
ನವದೆಹಲಿ: ಅನರ್ಹತೆ ರದ್ದಾದ ಬಳಿಕ ಬುಧವಾರ ಮೊದಲ ಬಾರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಸಂಸತ್ನಲ್ಲಿ ಭಾಷಣ ಮಾಡಿದ್ದು, ಮಣಿಪುರ ವಿಚಾರಕ್ಕೆ ಸಂಬಂಧಿಸಿದಂತೆ ಅವರು ನೀಡಿದ ಹೇಳಿಕೆಯು ಕೋಲಾಹಲ ಸೃಷ್ಟಿಸಿತು. ‘ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ.
ಮಣಿಪುರದಲ್ಲಿ ಭಾರತವನ್ನೇ ಹತ್ಯೆಗೈಯಲಾಗಿದೆ’ ಎಂದು ರಾಹುಲ್ ಗಾಂಧಿ ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಸಂಸತ್ತಿನಲ್ಲಿ ಗಲಾಟೆ ನಡೆಯಿತು.

‘ಮಣಿಪುರದಲ್ಲಿ ಜನರ ಧ್ವನಿಯನ್ನು ಹುದುಗಿಸಲಾಗಿದೆ. ಇದರೊಂದಿಗೆ ಮಣಿಪುರದಲ್ಲಿ ಭಾರತವನ್ನು ಹತ್ಯೆ ಮಾಡಲಾಗಿದೆ. ನೀವು ದೇಶ ಭಕ್ತರಲ್ಲ, ನೀವು ದೇಶದ್ರೋಹಿಗಳು. ಇದೇ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ತೆರಳಲಿಲ್ಲ. ಮಣಿಪುರದಲ್ಲಿ ಹಿಂದುಸ್ಥಾನದ ಕಗ್ಗೊಲೆಯಾಗಿದೆ. ನೀವು ಭಾರತ ಮಾತೆಯನ್ನು ರಕ್ಷಿಸುವವರಲ್ಲ, ನೀವು ಹತ್ಯೆ ಮಾಡುವವರು’ ಎಂದು ರಾಹುಲ್ ಗಾಂಧಿ ಹೇಳಿದರು.
ಭಾಷಣ ಮುಂದುವರಿಸಿದ ರಾಹುಲ್ ಗಾಂಧಿ, ‘ನಾನು ನಮ್ಮ ತಾಯಿಯ ಹತ್ಯೆಯಾಗಿರುವ ಕುರಿತು ಮಾತನಾಡುತ್ತಿದ್ದೇನೆ. ಮಣಿಪುರದಲ್ಲಿ ನನ್ನ ತಾಯಿಯ ಹತ್ಯೆಯಾಗಿರುವ ಕುರಿತು ಮಾತನಾಡುತ್ತಲೇ ಇರುತ್ತೇನೆ. ಒಬ್ಬ ತಾಯಿ ಇಲ್ಲಿ ಕುಳಿತಿದ್ದಾರೆ. ಮತ್ತೊಬ್ಬ ತಾಯಿಯನ್ನು ಮಣಿಪುರದಲ್ಲಿ ಹತ್ಯೆ ಮಾಡಲಾಗಿದೆ. ದೇಶದ ಸೇನೆಯನ್ನು ಮಣಿಪುರಕ್ಕೆ ಕಳುಹಿಸಿದರೆ ಒಂದೇ ದಿನದಲ್ಲಿ ಶಾಂತಿ ಸ್ಥಾಪನೆ ಮಾಡಬಹುದು. ಆದರೆ, ನರೇಂದ್ರ ಮೋದಿ ಅವರು ಮಣಿಪುರದ ಜನರ ಧ್ವನಿಯನ್ನು ಕೇಳುವುದಿಲ್ಲ. ದೇಶದ ಜನರ ಮಾತು ಕೇಳುವುದಿಲ್ಲ. ಅವರು ಅಮಿತ್ ಶಾ ಹಾಗೂ ಅದಾನಿಯವರ ಮಾತುಗಳನ್ನು ಮಾತ್ರ ಕೇಳುತ್ತಾರೆ’ ಎಂದು ಕುಟುಕಿದರು.

ರಾವಣನ ಉಲ್ಲೇಖ ಮಾಡಿದ ರಾಹುಲ್ ಗಾಂಧಿ
‘ರಾವಣ ಇಬ್ಬರ ಮಾತನ್ನು ಕೇಳುತ್ತಿದ್ದ. ಮೇಘನಾಥ ಹಾಗೂ ಕುಂಭಕರ್ಣರ ಮಾತನ್ನು ಮಾತ್ರ ರಾವಣ ಕೇಳುತ್ತಿದ್ದ. ಹಾಗೆಯೇ, ನರೇಂದ್ರ ಮೋದಿ ಅವರು ಅಮಿತ್ ಶಾ ಹಾಗೂ ಅದಾನಿಯವರ ಮಾತುಗಳನ್ನು ಮಾತ್ರ ಕೇಳುತ್ತಿದ್ದರು. ಲಂಕಾವನ್ನು ಸುಟ್ಟಿದ್ದು ಹನುಮಾನ್ ಅಲ್ಲ, ಲಂಕಾ ಭಸ್ಮಗೊಂಡಿದ್ದು ರಾವಣನ ಅಹಂಕಾರದಿಂದ. ರಾಮನು ರಾವಣನನ್ನು ಕೊಂದಿರಲಿಲ್ಲ. ರಾವಣ ಅಹಂಕಾರವು ಆತನನ್ನು ನುಂಗಿಹಾಕಿತು. ನೀವು ದೇಶಾದ್ಯಂತ ಸೀಮೆಎಣ್ಣೆ ಸುರಿದು ಹಿಂಸಾಚಾರಕ್ಕೆ ಕಾರಣರಾಗುತ್ತಿದ್ದೀರಿ. ಮೊದಲು ಮಣಿಪುರದಲ್ಲಿ ಸೀಮೆಎಣ್ಣೆ ಸುರಿದಿರಿ. ಬಳಿಕ ಹರಿಯಾಣದಲ್ಲಿ ಹಿಂಸಾಚಾರ ನಡೆಸಿದರು. ದೇಶಾದ್ಯಂತ ನೀವು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದೀರಿ’ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಅವರು ಅಬ್ಬರದ ಭಾಷಣ ಮುಗಿಸಿದರು.