
ಇಂಪಾಲ: 1,500 ಕ್ಕೂ ಹೆಚ್ಚು ಮಹಿಳೆಯರಿದ್ದ ಗುಂಪು ಸೇನಾ ವಾಹನಗಳಿಗೆ ಮುತ್ತಿಗೆ ಹಾಕಿದ ನಂತರ ಭಾರತೀಯ ಸೇನೆ (Indian Army) 12 ಜನ ದಾಳಿಕೋರರನ್ನು ಬಿಡುಗಡೆ ಮಾಡಿದ ಘಟನೆ ಮಣಿಪುರದಲ್ಲಿ (Manipur) ನಡೆದಿದೆ.

ಸೇನಾ ವಾಹನವನ್ನು ತಡೆದವರ ಬಳಿ ಸ್ಫೋಟಕಗಳು ಹಾಗೂ ಶಸ್ತ್ರಾಸ್ತಗಳಿದ್ದವು. ಅದ್ದರಿಂದ ನಾಗರಿಕರ ಪ್ರಾಣಕ್ಕೆ ಅಪಾಯ ಆಗದಂತೆ ರಕ್ಷಿಸಲು ದಾಳಿಕೋರರನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ಸೇನೆ ಕೈಗೊಂಡಿದೆ. ಸೇನೆ ಮಾನವೀಯ ದೃಷ್ಠಿಯಿಂದ ಯಾವುದೇ ದಾಳಿ ನಡೆಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇನೆಯ ಕಾರ್ಯಕ್ಕೆ ಕಾರ್ಯಾಚರಣೆಯ ಉಸ್ತುವಾರಿ ಕಮಾಂಡರ್ ಅವರನ್ನು ಅಧಿಕಾರಿಗಳು ಶ್ಲಾಘಿಸಿದ್ದಾರೆ.

ಸೇನೆಯು ಮೈತೇಯ್ ಉಗ್ರಗಾಮಿ ಸಂಘಟನೆಯ 12 ಕೆವೈಕೆಎಲ್ ಉಗ್ರಗಾಮಿಗಳನ್ನು ಬಂಧಿಸಿತ್ತು. ಈ ಗುಂಪು 2015 ರಲ್ಲಿ 6 ಡೋಗ್ರಾ ಘಟಕದ ಮೇಲೆ ದಾಳಿ ಸೇರಿದಂತೆ ಹಲವು ದಾಳಿಗಳಲ್ಲಿ ಭಾಗಿಯಾಗಿತ್ತು ಎಂದು ಸೇನೆ ತಿಳಿಸಿದೆ. ಅಲ್ಲದೇ ಸೇನಾ ವಾಹನವನ್ನು ಸುತ್ತುವರೆದ ಮಹಿಳೆಯರಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಸ್ಟಿ ಮೀಸಲಾತಿ ವಿಚಾರವಾಗಿ ಮೈತೇಯ್ ಮತ್ತು ಕುಕಿ ಬುಡಕಟ್ಟು ಸಮುದಾಯಗಳ ನಡುವೆ ಸಂಘರ್ಷ ಶುರುವಾಗಿದೆ. ಇದು ಮಣಿಪುರದಲ್ಲಿ ಹಿಂಸಾಚಾರ ಬುಗಿಲೆದ್ದಿತ್ತು. ಮೈತೇಯ್ ಹಾಗೂ ಕುಕಿ ಬುಡಕಟ್ಟು ಜನಾಂಗದ ನಡುವಿನ ಘರ್ಷಣೆಯಲ್ಲಿ ಇಲ್ಲಿಯ ವರೆಗೆ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.