Edited By: Ashraf Kammaje
Updated on: Aug 17, 2023 | 3:43 PM

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶನನ್ನ ಕೂರಿಸುತ್ತೇವೆ, ಯಾರು ವಿರೋಧ ಮಾಡುತ್ತಾರೆ ನೋಡುತ್ತೇವೆ ಅಂತ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಇದರ ಬೆನ್ನಲ್ಲೇ ಹೇಳಿಕೆ ನೀಡಿದ ಎಐಎಂಐಎಂ ಜಿಲ್ಲಾಧ್ಯಕ್ಷ, ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವಕ್ಕೆ ಅನುಮತಿ ಬೇಡ, ಗ್ಲಾಸ್ಹೌಸ್ನಲ್ಲಿ ಆಚರಿಸಿ ಎಂದಿದ್ದಾರೆ
ಹುಬ್ಬಳ್ಳಿ, ಆಗಸ್ಟ್ 17: ಈದ್ಗಾ ಮೈದಾನದಲ್ಲಿ ಗಣೇಶನನ್ನ ಕೂರಿಸುತ್ತೇವೆ, ಯಾರು ವಿರೋಧ ಮಾಡುತ್ತಾರೆ ನೋಡುತ್ತೇವೆ ಅಂತ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಮಾತನಾಡಿದ ಎಐಎಂಐಎಂ (AIMIM) ಜಿಲ್ಲಾಧ್ಯಕ್ಷ ನಜೀರ್ ಸಾಬ್ ಹೊನ್ಯಾಳ್, ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ (Ganesh Chaturthi) ಮೊದಲಿನಿಂದಲೂ ವಿರೋಧ ಇದೆ. ಹೀಗಾಗಿ ಮೈದಾನದಲ್ಲಿ ಗಣೇಶ ಉತ್ಸವಕ್ಕೆ ಅನುಮತಿ ನೀಡುವುದು ಬೇಡ. ನಮ್ಮ ಪಕ್ಷ ಈದ್ಗಾ ಮೈದಾನದಲ್ಲಿ ಗಣೇಶ ಆಚರಣೆಗೆ ವಿರೋಧ ಮಾಡತ್ತದೆ ಎಂದಿದ್ದಾರೆ.

ಕಳೆದ ಬಾರಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಿತ್ತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 11 ದಿನ ಅನುಮತಿ ಕೇಳುತ್ತಿದ್ದಾರೆ. ಮುಂದಿನ ಬಾರಿ ಯಾವುದೇ ಚುನಾವಣೆ ಇರಲ್ಲ, ಅನುಮತಿ ಕೇಳುವುದಿಲ್ಲ. ಈದ್ಗಾ ಮೈದಾನದಲ್ಲೇ ಯಾಕೆ ಗಣೇಶ ಉತ್ಸವ ಆಚರಣೆ ಮಾಡಬೇಕು. ಬೇರೆ ಕಡೆ ಇರುವ ಜಾಗದಲ್ಲಿ ಗಣೇಶ ಉತ್ಸವ ಆಚರಣೆ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.

ಗ್ಲಾಸ್ಹೌಸ್ನಲ್ಲಿ ಗಣೇಶ ಉತ್ಸವ ಆಚರಣೆ ಮಾಡೋಣವೆಂದು ಹೇಳಿದ ನಜೀರ್, ಈದ್ಗಾ ಮೈದಾನದಲ್ಲೇ ಆಚರಣೆ ಮಾಡಬೇಕು ಎನ್ನುವುದು ಕೆಟ್ಟ ವಿಚಾರ ಎಂದರು. ವಿರೋಧಿಸಲು ಇದು ಪಾಕಿಸ್ತಾನ ಅಲ್ಲವೆಂದು ಮುತಾಲಿಕ್ ಹೇಳಿಕೆ ವಿಚಾರವಾಗಿ ಮಾತನಾಡಿದ ನಜೀರ್, ಇದು ಹಳೇ ಡೈಲಾಗ್, ವಿರೋಧಿಸಿದರೆ ನಮ್ಮನ್ನು ಪಾಕಿಸ್ತಾನಕ್ಕೆ ಕಳಿಸುತ್ತೀರಾ? ಪರ ಮಾತಾಡಿದವರನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸುತ್ತೀರಾ ಎಂದು ಪ್ರಶ್ನಿಸಿದ ಅವರು, ನಮ್ಮ ಪಕ್ಷ ಈದ್ಗಾ ಮೈದಾನದಲ್ಲಿ ಗಣೇಶ ಆಚರಣೆಗೆ ವಿರೋಧ ಮಾಡತ್ತೆ ಎಂದರು.
ಈದ್ಗಾ ಮೈದಾನ, ಪಾಕಿಸ್ತಾನ ಅಥವಾ ಅಘ್ಗಾನಿಸ್ತಾನದಲಿಲ್ಲ. ಈ ಬಾರಿಯೂ ಈದ್ಗಾ ಮೈದಾನದಲ್ಲಿ ಗಣೇಶನನ್ನ ಕೂರಿಸುತ್ತೇವೆ ಎಂದ ಪ್ರಮೋದ್ ಮುತಾಲಿಕ್, ಇಲ್ಲಿ ಗಣೇಶನನ್ನು ಕೂರಿಸಲು ಯಾರು ವಿರೋಧ ಮಾಡುತ್ತಾರೆ ನೋಡುತ್ತೇವೆ ಎಂದು ಸವಾಲು ಹಾಕಿದ್ದರು.

ಅಲ್ಲದೆ, ನಮ್ಮ ದೇಶದಲ್ಲಿ ಗಣೇಶನನ್ನು ಕೂರಿಸಲು ವಿರೋಧ ಮಾಡಲಾಗದು. ನಾವು ಇಲ್ಲಿ ಅಲ್ಲಾಹ್ನನ್ನು ಮತ್ತು ಏಸು ಕ್ರಿಸ್ತನ ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಆದರೆ, ಗಣೇಶನನ್ನು ಕೂರಿಸಲು ಹೇಗೆ ವಿರೋಧ ಮಾಡುತ್ತೀರಿ? ಸಹನೆ ಮೀರಿ ಹೋಗಿದೆ. ಶಾಸ್ತ್ರೋತ್ತವಾಗಿ ಗಣೇಶನನ್ನು ಕೂರಿಸುತ್ತೇವೆ. ಈ ಬಗ್ಗೆ ಪಾಲಿಕೆಗೆ ಮನವಿ ಸಲ್ಲಿಸುತ್ತೇವೆ ಎಂದರು.