
ಮುಂಬೈ: ಮಹಾರಾಷ್ಟ್ರ (Maharastra) ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ (Speaker ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ 40 ಶಾಸಕರು ಮತ್ತು ಉದ್ಧವ್ ಠಾಕ್ರೆ ಬಣದ 14 ಶಾಸಕರಿಗೆ ತಮ್ಮ ವಿರುದ್ಧದ ಅನರ್ಹತೆ ಅರ್ಜಿಗಳಿಗೆ ಉತ್ತರ ನೀಡುವಂತೆ ನೋಟಿಸ್ ನೀಡಿದ್ದಾರೆ.

ಶಾಸಕರಿಗೆ ಪ್ರತಿಕ್ರಿಯೆ ನೀಡಲು 7 ದಿನಗಳ ಕಾಲಾವಕಾಶ ನೀಡಲಾಗಿದ್ದು, ಅನರ್ಹತೆಯ ವಿರುದ್ಧದ ಕ್ರಮವನ್ನು ತಪ್ಪಿಸಲು ಅಗತ್ಯವಿರುವ ಎಲ್ಲಾ ಸಾಕ್ಷ್ಯಗಳನ್ನು ಸಲ್ಲಿಸಬೇಕು ಎಂದು ಸ್ಪೀಕರ್ ಕಚೇರಿಯಿಂದ ಸೂಚನೆ ನೀಡಲಾಗಿದೆ. ಅನರ್ಹತೆ ಅರ್ಜಿಗಳ ವಿಚಾರಣೆಯು ಶೀಘ್ರದಲ್ಲೇ ನಡೆಯಲಿದೆ.
ಏಕನಾಥ್ ಶಿಂಧೆ (Eknath Shindhe) ಮತ್ತು ಉದ್ಧವ್ ಠಾಕ್ರೆ (Uddhav Thackeray) ಇಬ್ಬರನ್ನೂ ಸ್ಪೀಕರ್ ಅವರು ಸಾಕ್ಷ್ಯಾಧಾರಗಳೊಂದಿಗೆ ತಮ್ಮ ಅಭಿಪ್ರಾಯಗಳನ್ನು ನೀಡಲು ಕರೆಯಬಹುದು. ಕುತೂಹಲಕರ ಬೆಳವಣಿಗೆಯಲ್ಲಿ ಕಳೆದ ವರ್ಷ ಉದ್ಧವ್ ಠಾಕ್ರೆ ಬಣದಿಂದ ಅಂಧೇರಿ (ಪೂರ್ವ) ಉಪಚುನಾವಣೆಯಲ್ಲಿ ಗೆದ್ದಿದ್ದ ಆದಿತ್ಯ ಠಾಕ್ರೆ ಮತ್ತು ರುತುಜಾ ಲಟ್ಕೆ ಅವರಿಗೆ ನೋಟಿಸ್ ನೀಡಲಾಗಿಲ್ಲ.

ಇದಕ್ಕೂ ಮುನ್ನ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಶಾಸಕ ಸುನೀಲ್ ಪ್ರಭು (Sunil Prabhu) ಅವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿ ಏಕನಾಥ್ ಶಿಂಧೆ ಸೇರಿದಂತೆ 16 ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳನ್ನು ತ್ವರಿತವಾಗಿ ತೀರ್ಮಾನಿಸುವಂತೆ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಗೆ ನಿರ್ದೇಶನ ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದರು. ಪಕ್ಷ ವಿರೋಧಿ ಚಟುವಟಿಕೆಗಳ ಆರೋಪ ಹೊತ್ತಿರುವ ಏಕನಾಥ್ ಶಿಂಧೆ ಸೇರಿದಂತೆ ಶಿವಸೇನೆಯ 16 ಶಾಸಕರ ಭವಿಷ್ಯವನ್ನು ನಿರ್ಧರಿಸುವಂತೆ ಮೇ 11 ರಂದು ಸುಪ್ರೀಂಕೋರ್ಟ್ ಸ್ಪೀಕರ್ ಗೆ ಸೂಚಿಸಿತ್ತು.

ಕಳೆದ ವರ್ಷ ಜೂನ್ನಲ್ಲಿ, ಏಕನಾಥ್ ಶಿಂಧೆ ಮತ್ತು ಇತರ 15 ಶಾಸಕರು ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಎದ್ದು ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದರು. ತರುವಾಯ ಶಿಂಧೆ ಮತ್ತು ಬಂಡಾಯ ಶಾಸಕರು ಹೊಸ ಸರ್ಕಾರ ರಚಿಸಲು ಬಿಜೆಪಿ ಜೊತೆ ಕೈಜೋಡಿಸಿದರು