
ಬೆಂಗಳೂರು: 2022-23ರಲ್ಲಿ ಉತ್ತೀರ್ಣರಾಗಿರುವ 18ರಿಂದ 25 ವರ್ಷದೊಳಗಿನ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ಸಾವಿರ ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ಮಂಗಳಮುಖಿಯರಿಗೂ (Transgender) ಇದು ಅನ್ವಯವಾಗುತ್ತದೆ ಎಂದು ಮುಖ್ಯಮಂತ್ರಿ (Siddaramaiah) ಘೋಷಣೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರದಲ್ಲೇ ಯುವ ನಿಧಿ ಯೋಜನೆಗೆ (Yuva Nidhi Scheme) ಅರ್ಜಿ ಆಹ್ವಾನಿಸಲಾಗುವುದು. 2022-23 ರಲ್ಲಿ ವ್ಯಾಸಂಗ ಮಾಡಿ ಪಾಸ್ ಆಗಿರುವ ಎಲ್ಲಾ ಪದವೀಧರರಿಗೆ 24 ತಿಂಗಳವರೆಗೆ ಪ್ರತಿ ತಿಂಗಳು 3000 ರೂ. ಪದವೀಧರರಿಗೆ, 1500 ಡಿಪ್ಲೋಮಾ ಹೋಲ್ಡರ್ಸ್ಗಳಿಗೆ ಪಾವತಿ ಮಾಡಲಾಗುವುದು ಎಂದರು.

24 ತಿಂಗಳ ಒಳಗೆ ಖಾಸಗಿ ಅಥವಾ ಸರ್ಕಾರಿ ನೌಕರಿ ಪಡೆದರೆ ಅಂತಹ ಪದವೀಧರರಿಗೆ ಅಥವಾ ಡಿಪ್ಲೋಮಾ ಹೋಲ್ಡರ್ಸ್ಗಳಿಗೆ ಹಣ ಪಾವತಿ ಮಾಡಲಾಗುವುದಿಲ್ಲ. ನಿರುದ್ಯೋಗಿ ಅಂತಾ ಅರ್ಜಿ ಹಾಕಿ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಹಣ ಪಾವತಿ ಮಾಡಲಾಗುತ್ತದೆ. ನೋಂದಣಿ ಮಾಡಿಕೊಂಡ 24 ತಿಂಗಳವರೆಗೆ ಮಾತ್ರ ಭತ್ಯೆ ನೀಡಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಯುವ ನಿಧಿ ಅರ್ಜಿ ಸಲ್ಲಿಕೆಗೆ ಅರ್ಜಿ ಕರೆದ 6 ತಿಂಗಳವರೆಗೆ ಅವಕಾಶ ಇರಲಿದೆ. ದುರ್ಬಳಕೆ ತಡೆಯಲು ಕೆಲವು ಷರತ್ತುಗಳನ್ನು ವಿಧಿಸುತ್ತಿದ್ದೇವೆ. 24 ತಿಂಗಳೊಳಗೆ ಖಾಸಗಿ ಅಥವಾ ಸರ್ಕಾರಿ ನೌಕರಿ ಪಡೆದರೆ ಇಲ್ಲ. ಅಂಥವರಿಗೆ ಯುವನಿಧಿ ಯೋಜನೆ ಹಣ ನೀಡುವುದನ್ನು ನಿಲ್ಲಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕೃತವಾಗಿ ಜಾರಿ ಮಾಡಿ ಘೋಷಣೆ ಮಾಡಿದರು. ಇಂದು(ಜೂನ್ 02) ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ, ಮಹಿಳೆಯರಿಗೆ ಉಚಿತ ಬಸ್ ಯೋಜನೆ ಜಾರಿ ಬಗ್ಗೆ ವಿವರಿಸಿದರು. 5 ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿ ಮಾಡಬೇಕು ಎಂದು ತೀರ್ಮಾನ ಮಾಡಲಾಗಿದ್ದು, ಯಾವುದೇ ಜಾತಿ, ಧರ್ಮ, ಭಾಷೆ ಬೇಧವಿಲ್ಲದೇ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು