
ಗಡಿಪಾರು ನೋಟಿಸ್ ಅಪರಾಧಿಗಳಿಗೆ ನೀಡಿರುವುದು. ಅವರು ಹಲವು ಪ್ರಕರಣಗಳಲ್ಲಿ ಭಾಗಿಯಾದವರು. ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಿದ್ದಾರೆ. ಅವರ ಮೇಲೆ ಅನೇಕ ಪ್ರಕರಣಗಳು ದಾಖಲಾಗಿವೆ. ಅಂಥವರ ಪರ ಬಿಜೆಪಿಯವರು ವಕಾಲತ್ತು ವಹಿಸುತ್ತಾರೆ ಅಂದರೆ, ಅದಕ್ಕಿಂತ ಕೆಟ್ಟಸಂಗತಿ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ

ಬಜರಂಗದಳದ ಮೂವರು ಕಾರ್ಯಕರ್ತರಿಗೆ ಪೊಲೀಸರು ಗಡೀಪಾರು ನೋಟಿಸ್ ನೀಡಿರುವ ವಿಚಾರವಾಗಿ ಬಿಜೆಪಿಯವರ ವಿರೋಧದ ಬಗ್ಗೆ ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಪರಾಧಿಗಳ ವಿರುದ್ಧ ಕ್ರಮ ವಹಿಸಲು ಯಾವುದೇ ಜಾತಿ-ಧರ್ಮ ಅಡ್ಡ ಬರುವುದಿಲ್ಲ. ನಮ್ಮ ಪೊಲೀಸರಿಗೆ ತಪ್ಪು$ಮಾಡಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಹೇಳಿದ್ದೇವೆ. ಇದಕ್ಕೆ ರಾಜಕೀಯ ಬಣ್ಣ ಹಚ್ಚುವ ಯಾವುದೇ ಪ್ರಸ್ತಾಪ ಇಲ್ಲ ಎಂದವರು ಹೇಳಿದರು.

ಜಿಲ್ಲೆಯಲ್ಲಿ ಈಗಾಗಲೇ 65 ಮಂದಿಯನ್ನು ಗಡಿಪಾರು ಮಾಡಲಾಗಿದೆ. ಆ ಪಟ್ಟಿಯನ್ನು ಬಿಜೆಪಿಯವರು ನೋಡಲಿ. ಧರ್ಮಕ್ಕೂ ಇದಕ್ಕೂ ಸಂಬಂಧವಿಲ್ಲ. ಬಿಜೆಪಿ ಇಂಥ ಕೆಲಸಕ್ಕೆ ಪ್ರೋತ್ಸಾಹಿಸುತ್ತದೆ ಎಂದಾದರೆ ಅಪರಾಧ ಕೃತ್ಯಗಳಿಗೆ ಬೆಂಬಲ ಇದೆ ಎಂದಾಯಿತು ಎಂದು ದಿನೇಶ್ ಗುಂಡೂರಾವ್ ಹೇಳಿದರು.