
ರಾಜ್ಯ ಬಿಜೆಪಿ ನಾಯಕರಿಗೆ ಬಡವರ ಪರ ಕಾಳಜಿ ಇದ್ದರೆ, ಅಕ್ಕಿ ಕೊಡಲಾಗದಿದ್ದರೆ ಜನರಿಗೆ ಹಣವನ್ನೇ ಕೊಡಿ ಎಂದು ನಮಗೆ ಸಲಹೆ ನೀಡುವ ಬದಲು ರಾಜಕೀಯ ಬಿಟ್ಟು ಕರ್ನಾಟಕಕ್ಕೆ ಅಕ್ಕಿ ಕೊಡಿ ಎಂದು ತಮ್ಮದೇ ಪಕ್ಷದ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಬೆಂಗಳೂರು (ಜೂ.19): ರಾಜ್ಯ ಬಿಜೆಪಿ ನಾಯಕರಿಗೆ ಬಡವರ ಪರ ಕಾಳಜಿ ಇದ್ದರೆ, ಅಕ್ಕಿ ಕೊಡಲಾಗದಿದ್ದರೆ ಜನರಿಗೆ ಹಣವನ್ನೇ ಕೊಡಿ ಎಂದು ನಮಗೆ ಸಲಹೆ ನೀಡುವ ಬದಲು ರಾಜಕೀಯ ಬಿಟ್ಟು ಕರ್ನಾಟಕಕ್ಕೆ ಅಕ್ಕಿ ಕೊಡಿ ಎಂದು ತಮ್ಮದೇ ಪಕ್ಷದ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕಕ್ಕೆ ಅಕ್ಕಿ ಕೊಡಲು ಕೇಂದ್ರ ಸರ್ಕಾರದವರು ರಾಜಕೀಯ ಮಾಡುತ್ತಿದ್ದಾರೆ. ಭಾರತೀಯ ಆಹಾರ ನಿಗಮದವರು ಮೊದಲು ನಮ್ಮ ಪತ್ರವನ್ನು ಒಪ್ಪಿ ಅಕ್ಕಿ ಕೊಡುತ್ತೇವೆ ಎಂದವರು ನಂತರ ಕೇಂದ್ರ ಗ್ರಾಹಕರ ಇಲಾಖೆ ಹೇಳಿದೆ, ಅಕ್ಕಿ ಕೊಡಲಾಗಲ್ಲ ಅಂತ ಜೂ.14ರಂದು ಮತ್ತೊಂದು ಪತ್ರ ಬರೆಯುತ್ತಾರೆ. ಅಂದರೆ ಇದು ರಾಜಕೀಯ ಅಲ್ವಾ? ಈಗ ಬಿಜೆಪಿಯವರು ಕೇಂದ್ರ ಸಚಿವರ ಜೊತೆ ಚರ್ಚಿಸಬೇಕಿತ್ತು.

ಅಕ್ಕಿ ಕೊಡಲಾಗದಿದ್ದರೆ ಜನರಿಗೆ ದುಡ್ಡೇ ಕೊಡಲಿ ಅಂತಿದ್ದಾರಲ್ಲಾ, ಜನರಿಗೆ ಅಕ್ಕಿ ಬದಲು ದುಡ್ಡು ಕೊಟ್ಟರೆ ದುಡ್ಡು ತಿನ್ನೋಕಾಗುತ್ತಾ? ಬಿಜೆಪಿಯವರು ಇಂತಹ ಸಲಹೆಗಳನ್ನು ನೀಡುವ ಬದಲು ತಮ್ಮದೇ ಪಕ್ಷದ ಕೇಂದ್ರ ಸರ್ಕಾರಕ್ಕೆ ರಾಜಕೀಯ ಬಿಟ್ಟು ಕರ್ನಾಟಕಕ್ಕೆ ಅಕ್ಕಿ ಕೊಡಿ ಎಂದು ಒತ್ತಾಯ ಮಾಡಲಿ. ನಮಗೆ ಅಕ್ಕಿ ಕೊಡುತ್ತಿದ್ದವರು ಎಫ್ಸಿಐನವರು. ಅವರು ಕೊಡಲಾಗಲ್ಲ ಅಂತ ಮೊದಲೇ ಹೇಳಿದ್ದರೆ ನಾವು ಕೇಂದ್ರ ಸಚಿವರ ಜೊತೆ ಮಾತನಾಡಬಹುದಿತ್ತು. ಈಗ ಮಾತನಾಡಲಿಲ್ಲ ಎನ್ನುವುದು ನೆಪ ಅಷ್ಟೆ. ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದರು.