲಿ ಸಂಜೆ ಈ ಅಪಘಾತ ನಡೆದಿದೆ. ಮೃತರ ಪೈಕಿ ಒಬ್ಬರು ಜೂನಿಯರ್ ಕಮಿಷನ್ಡ್ ಆಫೀಸರ್ ಹಾಗೂ 8 ಜವಾನರು ಮೃತಪಟ್ಟಿದ್ದಾರೆ ಎಂದೂ ಸೇನೆ ತಿಳಿಸಿದೆ.
ನವದೆಹಲಿ (ಅಗಸ್ಟ್ 19, 2023): ಲಡಾಖ್ನಲ್ಲಿ ಸೈನಿಕರು ಪ್ರಯಾಣಿಸ್ತಿದ್ದ ಟ್ರಕ್ ರಸ್ತೆಯಿಂದ ಸ್ಕಿಡ್ ಆಗಿ ನದಿಗೆ ಬಿದ್ದಿದ್ದು, 9 ಸೈನಿಕರು ದುರ್ಮರಣಕ್ಕೀಡಾಗಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಈ ಬಗ್ಗೆ ಸ್ವತ: ಭಾರತೀಯ ಸೇನೆ ಮಾಹಿತಿ ನೀಡಿದೆ.

ಲೇಹ್ನಿಂದ 150 ಕಿಮೀ ದೂರದಲ್ಲಿರುವ ಕಿಯಾರಿಯಲ್ಲಿ ಸಂಜೆ ಈ ಅಪಘಾತ ನಡೆದಿದೆ ಎಂದು ತಿಳಿದುಬಂದಿದೆ. ಟ್ರಕ್ನಲ್ಲಿ 10 ಯೋಧರು ಪ್ರಯಾಣಿಸುತ್ತಿದ್ದರು ಮತ್ತು ಬೆಂಗಾವಲು ಪಡೆಯಲ್ಲಿ ಐದು ವಾಹನಗಳಿದ್ದವು ಎಂದೂ ತಿಳಿದುಬಂದಿದೆ.

ಮೃತರ ಪೈಕಿ ಒಬ್ಬರು ಜೂನಿಯರ್ ಕಮಿಷನ್ಡ್ ಆಫೀಸರ್ ಹಾಗೂ 8 ಜವಾನರು ಮೃತಪಟ್ಟಿದ್ದಾರೆ ಎಂದೂ ಸೇನೆ ತಿಳಿಸಿದೆ.

“ಫಿರಂಗಿ ಘಟಕಕ್ಕೆ ಸೇರಿದ ಪಡೆಗಳು ಕರು ಗ್ಯಾರಿಸನ್ನಿಂದ ಲೇಹ್ ಬಳಿಯ ಕ್ಯಾರಿಗೆ ತೆರಳುತ್ತಿದ್ದವು. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ” ಎಂದು ರಕ್ಷಣಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದೂ ಸೇನೆ ಮಾಹಿತಿ ನೀಡಿದೆ. ಸಂಜೆ 6.30ರ ಸುಮಾರಿಗೆ ಸಂಭವಿಸಿದ ಘಟನೆಯಲ್ಲಿ ಒಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದೂ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಆರಂಭದಲ್ಲಿ 7 ಜವಾನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿತಾದರೂ, ನಂತರ ಸಾವಿನ ಸಂಖ್ಯೆ ಹೆಚ್ಚಾಗಿದೆ. ಇನ್ನು, ಸೈನಿಕರ ದುರ್ಮರಣದ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಲಡಾಖ್ನ ಲೇಹ್ ಬಳಿ ಅಪಘಾತದಲ್ಲಿ ಭಾರತೀಯ ಸೇನೆಯ ಸಿಬ್ಬಂದಿಯನ್ನು ಕಳೆದುಕೊಂಡಿರುವುದು ದುಃಖವಾಗಿದೆ. ನಮ್ಮ ದೇಶಕ್ಕೆ ಅವರ ಆದರ್ಶ ಸೇವೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ನನ್ನ ಆಲೋಚನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ. ಗಾಯಗೊಂಡ ಸಿಬ್ಬಂದಿಯನ್ನು ಫೀಲ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಪೋಸ್ಟ್ ಮಾಡಿದ್ದಾರೆ.