
ಶಿವಮೊಗ್ಗ: ಜಿಲ್ಲೆಯ ಸೊರಬ (Soraba) ತಾಲೂಕಿನ ಚಂದ್ರಗುತ್ತಿ ರೇಣುಕಾಂಬಾ ದೇವಾಲಯದಲ್ಲಿ ಆಗಸ್ಟ್ 2 ರಂದು ನಡೆದಿದ್ದ ಕಳ್ಳತನ (Theft) ಪ್ರಕರಣವನ್ನು ಭೇದಿಸುವಲ್ಲಿ ಸೊರಬ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ

ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಚಂದ್ರಗುತ್ತಿಯ ಪ್ರವೀಣ್ (33), ದೇವರಾಜು (50) ಭೀಮಪ್ಪ (35) ಎಂದು ಗುರುತಿಸಲಾಗಿದೆ. ಈ ಪ್ರಕರಣ ರಾಜಕೀಯ ದ್ವೇಷದಿಂದ ನಡೆದಿರುವುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಆರೋಪಿ ದೇವರಾಜು ದೇವಸ್ಥಾನ (Temple) ಕಮಿಟಿಗೆ ಸೇರಲು ಬಯಸಿದ್ದ. ಇದಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದನು. ಆದರೆ ಕಮಿಟಿ ಈತನ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಹಾಲಿ ದೇವಸ್ಥಾನ ಕಮಿಟಿಯ ಅಧ್ಯಕ್ಷನೇ ಕಳ್ಳತನ ಪ್ರಕರಣಕ್ಕೆ ಕಾರಣ ಎಂದು ಬಿಂಬಿಸುವ ಸಲುವಾಗಿ ಈ ಕೃತ್ಯ ಎಸಗಿದ್ದ

ದ್ವೇಷದಿಂದ ಕಮಿಟಿ ಅಧ್ಯಕ್ಷರ ಹೆಸರಿಗೆ ಕಳಂಕ ತಂದು ಅವರನ್ನು ದೇವಸ್ಥಾನ ಕಮಿಟಿಯಿಂದ ತೆಗೆಸುವ ಸಲುವಾಗಿ ದೇವಸ್ಥಾನದಲ್ಲಿ ಕಳ್ಳತನ ಆಗಿರುವಂತೆ ಬಿಂಬಿಸಿ, ದೇವಸ್ಥಾನದ ಪಾವಿತ್ರ್ಯತೆ ಹಾಗೂ ದೇವಸ್ಥಾನದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ಮಾಡಲು ಕಳ್ಳತನಕ್ಕೆ ಪ್ರಯತ್ನ ಮಾಡಿರುವುದು ಪೊಲೀಸರ ವಿಚಾರಣೆ ವೇಳೆ ಬಹಿರಂಗವಾಗಿದೆ. ಆರೋಪಿತರನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.